ಕಾಶ್ಮೀರದ ಮಕ್ಕಳು, ಮಹಿಳೆಯರ ಬಗ್ಗೆ ಆತಂಕವಿದೆ ಎಂದ ಮಲಾಲಾ
ಲಂಡನ್, ಆಗಸ್ಟ್ 08: ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇವನ್ನಾಗಿ ಘೋಷಿಸಿ, ಈ ರಾಜ್ಯಕ್ಕೆ ವಿಷೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ಕ್ರಮದ ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್ಜಾಯ್ ಆತಂಕ ವ್ಯಕ್ತಪಡಿಸಿದ್ದಾರೆ.
22 ವರ್ಷ ವಯಸ್ಸಿನ ಮಲಾಲಾ ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ನಿಯಂತ್ರಣ ಮತ್ತು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡುವಂತೆ ಚಿಕ್ಕ ವಯಸ್ಸಿನಲ್ಲೇ ಹೋರಾಟಕ್ಕಿಳಿದಿದ್ದರು. 2012 ರಲ್ಲಿ ತಾಲಿಬಾನಿಗಳ ಗುಂಡಿನ ದಾಳಿಗೊಳಗಾಗಿದ್ದ ಮಲಾಲಾ ನಂತರ ಲಂಡನ್ನಿನಲ್ಲಿ ಚಿಕಿತ್ಸೆ ಪಡೆದು ಬದುಕುಳಿದಿದ್ದರು. ಸದ್ಯ ಲಂಡನ್ನಿನಲ್ಲೇ ವಾಸವಿರುವ ಮಲಾಲ ತಮ್ಮ 17 ನೇ ವಯಸ್ಸಿನಲ್ಲಿಯೇ ನೊಬೆಲ್ ಶಾಂತಿ ಪ್ರಶಸ್ತಿ ಪಡೆದು, ಈ ಸಾಧನೆ ಮಾಡಿದ ಅತೀ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಶ್ರೀನಗರ ವಿಮಾನ ನಿಲ್ದಾಣದಲ್ಲಿ ಗುಲಾಂ ನಬಿ ಆಜಾದ್ಗೆ ಆಘಾತ
ಕಾಶ್ಮೀರದ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ನನಗೆ ಆತಂಕವಿದೆ ಎಂದು ಮಲಾಲಾ ಅವರು ಬರೆದಿರುವ ಪತ್ರದ ಯಥಾವತ್ ಅನುವಾದ ಇಲ್ಲಿದೆ...
ಕಾಶ್ಮೀರದಲ್ಲಿ ಸಂಘರ್ಷ ಮುಗಿದಿಲ್ಲ
"ನಾನು ಮಗುವಾಗಿದ್ದಾಗಿನಿಂದಲೂ ಕಾಶ್ಮೀರದ ಜನರು ಸಂಘರ್ಷದಲ್ಲಿ ಬದುಕುತ್ತಿದ್ದಾರೆ, ನನ್ನ ತಂದೆ-ತಾಯಿ ಮಕ್ಕಳಾಗಿದ್ದಾಗಲೂ ಅವರು ಸಂಘರ್ಷದಲ್ಲೇ ಬದುಕಿದ್ದಾರೆ, ನನ್ನ ಅಜ್ಜ-ಅಜ್ಜಿ ಯುವಕರಾಗಿದ್ದಾಗಲೂ ಅಲ್ಲಿ ಸಂಘರ್ಷವಿತ್ತು. ಏಳು ದಶಕಗಳಿಂದ ಕಾಶ್ಮೀರದ ಮಕ್ಕಳು ಹಿಂಸೆಯ ನಡುವಲ್ಲೇ ಬದುಕುತ್ತಿದ್ದಾರೆ" - ಮಲಾಲಾ ಯೂಸಫ್ಜಾಯ್.
'ಮಿಷನ್ ಕಾಶ್ಮೀರ': ಕಣಿವೆ ರಾಜ್ಯದ ತಳಮಟ್ಟದಲ್ಲಿ ಏನು ನಡೆಯುತ್ತಿದೆ?
ದಕ್ಷಿಣ ಏಷ್ಯಾ ನನ್ನ ಮನೆ
"ನಾನು ಕಾಶ್ಮೀರದ ಬಗ್ಗೆ ಕಾಳಜಿ ಹೊಂದಿದ್ದೇನೆ. ಏಕೆಂದರೆ ದಕ್ಷಿಣ ಏಷ್ಯಾ ನನ್ನ ಮನೆ. ಆ ಮನೆಯನ್ನು ನಾನು ಕಾಶ್ಮೀರಿಗಳೂ ಸೇರಿ 1.8 ಬಿಲಿಯನ್ ಜನರೊಂದಿಗೆ ಹಂಚಿಕೊಂಡಿದ್ದೇನೆ. ನಾವು ಬೇರೆ ಬೇರೆ ಸಂಸ್ಕೃತಿ, ಮತ, ಭಾಷೆ, ಸಂಪ್ರದಾಯವನ್ನು ಪ್ರತಿನಿಧಿಸುತ್ತೇವೆ. ಆದರೂ ನಾವು ಶಾಂತಿಯಿಂದ ಬದುಕಲು ಸಾಧ್ಯವಿದೆ ಎಂದು ನಾನು ನಂಬುತ್ತೇನೆ. ವಿವಿಧತೆಯೊಂದಿಗೇ ಈ ಜಗತ್ತಿಗೆ ನಮ್ಮ ಜನರು ನೀಡಿದ ಕೊಡುಗೆಗೆ ನಮಗೆಲ್ಲರಿಗೂ ಹೆಮ್ಮೆಯಿದೆ" - ಮಲಾಲಾ ಯೂಸಫ್ಜಾಯ್.
ಕಾಶ್ಮೀರದ ಮಹಿಳೆ ಮತ್ತು ಮಕ್ಕಳ ಬಗ್ಗೆ ಆತಂಕ
"ನಾವು ಪರಸ್ಪರ ನೋವು ಮಾಡಿಕೊಳ್ಳುವ, ನರಳುವುದರ ಅಗತ್ಯವಿಲ್ಲ. ನನಗೆ ಈಗ ಕಾಶ್ಮೀರದ ಮಹಿಳೆ ಮತ್ತು ಮಕ್ಕಳ ಬಗ್ಗೆ ಆತಂಕವಿದೆ. ಹಿಂಸೆ ಮತ್ತು ಸಂಘರ್ಷದ ನೇರ ಪರಿಣಾಮವನ್ನು ಹೆಚ್ಚಾಗಿ ಅನುಭವಿಸುವವರು ಅವರೇ" - ಮಲಾಲಾ ಯೂಸಫ್ಜಾಯ್.
ಮಾನವ ಹಕ್ಕುಗಳಿಗೆ ಬೆಲೆ ನೀಡೋಣ
"ಎಲ್ಲಾ ದಕ್ಷಿಣ ಏಷ್ಯಾದ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳು ಆ ಮಹಿಳೆಯರ ಮತ್ತು ಮಕ್ಕಳ ನರಳಾಟಕ್ಕೆ ಸ್ಪಂದಿಸುತ್ತಾರೆ ಎಂಬ ಭರವಸೆ ನನಗಿದೆ. ನಮ್ಮ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ನಾವು ಮಾನವ ಹಕ್ಕುಗಳಿಗೆ ಬೆಲೆ ಕೊಡಬೇಕು, ಮಹಿಳೆಯರು ಮತ್ತು ಮಕ್ಕಳ ಭದ್ರತೆಗೆ ಆದ್ಯತೆ ನೀಡಬೇಕು ಮತ್ತು ಏಳು ದಶಕಗಳ ಹಳೆಯ ಕಾಶ್ಮೀರ ವಿವಾದಕ್ಕೆ ಶಾಂತಿಯುತ ಪರಿಹಾರ ನೀಡುವುದಕ್ಕೆ ಮುಂದಾಗಬೇಕು" - ಮಲಾಲಾ ಯೂಸಫ್ಜಾಯ್.