ಯುಪಿ: ಅಜಂಖಾನ್ಗೆ ಮತ್ತೊಂದು ಸಂಕಷ್ಟ: ಪ್ರಮಾಣವಚನ ಸ್ವೀಕಾರಕ್ಕೆ ಕೋರ್ಟ್ ಅಡ್ಡಿ
ಲಕ್ನೋ ಮಾರ್ಚ್ 29: ಸಮಾಜವಾದಿ ಪಕ್ಷದ ಪ್ರಬಲ ವ್ಯಕ್ತಿ ಮತ್ತು ರಾಂಪುರ ನಗರದಿಂದ ಹೊಸದಾಗಿ ಆಯ್ಕೆಯಾದ ಶಾಸಕ ಅಜಂ ಖಾನ್ ಅವರ ಸಮಸ್ಯೆಗಳು ಕಡಿಮೆಯಾಗುವಂತೆ ಕಾಣಿಸುತ್ತಿಲ್ಲ. ಜೈಲಿನಲ್ಲಿದ್ದುಕೊಂಡೆ ಉತ್ತರಪ್ರದೇಶ ವಿಧಾನಸಭೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಮತ್ತೆ ಆಯ್ಕೆಯಾದ ಅಜಂ ಖಾನ್ ಗೆ ಸಂಕಷ್ಟಗಳ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ. ಚುನಾವಣೆಯಲ್ಲಿ ಗೆದ್ದರೂ ಅವರಿಗೆ ವಿಧಾನಸಭೆಗೆ ಹೋಗಿ ಪ್ರಮಾಣ ವಚನ ಸ್ವೀಕರಿಸಲು ಆಗುತ್ತಿಲ್ಲ.
ಪ್ರಸ್ತುತ ಜೈಲಿನಲ್ಲಿರುವ ರಾಂಪುರ ನಗರದ ನೂತನ ಶಾಸಕರಾಗಿ ಆಯ್ಕೆಯಾದ ಅಜಂಖಾನ್ ಅವರು ಪ್ರಮಾಣ ವಚನ ಸ್ವೀಕಾರಕ್ಕಾಗಿ ವಿಧಾನಸಭೆಗೆ ಹೋಗಲು ಅನುಮತಿ ಕೋರಿದ್ದರು. ಆದರೆ ಅಜಂ ಖಾನ್ ಅವರು ಸಲ್ಲಿಸಿದ್ದ ಜೈಲು ಆಡಳಿತದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಜೊತೆಗೆ ಪ್ರಮಾಣವಚನ ಸ್ವೀಕಾರಕ್ಕೂ ನ್ಯಾಯಾಲಯ ಅನುಮತಿಯನ್ನು ನೀಡಿಲ್ಲ.
ಅಸೆಂಬ್ಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ನ್ಯಾಯಾಲಯ ಅನುಮತಿ ತಿರಸ್ಕರಿಸಿದ ನಂತರ ಅಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ ಉತ್ತರ ಪ್ರದೇಶ ವಿಧಾನಸಭೆಗೆ ಆಗಮಿಸಿ ಶಾಸಕ ಪ್ರತಿನಿಧಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಗೆ ಗೆದ್ದ ರಾಜ್ಯದ ಎಲ್ಲಾ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಾಗುತ್ತಿದೆ. ಸೋಮವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊದಲು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಮೊದಲ ದಿನ 343 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಆದರೆ ನಹಿದ್ ಹಸನ್, ಅಜಂ ಖಾನ್ ಮತ್ತು ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿಯಂತಹ ಕೆಲವು ಶಾಸಕರು ಜೈಲಿನಲ್ಲೇ ಉಳಿದಿದ್ದಾರೆ. ಅವರ ಪ್ರಮಾಣ ವಚನ ಇನ್ನೂ ನಡೆದಿಲ್ಲ. ಗಮನಾರ್ಹವಾಗಿ, ಅಜಂ ಖಾನ್ ಅವರು ಈ ಹಿಂದೆ ರಾಂಪುರದಿಂದ ಲೋಕಸಭೆಯ ಸಂಸದರಾಗಿದ್ದರು. ಅವರು ಇತ್ತೀಚೆಗೆ ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸುಮಾರು 2 ವರ್ಷಗಳಿಂದ ಆಜಂ ಖಾನ್ ಸೀತಾಪುರ ಜೈಲಿನಲ್ಲಿದ್ದಾರೆ.
ಸಮಾಜವಾದಿ ಪಕ್ಷದ ಸರ್ಕಾರದಲ್ಲಿ ಜಲ ನಿಗಮದ ಅಧ್ಯಕ್ಷರಾಗಿದ್ದ ಅಜಂ ಖಾನ್ ರನ್ನು ಜಲ ನಿಗಮದ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಅಜಂ ಅಧ್ಯಕ್ಷರಾದ ಕೂಡಲೇ 122 ಸಹಾಯಕ ಎಂಜಿನಿಯರ್ಗಳು, 853 ಕಿರಿಯ ಎಂಜಿನಿಯರ್ಗಳು ಸೇರಿದಂತೆ ಒಟ್ಟು 1300 ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಯೋಗಿ ಸರ್ಕಾರ ಈ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಿತ್ತು. ಇದರೊಂದಿಗೆ 122 ಎಂಜಿನಿಯರ್ಗಳನ್ನು ಸೇವೆಯಿಂದ ವಜಾಗೊಳಿಸಿತ್ತು.
ಮಾರ್ಚ್ 10ರಂದು ಪ್ರಕಟಗೊಂಡ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜೈಲಿನಲ್ಲಿದ್ದುಕೊಂಡೆ ರಾಮ್ಪುರದಿಂದ ಸ್ಪರ್ಧಿಸಿದ್ದ ಅಜಂ ಖಾನ್ ದೊಡ್ಡ ಗೆಲುವು ದಾಖಲಿಸಿದ್ದಾರೆ. ರಾಂಪುರ ಸದರ್ ಕ್ಷೇತ್ರದಿಂದ ಅಜಂ ಖಾನ್ 10ನೇ ಬಾರಿಗೆ ಗೆಲುವು ಸಾಧಿಸುವ ಮೂಲ ದಾಖಲೆ ಬರೆದಿದ್ದಾರೆ. ಬಿಜೆಪಿ ಈ ಸ್ಥಾನಕ್ಕೆ ಆಕಾಶ್ ಸಕ್ಸೇನಾ ಅವರಿಗೆ ಟಿಕೆಟ್ ನೀಡಿತ್ತು. ಎಷ್ಟೆಲ್ಲಾ ಪ್ರಯತ್ನ ಪಟ್ಟರೂ ಈ ಸ್ಥಾನ ಬಿಜೆಪಿಗೆ ಒಲಿಯಲಿಲ್ಲ.
Recommended Video