ಭಾರತಕ್ಕೆ ನನ್ನ ಹಣಕ್ಕಿಂತ ನನ್ನ ಮೇಲೆಯೇ ಹೆಚ್ಚು ಗಮನ: ಮಲ್ಯ
ಲಂಡನ್, ಡಿಸೆಂಬರ್ 15: 'ನನ್ನ ಹಣವನ್ನು ಮರಳಿ ಪಡೆದುಕೊಳ್ಳುವುದಕ್ಕಿಂತಲೂ ಭಾರತ ನನ್ನ ಮೇಲೆಯೇ ಹೆಚ್ಚು ಗಮನ ಕೇಂದ್ರೀಕರಿಸಿದೆ' ವಿಜಯ್ ಮಲ್ಯ ಹೇಳಿದ್ದಾರೆ.
ಲಂಡನ್ನಲ್ಲಿ ಎನ್ಡಿ ಟಿವಿ ಜೊತೆ ಮಾತನಾಡಿದ ಅವರು, ಖಂಡಿತವಾಗಿಯೂ ಭಾರತವು ಸಾರ್ವಜನಿಕ ಹಣವನ್ನು ಮರಳಿ ಪಡೆದುಕೊಳ್ಳುವುದಕ್ಕಿಂತ ನನ್ನನ್ನು ದೇಶಕ್ಕೆ ಕರೆಸಿಕೊಳ್ಳುವುದರ ಬಗ್ಗೆಯೇ ಗಮನ ಹರಿಸಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ನನ್ನ ವೈಯಕ್ತಿಕ ಲಾಭದ ಕಾರಣಕ್ಕಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ಸೂಕ್ತವಾಗಿ ಕಾರ್ಯನಿರ್ವಹಿಸಿಲ್ಲ ಎಂದು ಹೇಳುವುದು ದುರದೃಷ್ಟಕರ.

2016ರ ಆರಂಭದಿಂದಲೂ ನಾನು ನನ್ನ ಸಾಲದ ಹಣವನ್ನು ಹಿಂದಿರುಗಿಸುವ ಕಾರ್ಯ ಆರಂಭಿಸಿದ್ದೆ. ಸುಪ್ರೀಂಕೋರ್ಟ್ ಮುಂದೆಯೂ ಅದನ್ನು ಹೇಳಿದ್ದೆ. ಸಿಬಿಐ ಮತ್ತು ಇ.ಡಿಗಳಿಗೆ ನನ್ನನ್ನು ಆರೋಪಿಯನ್ನಾಗಿ ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ನಾನು ನೀಡಿದ ಸಾಲ ಮರಳಿಸುವಿಕೆಯ ಎಲ್ಲ ಆಫರ್ಗಳನ್ನೂ ಬ್ಯಾಂಕುಗಳು ತಿರಸ್ಕರಿಸಿದ್ದವು.
ಇಂದು ಬ್ಯಾಂಕುಗಳು ಮತ್ತು ಇ.ಡಿ. ನನ್ನ ಆಸ್ತಿಗಾಗಿ ಹೊಡೆದಾಡಿಕೊಳ್ಳುತ್ತಿವೆ. ಹೀಗಾಗಿಯೇ ನಾನು ನನ್ನ ಸಾಲ ವಾಪಸಾತಿ ಮಾಡುವುದಾಗಿ ಕರ್ನಾಟಕ ಹೈಕೋರ್ಟ್ ಮುಂದೆ ತಿಳಿಸಿದ್ದೆ. ಕೋರ್ಟ್ ನನ್ನ ಆಸ್ತಿಯನ್ನು ಮಾರಿ ಬ್ಯಾಂಕುಗಳಿಗೆ ಮತ್ತು ಇತರೆ ಸಾಲಗಾರರಿಗೆ ಮರಳಿಸಬಹುದು ಎಂದು ಮಲ್ಯ ಹೇಳಿದ್ದಾರೆ.
ದೇಶದಿಂದ ಹೊರಬಂದು ತಲೆಮರೆಸಿಕೊಂಡಿರುವ ಲಲಿತ್ ಮೋದಿ ಮತ್ತು ನೀರವ್ ಮೋದಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಲಲಿತ್ ಮೋದಿ ಈಗಷ್ಟೇ ಭಾರಿ ವೈಯಕ್ತಿಕ ದುರಂತಕ್ಕೆ ಒಳಗಾಗಿದ್ದಾರೆ (ಲಲಿತ್ ಮೋದಿ ಅವರ ಪತ್ನಿ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರು). ಹೀಗಾಗಿ ನಾನು ಮಾತನಾಡುವುದಿಲ್ಲ. ನೀರವ್ ಮೋದಿ ಬಗ್ಗೆ ನನಗೇನೂ ತಿಳಿದಿಲ್ಲ ಎಂದಿದ್ದಾರೆ.












Click it and Unblock the Notifications