ಬುವಾ-ಭತೀಜಾರದ್ದು ಅಪವಿತ್ರ ಮೈತ್ರಿ : ಯೋಗಿ ಆದಿತ್ಯನಾಥ್ ವಾಗ್ದಾಳಿ
ಲಕ್ನೋ, ಜನವರಿ 12 : ಬುವಾ-ಭತೀಜಾ (ಸೋದರತ್ತೆ-ಅಳಿಯ) ಅವರು ಮಾಡಿಕೊಂಡಿರುವ ಮೈತ್ರಿಕೂಟ ಜಾತಿವಾದಿ, ಅವಕಾಶವಾದಿ ಮತ್ತು ಭ್ರಷ್ಟವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಾಗ್ದಾಳಿ ಮಾಡಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಮತ್ತು ಬಹುಜನ ಸಮಾಜ ಪಕ್ಷದ ನಾಯಕಿ ಕುಮಾರಿ ಮಾಯಾವತಿ ಅವರು, ಲೋಕಸಭೆ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದ ನಂತರ ಬಿಜೆಪಿ ನಾಯಕರಿಂದ ಪುಂಖಾನುಪುಂಖವಾಗಿ ಪ್ರತಿಕ್ರಿಯೆಗಳು ಬರುತ್ತಿವೆ.
ಲೋಕಸಭೆ 2019 : ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಬಿಜೆಪಿಗೆ ಮುಳುವಾಗುವುದೆ?
ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಯೋಗಿ ಆದಿತ್ಯನಾಥ್, ಅವರಿಬ್ಬರಿಗೂ ಅಭಿವೃದ್ಧಿ ಅಥವಾ ಉತ್ತಮ ಆಡಳಿತ ಬೇಕಾಗಿಲ್ಲ. ಉತ್ತರ ಪ್ರದೇಶದ ಜನರಿಗೆ ಎಲ್ಲ ತಿಳಿದಿದೆ, ಈ ಅಪವಿತ್ರ ಮೈತ್ರಿಗೆ ಇಲ್ಲಿನ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ನುಡಿದರು.
ಮಾಯಾವತಿ ಅವರನ್ನು ಸೋದರತ್ತೆ ಎಂದು ಕರೆದಿರುವ ಅಖಿಲೇಶ್ ಯಾದವ್ ಅವರು, ಸೊಕ್ಕಿನಿಂದ ಮೆರೆಯುತ್ತಿರುವ ಕೇಸರಿ ಪಕ್ಷಕ್ಕೆ ಮಣ್ಣು ಮುಕ್ಕಿಸಲೆಂದೇ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿವೆ ಎಂದಿದ್ದಾರೆ. ಈ ಬಾರಿ 80 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಎರಡೂ ಪಕ್ಷಗಳು ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.
ಬಿಜೆಪಿಯನ್ನು ಮಾತ್ರವಲ್ಲ ಕಾಂಗ್ರೆಸ್ಸನ್ನು ಕೂಡ ಮಾಯಾವತಿ ಅವರು ತಮ್ಮ ವೈರಿಯೆಂದೇ ತಿಳಿದಿದ್ದಾರೆ. ಹೀಗಾಗಿ ಕಾಂಗ್ರೆಸ್ಸನ್ನು ಮೈತ್ರಿಕೂಟದಿಂದ ಹೊರಗಿಟ್ಟಿರುವ ಅವರು, ಎರಡೂ ಪಕ್ಷಗಳ ನೀತಿ ಒಂದೇ ಇದೆ, ಎರಡೂ ಪಕ್ಷಗಳು ರಕ್ಷಣಾ ಡೀಲ್ ಗೆ ಸಂಬಂಧಿಸಿದಂತೆ ಭ್ರಷ್ಟಾಚಾರದಲ್ಲಿ ತೊಡಗಿವೆ. ಹಿಂದೆ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿದ್ದರೆ, ಈಗ ಬಿಜೆಪಿ ಸರಕಾರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ವ್ಯಾಖ್ಯಾನಿಸಿದ್ದಾರೆ.
ಕಾಂಗ್ರೆಸ್ಸಿಗೆ ಅಮೇಥಿ, ರಾಯ್ ಬರೇಲಿಯನ್ನು ಭಿಕ್ಷೆ ಕೊಟ್ಟರೆ ಮಾಯಾವತಿ?
ಕೆಲ ಸಮೀಕ್ಷೆಗಳ ಪ್ರಕಾರ, ಮೈತ್ರಿಕೂಟದ ಮೇಲೆ ತೀವ್ರ ವಾಗ್ದಾಳಿ ಮಾಡಿರುವ ಯೋಗಿ ಆದಿತ್ಯನಾಥ್ ಅವರು ಜನಪ್ರಿಯತೆಯ ಗ್ರಾಫ್ ಉತ್ತರ ಪ್ರದೇಶದಲ್ಲಿ ಕುಸಿಯುತ್ತಿದೆ ಮತ್ತು ಅಖಿಲೇಶ್ ಯಾದವ್ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಆದರೆ, ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಯೋಗಿ ಆದಿತ್ಯನಾಥ್ ಅವರು, ಈ ಬಾರಿಯೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.