ನಿಮ್ಮ ಆಟ ಮುಗಿಯಿತು; ಬಜೆಟ್ ಮಂಡನೆ ಬೆನ್ನಲ್ಲೇ ಅಖಿಲೇಶ್ ಯಾದವ್ ಹೇಳಿಕೆ
ಲಕ್ನೋ, ಫೆಬ್ರವರಿ 22: ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರ ಸೋಮವಾರ ಉತ್ತರ ಪ್ರದೇಶ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಬಜೆಟ್ ಮಂಡನೆ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಬಜೆಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಡವರ ಹಾಗೂ ರೈತರ ನಿರೀಕ್ಷೆಗಳನ್ನು ಈ ಬಜೆಟ್ ಪೂರೈಸಿಲ್ಲ ಎಂದು ಆರೋಪಿಸಿದ್ದಾರೆ. ಬಡವರು ಹಾಗೂ ರೈತರು ದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದರು. ಆದರೆ ಅವರ ನಿರೀಕ್ಷೆಗಳು ಈಡೇರಿಲ್ಲ. ಈಗ ಸರ್ಕಾರಕ್ಕೆ ಸಮಯವಿಲ್ಲ ಹಾಗೂ ರಾಜ್ಯದ ಜನರು ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರ ಏನೇನು ಮಾಡಿದೆ ಎಂಬುದನ್ನು ನೋಡಿದ್ದಾರೆ. ಈಗ ನಿಮ್ಮ ಆಟ ಮುಗಿದಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಐದನೇ ರಾಜ್ಯ ಬಜೆಟ್ ಅನ್ನು ಉತ್ತರ ಪ್ರದೇಶ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಸೋಮವಾರ ಮಂಡನೆ ಮಾಡಿದ್ದಾರೆ. ಯೋಗಿ ಆದಿತ್ಯಾನಾಥ್ ಸರ್ಕಾರದ ಐದನೇ ಹಾಗೂ ಕೊನೆ ಬಜೆಟ್ ಇದಾಗಲಿದೆ. ಅವರ ಆಟ ಮುಗಿದಿದೆ ಎಂದು ಅಖಿಲೇಶ್ ಯಾದವ್ ಟೀಕಿಸಿದ್ದಾರೆ.

ಬಜೆಟ್ ನಂತರದ ಸಮಾವೇಶದಲ್ಲಿ ಸಿಎಂ ಯೋಗಿ ಆದಿತ್ಯಾನಾಥ್ ಬಜೆಟ್ ನಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳನ್ನು ಅಭಿನಂದಿಸಿದ್ದರು. ಉತ್ತರ ಪ್ರದೇಶವನ್ನು ಸ್ವಾವಲಂಬಿ ಮಾಡುವ ಹಾಗೂ ಎಲ್ಲಾ ವರ್ಗದ ಜನರಿಗೆ ಉದ್ಯೋಗ ನೀಡುವ ಉದ್ದೇಶದೊಂದಿಗೆ ಈ ಬಜೆಟ್ ರೂಪಿಸಲಾಗಿದೆ ಎಂದು ಹೇಳಿದರು.
ಫೆ.18ರಿಂದ ಆರಂಭಗೊಂಡಿರುವ ಬಜೆಟ್ ಅಧಿವೇಶನ ಮಾರ್ಚ್ 10ರವರೆಗೂ ನಡೆಯಲಿದೆ. ಇದೇ ಮೊದಲ ಬಾರಿಗೆ ಕಾಗದರಹಿತ ಬಜೆಟ್ ಮಂಡನೆ ಮಾಡಿದ್ದು, ಕಾಗದರಹಿತ ಬಜೆಟ್ ಮಂಡಿಸಿದ ಮೊದಲ ರಾಜ್ಯ ಎಂದೂ ಕರೆಸಿಕೊಂಡಿದೆ.












Click it and Unblock the Notifications