ವಾಹನಗಳ ಮೇಲೆ ಹರಿದ ರೈಲು: ಐವರು ಸಾವು, ಓರ್ವನಿಗೆ ಗಾಯ
ಶಹಜಹಾನ್ಪುರ, ಏಪ್ರಿಲ್ 22: ರೈಲೊಂದು ವಾಹನಗಳ ಮೇಲೆ ಹರಿದಿದ್ದು ಒಂದೇ ಕುಟುಂಬದ ಮೂವರು ಸೇರಿ ಒಟ್ಟು 5 ಮಂದಿ ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ.
ಮ್ಯಾನಲ್ ಲೆವೆಲ್ ಕ್ರಾಸಿಂಗ್ ನಲ್ಲಿ ರೈಲು ವಾಹನಗಳ ಮೇಲೆ ಹರಿದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಕ್ನೊ-ಚಂಡೀಘಡ ಸೂಪರ್ ಫಾಸ್ಟ್ ಲೊಕೊಮೊಟಿವ್ ರೈಲು ವಾಹನಗಳಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ, ಇದೀಗ ಎರಡೂ ಕಡೆ ರೈಲು ಸಂಚಾರಕ್ಕೆ ವ್ಯತ್ಯಯವುಂಟಾಗಿದೆ.
ದುರ್ಘಟನೆ ನಡೆಯುವ ಸಂದರ್ಭದಲ್ಲಿ ರೈಲ್ವೆ ಹಳಿ ಸಮೀಪ ಮ್ಯಾನಲ್ ಲೆವೆಲ್ ಕ್ರಾಸಿಂಗ್ ನಲ್ಲಿ ಗೇಟು ಮುಚ್ಚದ ಕಾರಣ ಈ ಅವಘಡ ಸಂಭವಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತಪಟ್ಟವರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದು ಪ್ರತಿಯೊಬ್ಬರಿಗೂ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಲಕ್ನೊದಲ್ಲಿರುವ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಮೀರನ್ಪುರದ ಕತ್ರ ರೈಲ್ವೆ ನಿಲ್ದಾಣವನ್ನು ಇಂದು ಬೆಳಗ್ಗೆ ರೈಲು ದಾಟಿದ ಮೇಲೆ ಈ ದುರ್ಘಟನೆ ನಡೆದಿದ್ದು ರೈಲು ಎರಡು ಟ್ರಕ್, ಕಾರು ಮತ್ತು ಬೈಕ್ ಮೇಲೆ ಹರಿದಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮೃತಪಟ್ಟವರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು ಗಂಭೀರವಾಗಿ ಗಾಯಗೊಂಡ ಮತ್ತೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.
ಹಾನಿಗೀಡಾಗಿರುವ ಹಳಿಯ ಕೆಲಸ ನಡೆಯುತ್ತಿದೆ. ಮುಂದಿನ ಮೂರ್ನಾಲ್ಕು ಗಂಟೆಗಳಲ್ಲಿ ಸಂಚಾರ ಸಹಜ ಸ್ಥಿತಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಇಂದ್ರ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯ ಮುಂದುವರಿದಿದೆ ಎಂದು ರೈಲ್ವೆ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಎಂಜಿನಿಯರ್ ಗಳ ತಂಡವೊಂದು ಸ್ಥಳಕ್ಕೆ ಧಾವಿಸಿದ್ದು ದುರಸ್ತಿ ಕಾರ್ಯ ನಡೆಯುತ್ತಿದೆ.












Click it and Unblock the Notifications