ದುರ್ಗಾ ಮಂದಿರಕ್ಕೆ ಲಗ್ಗೆ ಇಟ್ಟ ಮುಸ್ಲಿಂ ಗುಂಪು; ಬ್ರಿಟನ್ನಲ್ಲಿ ಹಬ್ಬುತ್ತಿದೆಯಾ ಗಲಭೆ?
ಲಂಡನ್, ಸೆ. 21: ಬ್ರಿಟನ್ನ ಲೀಸೆಸ್ಟರ್ನಲ್ಲಿ ಇತ್ತೀಚೆಗೆ ಸಂಭವಿಸಿದ್ದ ಕೋಮುಗಲಭೆ ಘಟನೆಗಳು ಬೇರೆ ಪ್ರದೇಶಕ್ಕೆ ಹರಡುತ್ತಿರುವ ಅಪಾಯ ತೋರುತ್ತಿದೆ. ಬರ್ಮಿಂಗ್ಹ್ಯಾಂನ ಸ್ಮೆತ್ವಿಕ್ ಬಳಿ ಇರುವ ದುರ್ಗಾ ಭವನ ದೇವಸ್ಥಾನದ ಎದುರು 3 ಸಾವಿರ ಮುಸ್ಲಿಂ ಪ್ರತಿಭಟನಾಕಾರರು ಸೇರಿ ಆತಂಕ ಮೂಡಿಸಿದ ಘಟನೆ ನಡೆದಿದೆ.
ಲೀಸೆಸ್ಟರ್ ಘಟನೆ ಮಾದರಿಯಲ್ಲಿ ಸ್ಮೆತ್ವಿಕ್ನಲ್ಲೂ ಗಲಭೆ ನಡೆಸುವ ಸಂಚು ತಯಾರಾಗಿತ್ತು ಎಂದು ಸಿಎನ್ಎನ್ ನ್ಯೂಸ್18 ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಲಂಡನ್ನಲ್ಲಿರುವ ಪಾಕ್ ರಾಯಭಾರ ಕಚೇರಿ ಮತ್ತು ಐಎಸ್ಐನ ಕುಮ್ಮಕ್ಕಿನಿಂದ ಪಾಕಿಸ್ತಾನದ ಹಿಂದು ವಿರೋಧಿ ಸಂಘಟನೆಗಳು ದುರ್ಗಾ ಭವನದ ದೇವಸ್ಥಾನದಲ್ಲಿ ಗಲಭೆಗೆ ಚಿತಾವಣೆ ನಡೆಸಿದ್ದು ತಿಳಿದುಬಂದಿದೆ.
ಲೀಸೆಸ್ಟರ್ನಲ್ಲಿ ಹಿಂದೂ ದೇವಾಲಯ ಧ್ವಂಸ: ಭಾರತದ ಖಂಡನೆ
ಸೆಪ್ಟೆಂಬರ್ 20ರಂದು ದುರ್ಗಾ ಭವನದ ಎದುರು 3 ಸಾವಿರ ಜನರು ಸೇರಿದ್ದರು. ದೇವಸ್ಥಾನದ ಅಧಿಕಾರಿಗಳನ್ನು ನಿಂದಿಸುತ್ತಾ, ಬೆದರಿಕೆ ಹಾಕುತ್ತಾ ದೇಗುಲದ ಅಂಗಳದೊಳಗೆ ಬಾಟಲ್ಗಳನ್ನು ಎಸೆದರು. ಪಟಾಕಿಗಳನ್ನು ಹಚ್ಚಿ ದೇವಸ್ಥಾನದೊಳಗೆ ಎಸೆದರು. ದೇವಸ್ಥಾನದ ಕಾಂಪೌಂಡ್ ಹತ್ತಿ ಒಳಹೋಗಲು ಯತ್ನಿಸಿದ ಒಬ್ಬ ಪ್ರತಿಭಟನಾಕಾರನನ್ನು ಪೊಲೀಸರು ತಡೆದರು.
ಯಾಕೆ ಆ ಪ್ರತಿಭಟನೆ?
ಹಿಂದೂಪರ ಹೋರಾಟಗಾರ್ತಿ ಸಾಧ್ವಿ ರಿತಂಬರಾ ಭೇಟಿ ನೀಡುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿತ್ತು ಎಂದು ಹೇಳಲಾಗುತ್ತಿದೆ. ಬಾಬ್ರಿ ಮಸೀದಿ ಧ್ವಂಸ ಘಟನೆಯಲ್ಲಿ ರಿತಂಬರಾ ಅವರ ಕೈವಾಡ ಇದೆ. ಅವರು ಮುಸ್ಲಿಂ ವಿರೋಧಿಯಾಗಿದ್ದಾರೆ ಎಂಬುದು ಪ್ರತಿಭಟನಾಕಾರರ ಆಕ್ರೋಶ.
ಇದು ಕ್ರಿಕೆಟ್ ಗಲಾಟೆಯಾ, ಹಿಂದೂ ಮುಸ್ಲಿಂ ಗಲಭೆಯಾ? ಲೈಸಿಸ್ಟರ್ನಲ್ಲಿ ನಡೆದದ್ದೇನು?
ಪರಮ ಶಕ್ತಿ ಪೀಠ, ವಾತ್ಸಲ್ಯಗ್ರಾಮದ ಸಂಸ್ಥಾಪಕಿ ಸಾಧ್ವಿ ರಿತಂಬರಾ ಸೆಪ್ಟೆಂಬರ್ 21ರಿಂದ ಬ್ರಿಟನ್ ಪ್ರವಾಸ ಕೈಗೊಳ್ಳಲು ನಿಗದಿಯಾಗಿತ್ತು. ಬರ್ಮಿಂಗ್ಹ್ಯಾಂನಲ್ಲಿರುವ ದುರ್ಗಾ ಭವನ್ ದೇವಸ್ಥಾನಕ್ಕೆ ಅವರ ಮೊದಲ ಭೇಟಿ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಅವರ ಭೇಟಿಯನ್ನು ವಿರೋಧಿಸಿ ಪ್ರತಿಭಟನಾಕಾರರು ಸೇರಿದ್ದರು.
ರಿತಂಬರಾ ಭೇಟಿ ಕಾರ್ಯಕ್ರಮವನ್ನು ಈ ಮುಂಚೆಯೇ ರದ್ದು ಮಾಡಿರುವುದಾಗಿ ಅಧಿಕಾರಿಗಳು ಹೇಳಿದರೂ ಪ್ರತಿಭಟನಾಕಾರರು ಕಿವಿಗೊಡಲಿಲ್ಲ. ದೇವಸ್ಥಾನದ ಮೇಲೆ ದಾಳಿ ಮಾಡುವ ಪ್ರಯತ್ನ ಮುಂದುವರಿಸಿದ್ದರು. ಮಂದಿರವನ್ನು ಸುತ್ತುವರಿದ 3 ಸಾವಿರ ಮುಸ್ಲಿಂ ಪ್ರತಿಭಟನಾಕಾರರು ಅಲ್ಲಾಹು ಅಕ್ಬರ್ ಘೋಷಣೆಗಳನ್ನು ಕೂಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸಾಮಾಜಿಕ ಕಾರ್ಯಕರ್ತ ವಾಸಿಕ್ ಎಂಬುವವರು ಈ ಪ್ರತಿಭಟನೆಯ ಹಲವು ವಿಡಿಯೋಗಳನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿ, ಹಿಂದೂ ವಿರೋಧಿ ಕೃತ್ಯಗಳನ್ನು ಟೀಕಿಸಿದರು. ದುರ್ಗಾ ದೇವಿ ಮಂದಿರದ ಬಳಿ ಸೇರಿದ ಜನರು ಮುಸ್ಲಿಮರು ಎಂಬುದನ್ನು ಅವರು ಖಾತ್ರಿಪಡಿಸಿಕೊಂಡು ತಿಳಿಸಿದ್ದರು.
ಕಾಂಗ್ರೆಸ್ ಬೆಂಬಲಿತ ಗುಂಪಿನ ಕುಮ್ಮಕ್ಕು?
ಬ್ರಿಟನ್ನ ಯಾವ ಪ್ರದೇಶಕ್ಕೂ ಯಾವೊಬ್ಬ ಹಿಂದೂ ನಾಯಕರು ಬರುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ ಪ್ರತಿಭಟನಾಕಾರರು, ದೇಶದ ಇತರ ದೇವಸ್ಥಾನಗಳ ಎದುರು ಇದೇ ರೀತಿಯಲ್ಲಿ ಪ್ರತಿಭಟನೆಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದರು ಎನ್ನಲಾಗಿದೆ.
ಇದೇ ವೇಳೆ, ಪ್ರತಿಭಟನೆ ನಡೆಸಿದ ಪಾಕಿಸ್ತಾನ ಪರ ಗುಂಪುಗಳಿಗೆ ಲಂಡನ್ನಲ್ಲಿರುವ ಕಾಂಗ್ರೆಸ್ ಬೆಂಬಲಿತ ಸಂಘಟನೆಯೊಂದು ಬೆಂಬಲ ನೀಡಿರುವ ಅನುಮಾನ ಇದೆ. ನ್ಯೂಸ್18 ವರದಿ ಪ್ರಕಾರ ಉಪಾಸಕ್ ಎಂಬ ಹೆಸರಿನ ನಾಯಕರೊಬ್ಬರು ಸಾಧ್ವಿ ರಿತಂಬರಾ ಭೇಟಿಯ ಪೋಸ್ಟರ್ ಸೇರಿದಂತೆ ಎಲ್ಲಾ ಮಾಹಿತಿಯನ್ನೂ ಹಿಂದೂ ವಿರೋಧಿ ಸಂಘಟನೆಗಳೊಂದಿಗೆ ಹಂಚಿಕೊಂಡಿದ್ದರಂತೆ.
ಆಗಸ್ಟ್ 28ರ ಘಟನೆಯಿಂದ ಕಿಡಿ
ಆಗಸ್ಟ್ 28ರಂದು ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯಕ್ಕೆ ಮುನ್ನ ಲೀಸೆಸ್ಟರ್ನಲ್ಲಿ ಮುಸ್ಲಿಂ ವ್ಯಕ್ತಿಯ ರೆಸ್ಟೋರೆಂಟ್ವೊಂದರಲ್ಲಿ ಭಾರತದ ಬಾವುಟವನ್ನು ಅವಮಾನಿಸಲಾಗಿತ್ತು. ಅದು ಭಾರತ ಮತ್ತು ಪಾಕಿಸ್ತಾನ ಪರ ಗುಂಪುಗಳ ಮಧ್ಯೆ ಗಲಾಟೆಗೆ ಕಾರಣವಾಗಿತ್ತು.
ಆ ಪಂದ್ಯದಲ್ಲಿ ಭಾರತ ಗೆದ್ದ ಬಳಿಕ ಬೆಂಬಲಿಗರು ಸ್ಥಳೀಯ ಆಡಳಿತದ ಅನುಮತಿಯೊಂದಿಗೆ ಮೆರವಣಿಗೆ ನಡೆಸಿದ್ದರು. ಆದರೆ, ಮಸೀದಿ ಮುಂದೆ ಬೇಕಂತಲೇ ಮೆರವಣಿಗೆ ಮಾಡಲಾಯಿತು ಎಂದು ಇಮಾಮ್ ಆರೋಪಿಸಿದರು. ಅಂದಿನಿಂದ ಲೀಸೆಸ್ಟರ್ನಲ್ಲಿ ಅಗಾಗ್ಗೆ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಾ ಬಂದವು.
ಸೆಪ್ಟೆಂಬರ್ 4ರಂದು ಭಾರತದ ಮೇಲೆ ಪಾಕ್ ಕ್ರಿಕೆಟ್ ತಂಡ ಗೆದ್ದಿತು. ಅಷ್ಟರೊಳಗೆ ಬರ್ಮಿಂಗ್ಹ್ಯಾಂನಿಂದ 10 ಸಾವಿರ ಮುಸ್ಲಿಂ ಜನರು ಲೀಸೆಸ್ಟರ್ಗೆ ಬಂದಿದ್ದರು. ಪಾಕ್ ಗೆಲ್ಲುತ್ತಿದ್ದಂತೆಯೇ ವಿಜಯೋತ್ಸವ ಆಚರಣೆಯ ನೆವದಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿದರು ಎಂದು ಹೇಳಲಾಗುತ್ತದೆ. ಮೂರ್ನಾಲ್ಕು ದಿನಗಳ ಕಾಲ ಗಲಭೆಗಳು ನಡೆದವು. ಐವತ್ತಕ್ಕೂ ಹೆಚ್ಚು ಹಿಂದೂ ಮನೆಗಳ ಮೇಲೆ ದುರುಳರು ದಾಳಿ ಮಾಡಿದರೆನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)