ಪಿತ್ರಾರ್ಜಿತ ಆಸ್ತಿಯನ್ನು RSSಗೆ ದಾನಮಾಡಿದ ಮಾಜಿ ಸಮಾಜವಾದಿ ಪಕ್ಷದ ಮುಖಂಡ
ಲಕ್ನೋ, ನ 30: ಉತ್ತರಪ್ರದೇಶದ ಪ್ರಭಾವಿ ನಾಯಕ, ಸಮಾಜವಾದಿ ಪಕ್ಷದಿಂದ ಉಚ್ಚಾಟಿತ ಅಮರ್ ಸಿಂಗ್, ತಮ್ಮ ಹದಿನೈದು ಕೋಟಿಗೂ ಅಧಿಕ ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ದಾನವಾಗಿ ನೀಡಿದ್ದಾರೆ.
ತಮ್ಮ ರಾಜಕೀಯ ಜೀವನದುದ್ದಕ್ಕೂ ಆರ್ ಎಸ್ ಎಸ್ ಆನ್ನು ಕೋಮುವಾದಿ ಎಂದು ಜರಿಯುತ್ತಿದ್ದ ಅಮರ್ ಸಿಂಗ್, ಬದಲಾದ 'ರಾಜಕೀಯ'ದಲ್ಲಿ ತಮ್ಮ ಆಸ್ತಿಯನ್ನು ದಾನನೀಡಿರುವುದ ಹಿಂದೆ, ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಇವರಿಗಿರುವ ಕಣ್ಣು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಉತ್ತರಪ್ರದೇಶದ ಅಜಂಗಢ ಜಿಲ್ಲೆಯ ತರ್ವಾನ್ ಗ್ರಾಮದಲ್ಲಿರುವ ತಮ್ಮ ಪೂರ್ವಜರ ಮನೆ ಮತ್ತು ಜಮೀನನ್ನು ಆರ್ ಎಸ್ ಎಸ್ ಸಹಸಂಸ್ಥೆಯಾಗಿರುವ ಸೇವಾಭಾರತಿ ಸಂಸ್ಥೆಗೆ ಅಮರ್ ಸಿಂಗ್ ದಾನ ಮಾಡಿದ್ದಾರೆ.

ಸೇವಾಭಾರತಿ ಸಂಸ್ಥೆ ಸಮಾಜಮುಖಿ ಕೆಲಸವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ನನ್ನ ಪೂರ್ವಜರ ಆಸ್ತಿಯನ್ನು ಮನಃಪೂರ್ವಕವಾಗಿ ದಾನ ಮಾಡುತ್ತಿದ್ದೇನೆ. ತಂದೆಯ ಸ್ಮರಣಾರ್ಥ ಏನಾದರೂ ಮಾಡಬೇಕು ಎನ್ನುವ ನನ್ನ ಕನಸು ಈ ಮೂಲಕ ನೆರವೇರಿದಂತಾಗಿದೆ ಎಂದು ಅಮರ್ ಸಿಂಗ್ ಹೇಳಿದ್ದಾರೆ.
2019ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿ ಟಿಕೆಟ್ ಪಡೆದು ಅಮರ್ ಸಿಂಗ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಬಿಜೆಪಿಯ ಮಿತ್ರಪಕ್ಷ ಸುಹೆಲ್ದೆವ್ ಭಾರತೀಯ ಸಮಾಜ ಪಾರ್ಟಿ(ಎಸ್ ಬಿ ಎಸ್ ಪಿ)ಯಿಂದ ಸ್ಪರ್ಧಿಸಲು ಅಮರ್ ಸಿಂಗ್ ಗೆ ಆಹ್ವಾನ ಸಿಗುವ ಸಾಧ್ಯತೆಯಿದೆ.
ಆಗಸ್ಟ್ ತಿಂಗಳಲ್ಲಿ ಪ್ರಧಾನಿ ಮೋದಿಯವರಿದ್ದ ಕಾರ್ಯಕ್ರಮದಲ್ಲಿ ಅಮರ್ ಸಿಂಗ್ ಕಾಣಿಸಿಕೊಂಡಿದ್ದರು. ನಂತರ ಯುಪಿ ಸಿಎಂ ಯೋಗಿ ಆದಿತ್ಯನಾಥ್ ರನ್ನು ಭೇಟಿ ಮಾಡಿದ್ದ ಸಿಂಗ್, ಎಸ್ಪಿ ಮತ್ತು ಬಿಎಸ್ಪಿ ಒಂದೇ ನಾಣ್ಯದ ಎರಡು ಮುಖಗಳು. ನಾನು ಮೋದಿ ಹಾಗೂ ಆದಿತ್ಯನಾಥ್ ರನ್ನು ಬೆಂಬಲಿಸುವೆ ಎಂದು ಹೇಳಿದ್ದರು.












Click it and Unblock the Notifications