ಗಾಜಿಯಾಬಾದ್ ದಾಳಿ ವಿಡಿಯೋ: ಪತ್ರಕರ್ತೆ ರಾಣಾ ಆಯೂಬ್ಗೆ ನಿರೀಕ್ಷಣಾ ಜಾಮೀನು ಮಂಜೂರು
ಲಕ್ನೋ, ಜೂ.21: ಗಾಜಿಯಾಬಾದ್ನಲ್ಲಿ ಮುಸ್ಲಿಮ್ ಸಮುದಾಯದ ವ್ಯಕ್ತಿಯ ಗಡ್ಡವನ್ನು ಕೆಲವು ದಾಳಿಕೋರರು ಕತ್ತರಿಸಿದ್ದಾರೆ ಎಂಬ ಟ್ವೀಟ್ಗೆ ಸಂಬಂಧಿಸಿದಂತೆ ಪತ್ರಕರ್ತೆ ರಾಣಾ ಆಯೂಬ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್ಐಆರ್ಗೆ ಸಂಬಂಧಿಸಿದಂತೆ ಸೋಮವಾರ ಬಾಂಬೆ ಹೈಕೋರ್ಟ್ ಆಯೂಬ್ಗೆ ನಾಲ್ಕು ವಾರಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ವೃದ್ಧರೊಬ್ಬರ ಮೇಲೆ ಹಲ್ಲೆ ಆರೋಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದ ಟ್ವೀಟ್ಗಳಿಗೆ ಸಂಬಂಧಿಸಿದಂತೆ ಟ್ವಿಟ್ಟರ್, ಹಲವಾರು ಕಾಂಗ್ರೆಸ್ ಮುಖಂಡರು ಮತ್ತು ಪತ್ರಕರ್ತರ ವಿರುದ್ದ ದೂರು ದಾಖಲು ಮಾಡಿತ್ತು. ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ನರೇಶ್ ಸಿಂಗ್ ಈ ಬಗ್ಗೆ ದೂರು ನೀಡಿದ್ದರು. ಈ ಪ್ರಕಣರಕ್ಕೆ ಸಂಬಂಧಿಸಿ ರಾಣಾ ಆಯೂಬ್ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಕೋರಿದ್ದರು.
ಗಾಜಿಯಾಬಾದ್ ದಾಳಿ ಪೋಸ್ಟ್: ಟ್ವಿಟ್ಟರ್, ಪತ್ರಕರ್ತರ ವಿರುದ್ದ ರಾತ್ರೋರಾತ್ರಿ ಎಫ್ಐಆರ್
ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಡಿ ನಾಯ್ಕ್, ''ಅರ್ಜಿದಾರೆಯನ್ನು ಬಂಧಿಸಿದರೆ ರೂ. 25,000 ಬಾಂಡ್ ಹಾಗೂ ಒಬ್ಬರು ಅಥವಾ ಇಬ್ಬರ ಭದ್ರತೆ ಪಡೆದು ಬಿಡುಗಡೆ ಮಾಡಬೇಕು. ಈ ಜಾಮೀನು ನಾಲ್ಕು ವಾರಗಳ ಕಾಲ ಇರಲಿದೆ,'' ಎಂದು ಆದೇಶದಲ್ಲಿ ತಿಳಿಸಿದೆ.
ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ವಿವಿಧ ಸೆಕ್ಷನ್ಗಳ ಅಡಿ ಎಲ್ಲಾ ಅಪರಾಧಗಳಿಗೂ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಇನ್ನು ''ಈ ಟ್ವಿಟರ್ನಲ್ಲಿ ಹಂಚಿಕೆ ಮಾಡಲಾದ ವಿಡಿಯೊ ನೈಜತೆ ತಿಳಿದ ತಕ್ಷಣ ಆಯೂಬ್ ತಮ್ಮ ಟ್ವೀಟ್ ಅಳಿಸಿಹಾಕಿದ್ದಾರೆ. ಪ್ರಸ್ತುತ ಪತ್ರಕರ್ತೆಯಾಗಿರುವುದರಿಂದ ಬಂಧನಕ್ಕೆ ಒಳಗಾಗಬಹುದು ಎಂದು ಆಯೂಬ್ ಭೀತಿಗೊಳಗಾಗಿದ್ದಾರೆ,'' ಎಂದು ಹಿರಿಯ ವಕೀಲ ಮಿಹಿರ್ ದೇಸಾಯಿ ವಾದಿಸಿದ್ದಾರೆ.
ಜೂನ್ 5 ರಂದು ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಲೋನಿಯಲ್ಲಿ ವಯಸ್ಸಾದ ಮುಸ್ಲಿಂ ವ್ಯಕ್ತಿಯು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿದ್ದಾಗ ಆ ವಯಸ್ಸಾದ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಎಂದು ಮಂಗಳವಾರ ಹಲವಾರು ಸುದ್ದಿ ವರದಿಗಳ ಆಧಾರದ ಮೇಲೆ ದಿ ವೈರ್ ವರದಿಯೊಂದನ್ನು ಮಾಡಿತ್ತು. ಅಬ್ದುಲ್ ಸಮದ್ ಎಂಬ 72 ವರ್ಷದ ವ್ಯಕ್ತಿ ಜೂನ್ 5 ರಂದು ವಿಡಿಯೋ ಒಂದರಲ್ಲಿ, ''ಕೆಲವು ಜನರು ಆಟೋದಲ್ಲಿ ಬರುವಂತೆ ಕರೆದು ಬಳಿಕ ಬೇರೆಯೇ ಸ್ಥಳಕ್ಕೆ ಕರೆದೊಯ್ದು ಜೈ ಶ್ರೀ ರಾಮ್ ಎಂದು ಜಪಿಸುವಂತೆ ಒತ್ತಾಯಿಸಿ ಥಳಿಸಿದ್ದಾರೆ,'' ಎಂದು ಆರೋಪಿಸಿದ್ದರು.
ಈ ವಿಚಾರದಲ್ಲಿ ಟ್ವೀಟ್ ಮಾಡಿದ್ದ, ಸುದ್ದಿ ಪ್ರಕಟಿಸಿದ್ದ ಆಲ್ಟ್ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೈರ್, ಪತ್ರಕರ್ತ ರಾಣಾ ಅಯೂಬ್, ಮಾಧ್ಯಮ ಸಂಸ್ಥೆ ದಿ ವೈರ್, ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ ಮತ್ತು ಶಾಮಾ ಮೊಹಮ್ಮದ್, ಬರಹಗಾರ ಸಬಾ ನಖ್ವಿ ಮತ್ತು ಸಾಮಾಜಿಕ ಮಾಧ್ಯಮ ಟ್ವಿಟ್ಟರ್ನ ಐಎನ್ಸಿ ಮತ್ತು ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾದ ವಿರುದ್ದ ರಾತ್ರೋರಾತ್ರಿ ಎಫ್ಐಆರ್ ದಾಖಲು ಮಾಡಲಾಗಿತ್ತು.
''ಸಮಾಜದಲ್ಲಿ ಉತ್ತಮ ಸ್ಥಾನಗಳನ್ನು ಹೊಂದಿರುವವರು ಸತ್ಯವನ್ನು ಪ್ರಚಾರ ಮಾಡಲು ಪ್ರಯತ್ನಿಸುತ್ತಾರೆ ಮತ್ತು ಮಾಹಿತಿಯನ್ನು ನೀಡುವಾಗ ವಿವೇಚನೆಯನ್ನು ಬಳಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಆರೋಪಿತರಿಗೆ ಸಮಾಜದ ಬಗ್ಗೆ ಕರ್ತವ್ಯವಿದೆ. ಈ ಸಂದರ್ಭದಲ್ಲಿ, ಟ್ವೀಟ್ಗಳನ್ನು ಪರಿಶೀಲಿಸಲಾಗಿಲ್ಲ, ಸುಳ್ಳಿನ ಹೊರತಾಗಿಯೂ ಘಟನೆಯ ಕೋಮು ಬಣ್ಣವನ್ನು ನೀಡಿದೆ. ಈ ಟ್ವೀಟ್ಗಳನ್ನು ಸಮಾಜದಲ್ಲಿ ಶಾಂತಿಗೆ ಭಂಗ ತರುವ ಉದ್ದೇಶದಿಂದ ಮಾಡಲಾಗಿದೆ. ಈ ಟ್ವೀಟ್ಗಳು ಉದ್ವಿಗ್ನತೆಯನ್ನು ಉಂಟುಮಾಡಿದೆ ಮಾತ್ರವಲ್ಲದೆ ಉತ್ತರ ಪ್ರದೇಶದ ನಿರ್ದಿಷ್ಟ ಸಮುದಾಯದಲ್ಲಿ ಭಯವನ್ನು ಉಂಟುಮಾಡಿದೆ,'' ಎಂದು ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಪೊಲೀಸರು ''ಇದು ವೈಯಕ್ತಿಕ ವಿಚಾರವಾಗಿದೆ. ಈ ಹಲ್ಲೆಗೊಳಗಾದ ವ್ಯಕ್ತಿಯು ತವೀಜ್ (ತಾಯಿತ) ನೀಡಿದ್ದು ಇದರಿಂದಾಗಿ ತಮ್ಮ ಕುಟುಂಬ ಸದಸ್ಯರಿಗೆ ಗರ್ಭಪಾತವಾಗಿದೆ ಎಂದು ಭಾವಿಸಿ ಈ ಆರೋಪಿಗಳು ಹಲ್ಲೆ ನಡೆಸಿದ್ದಾರೆ,'' ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)