ಐದು ರಾಜ್ಯಗಳ ಚುನಾವಣೆ: ಕೊನೆಗೂ ಮೌನ ಮುರಿದ ಯೋಗಿ ಆದಿತ್ಯನಾಥ್
Recommended Video

ಲಕ್ನೋ, ಡಿಸೆಂಬರ್ 13: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೊನೆಗೂ ಮೌನ ಮುರಿದಿದ್ದಾರೆ.
"ಬಿಜೆಪಿ ಕಠಿಣ ಸ್ಪರ್ಧೆ ನೀಡಿದೆ. ನಾವು ಸುಳ್ಳುಗಳ ವಿರುದ್ಧ ಹೋರಾಡಿದ್ದೆವು. ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕೆಲವರು ನಮ್ಮ ವಿರುದ್ಧ ಸುಳ್ಳನ್ನೇ ಪ್ರಚಾರ ಮಾಡಿದರು. ಆದರೂ ನಾವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಉತ್ತಮವಾಗಿ ಹೋರಾಡಿದೆವು" ಎಂದು ಯೋಗಿ ಪ್ರತಿಕ್ರಿಯಿಸಿದ್ದಾರೆ.
ಐದು ರಾಜ್ಯಗಳ ಚುನಾವಣೆಯಲ್ಲಿ ಅಗ್ರಂಕ್ತಿಯ ಸ್ಟಾರ್ ಪ್ರಚಾರಕರಾಗಿದ್ದ ಯೋಗಿ ಆದಿತ್ಯನಾಥ್, ಸಾಕಷ್ಟು rally ಗಳನ್ನು ನಡೆಸಿದ್ದರು.
ಐದು ರಾಜ್ಯಗಳಲ್ಲಿ ತೆಲಂಗಾಣ ಟಿಆರ್ ಎಸ್ ತೆಕ್ಕೆಗೆ ಒಲಿದರೆ, ಮಿಜೋರಾಂ ಎಂಎನ್ ಎಫ್ ಪಾಲಾಗಿದೆ. ಉಳಿದಂತೆ ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದು, ಅಧಿಕಾರದ ಹೊಸ್ತಿಲಲ್ಲಿದೆ.

ಏನಂದರು ಯೋಗಿ?
"ಜನರು ನಮಗೆ ನೀಡಿದ ಬೆಂಬಲದಿಂದ ನಾವು ಸುಲಭವಾಗಿ ಹೋರಾಡುವಂತಾಯಿತು. ಸೋಲು ಮತ್ತು ಗೆಲುವು ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗಗಳು. ನಾವು ಹೇಗೆ ಹೋರಾಡಿದ್ದೇವೆ, ನೀವು ಹೇಗೆ ಹೋರಾಡಿದ್ದೀರಿ ಎಂಬುದು ಬಹಳ ಮುಖ್ಯ. ನಾವು ಚೆನ್ನಾಗಿಯೇ ಹೋರಾಡಿದ್ದೇವೆ. ಅದಕ್ಕಾಗಿ ನಮಗೆ ಹೆಮ್ಮೆ ಇದೆ. ಬಿಜೆಪಿ ಕಠಿಣ ಸ್ಪರ್ಧೆ ನೀಡಿದೆ. ನಾವು ಸುಳ್ಳುಗಳ ವಿರುದ್ಧ ಹೋರಾಡಿದ್ದೆವು. ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕೆಲವರು ನಮ್ಮ ವಿರುದ್ಧ ಸುಳ್ಳನ್ನೇ ಪ್ರಚಾರ ಮಾಡಿದರು. ಆದರೂ ನಾವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಉತ್ತಮವಾಗಿ ಹೋರಾಡಿದೆವು" ಎಂದು ಯೋಗಿ ಬಿಜೆಪಿಯನ್ನು ಸಮರ್ಥಿಸಿಕೊಂಡರು.

ಯೋಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಭಾರತೀಯ ಜನತಾ ಪಕ್ಷದ ಪರ ಪ್ರಚಾರಕ್ಕಾಗಿ ಆಯ್ಕೆ ಮಾಡಲಾಗಿದ್ದ ಸ್ಟಾರ್ ಕ್ಯಾಂಪೇನರ್ ಗಳಲ್ಲಿ ಪ್ರಧಾನಿ ಮೋದಿ ಅವರ ನಂತರದ ಸ್ಥಾನ ಸಿಕ್ಕಿದ್ದು ಯೋಗಿ ಆದಿತ್ಯನಾಥ್ ಅವರಿಗೆ. ಮೂರು ರಾಜ್ಯಗಳಲ್ಲೂ ಯೋಗಿ ಆದಿತ್ಯನಾಥ್ ಅವರು ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಬಿಜೆಪಿ ಹಲವನ್ನು ಗೆದ್ದಿದೆ. ಯೋಗಿ ಪ್ರಚಾರ ಮಾಡಿದ ಶೇ.50 ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ಯೋಗಿಯವರ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ.

ದುಬಾರಿಯಾದ ವಿವಾದಾತ್ಮಕ ಹೇಳಿಕೆ!
'ಭಗವಾನ್ ಹನುಮಂತ ದಲಿತ ಬುಡಕಟ್ಟು ಸಮುದಾಯಕ್ಕೆ ಸೇರಿದವನು ಎಂಬ ಹೇಳಿಕೆಯನ್ನು ಯೋಗಿ ಛತ್ತೀಸ್ ಗಢದಲ್ಲಿ ನೀಡಿದ್ದರು. ತೆಲಂಗಾಣದ ಪ್ರಚಾರದ ಸಮಯದಲ್ಲಿ ನಿಜಾಮರನ್ನು ಹೊರಹಾಕಿದಂತೆ ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಅವರನ್ನೂ ಹೈದರಾಬಾದಿನಿಂದ ಹೊರಗೆ ಕಳಿಸುತ್ತೇವೆ' ಎಂದು ಯೋಗಿ ಹೇಳಿಕೆ ನೀಡಿದ್ದರು. ಇಂಥ ವಿವಾದಾಸ್ಪದ ಹೇಳಿಕೆಗಳೇ ಬಿಜೆಪಿಗೆ ದುಬಾರಿಯಾದಂತೆ ಕಾಣಿಸುತ್ತಿದೆ.

ಹೆಸರು ಬದಲಾವಣೆ ಪ್ರಹಸನ
ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಿಸುವಾದ ಯೋಗಿ ಆದಿತ್ಯನಾಥ್ ಹೇಳಿದ್ದರು. ಉತ್ತರ ಪ್ರದೇಶದಲ್ಲಿ ಅಲಹಾಬಾದ್ ಗೆ ಪ್ರಯಾಗರಾಜ್ ಮತ್ತು ಫೈಜಾಬಾದ್ ಗೆ ಅಯೋಧ್ಯೆಯೆಂದು ಮರುನಾಮಕರಣ ಮಾಡಿದ ನಂತರ ಹೈದರಾಬಾದಿನತ್ತ ಕಣ್ಣು ನೆಟ್ಟಿದ್ದರು. ಆದರೆ ತೆಲಂಗಾಣದಲ್ಲಿ ಬಿಜೆಪಿ ಕೇವಲ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವುದು ಭಾರೀ ಮುಖಭಂಗವನ್ನುಂಟು ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಯೋಗಿಯವರ ಕಾಲೆಳೆಯುವ ಕೆಲಸವೂ ಸಾಕಷ್ಟು ನಡೆಯುತ್ತಿದ್ದು, 'ಯೋಗಿ ಈಗ ಬಿಜೆಪಿ ಹೆಸರನ್ನು ಕಾಂಗ್ರೆಸ್ ಎಂದು ಬದಲಿಸಬಹುದು' ಎಂದು ಕಾಲೆಳೆದಿದ್ದಾರೆ.












Click it and Unblock the Notifications