ಮಥುರಾದಲ್ಲಿ ಚಹಾ ಸೇವಿಸಿದ ನಂತರ ಇಬ್ಬರು ಸಾಧುಗಳ ಸಾವು: ತನಿಖೆಗೆ ಆಗ್ರಹ
ಲಕ್ನೋ, ನವೆಂಬರ್ 22: ಉತ್ತರ ಪ್ರದೇಶದ ಮಥುರಾದಲ್ಲಿ ಚಹಾ ಸೇವಿಸಿದ ನಂತರ ಇಬ್ಬರು ಸಾಧುಗಳು ನಿಗೂಢವಾಗಿ ಸಾವನ್ನಪ್ಪಿದ್ದರೆ, ಇನ್ನೊಬ್ಬ ಸಾಧುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಲಾಬ್ ಸಿಂಗ್ ಮತ್ತು ಶ್ಯಾಮ್ ಸುಂದರ್ ಎಂಬ ಇಬ್ಬರು ಸಾಧುಗಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮಥುರಾ ಎಸ್ಎಸ್ಪಿ ಗೌರವ್ ಗ್ರೋವರ್ ಮಾತನಾಡಿ, 60 ವರ್ಷದ ಗುಲಾಬ್ ಸಿಂಗ್ ಸ್ಥಳದಲ್ಲೇ ಮೃತಪಟ್ಟರೆ, 61 ವರ್ಷದ ಸಾಧು ಶ್ಯಾಮ್ ಸುಂದರ್ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದರು.
ರಾಮ್ ಬಾಬು ಎಂದು ಗುರುತಿಸಲಾದ ಮೂರನೇ ಸಾಧು ಮಥುರಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಧುಗಳ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಪ್ರಕರಣದ ತನಿಖೆ ಆರಂಭಿಸಲಾಗಿದೆ ಎಂದು ಎಸ್ಎಸ್ಪಿ ಗೌರವ್ ಗ್ರೋವರ್ ಹೇಳಿದರು.

ಚಹಾ ಸೇವಿಸಿ ಇಬ್ಬರು ಸಾಧುಗಳು ಸಾವನ್ನಪ್ಪಿದ ಆಶ್ರಮದಲ್ಲಿ ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ ಎಂದು ಎಸ್ಎಸ್ಪಿ ತಿಳಿಸಿದರು.
ನಿಧನರಾದ ಗುಲಾಬ್ ಸಿಂಗ್ ಕೋಸಿ ಕಲನ್ ಪೊಲೀಸ್ ಠಾಣೆ ವ್ಯಾಪ್ತಿಯ ದಲೌತಾ ಗ್ರಾಮದವರಾಗಿದ್ದರೆ, ಶ್ಯಾಮ್ ಸುಂದರ್ ಮತ್ತು ರಾಮ್ ಬಾಬು ಅವರು ಗೋವರ್ಧನ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಂಥಾ ಗ್ರಾಮದ ನಿವಾಸಿಗಳಾಗಿದ್ದಾರೆ.
ಮಥುರಾ ಜಿಲ್ಲಾಧಿಕಾರಿ ಸರ್ವಜ್ಞ ರಾಮ್ ಮಿಶ್ರಾ ಖಾಸಗಿ ಮಾಧ್ಯಮಕ್ಕೆ ಮಾತನಾಡಿ, "ಇಬ್ಬರು ಸಾಧುಗಳು ಮಥುರಾ ಆಶ್ರಮದಲ್ಲಿ ಮೃತಪಟ್ಟಿದ್ದು, ಮತ್ತು ಒಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಎಸ್ಎಸ್ಪಿ ಮೃತದೇಹಗಳ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಇಬ್ಬರು ಸಾಧುಗಳ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ' ಎಂದರು. ಪ್ರಕರಣದಲ್ಲಿ ತನಿಖೆ ಆರಂಭಿಸಲಾಗಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ.












Click it and Unblock the Notifications