ಐಪಿಎಲ್ 2026 ಕ್ವಾಲಿಫೈಯರ್ 2: ಜೂನಿಯರ್ ಯೂನಿವರ್ಸಲ್ ಬಾಸ್ Vs ಮಿಯಾ ಬಾಯ್
IPL 2026 Qualifier 2: ಐಪಿಎಲ್ 2026ರ ಹಬ್ಬ ಅಂತಿಮ ಹಂತಕ್ಕೆ ತಲುಪಿದೆ. ಮೇ 29ರಂದು ಮುಲ್ಲನ್ಪುರದಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಈ ಇಡೀ ಪಂದ್ಯದ ಕೇಂದ್ರಬಿಂದು ಮಾತ್ರ ಜೂನಿಯರ್ ಯೂನಿರ್ಸಲ್ ಬಾಸ್, 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತು ಮಿಯಾ ಬಾಯ್ ಮೊಹಮ್ಮದ್ ಸಿರಾಜ್ ನಡುವಿನ ಕಾಳಗ. ಈ ಕ್ಷಣ ಹೇಗಿರಬಹುದು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಮುಲ್ಲನ್ಪುರ್ನಲ್ಲಿ ಮೇ 27ರ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಭಯಾನಕ ಬ್ಯಾಟಿಂಗ್ ಮೂಲಕ ಎದುರಾಳಿ ಎಸ್ಆರ್ಎಚ್ ಬೌಲರ್ಗಳನ್ನು ಕಂಗಾಲಾಗಿಸಿದ್ದ ಸೂರ್ಯವಂಶಿ ರಾಜಸ್ಥಾನ್ ತಂಡವನ್ನು ಕ್ವಾಲಿಫೈಯರ್-2ಗೆ ಕರೆತಂದಿದ್ದಾರೆ. ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿಗಳನ್ನು ಸಿಡಿಸುವ ಈತನ ಸಾಮರ್ಥ್ಯ ಕಂಡು ಕ್ರಿಕೆಟ್ ದಿಗ್ಗಜರೇ ನಿಬ್ಬೆರಗಾಗಿದ್ದಾರೆ. ಇದೀಗ ಉತ್ತಮ ವೈಭವ್ ಮೇ 29ರಂದು ಇದೇ ಮುಲ್ಲನ್ಪುರ್ನಲ್ಲಿ ನಡೆಯುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಮೊಹಮ್ಮದ್ ಸಿರಾಜ್ಗೆ ಸವಾಲೆಸೆಯಲು ಸಜ್ಜಾಗಿದ್ದಾರೆ.

ವೈಭವ್ ವಿಕೆಟ್ಗಾಗಿ ಸಿರಾಜ್ ರಣತಂತ್ರ
ಗುಜರಾತ್ ಟೈಟಾನ್ಸ್ ಪರ ಈ ಸೀಸನ್ನಲ್ಲಿ ಅದ್ಭುತವಾಗಿ ಬೌಲಿಂಗ್ ದಾಳಿ ಮುಂದುವರೆಸಿಕೊಂಡು ಬಂದಿರುವ ಮೊಹಮ್ಮದ್ ಸಿರಾಜ್ ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವಲ್ಲಿ ನಿಸ್ಸೀಮರೆನಿಸಿಕೊಂಡಿದ್ದಾರೆ. ಪವರ್ಪ್ಲೇನಲ್ಲಿ ಬ್ಯಾಟರ್ಗಳನ್ನು ಕಟ್ಟಿಹಾಕುವ ಸಿರಾಜ್ಗೆ ವೈಭವ್ ಅವರಂತಹ ಅತಿ ವೇಗವಾಗಿ ರನ್ ಗಳಿಸುವ ಬ್ಯಾಟರ್ ಅನ್ನು ತಡೆಯುವುದೇ ದೊಡ್ಡ ಸವಾಲಾಗಿದೆ. ಈ ಬಾಲಕನ ಆಕ್ರಮಣಕಾರಿ ಆಟಕ್ಕೆ ಸಿರಾಜ್ ತಮ್ಮ ಮಾರಕ ಬೌಲಿಂಗ್ ದಾಳಿ ಮೂಲಕ ಉತ್ತರ ನೀಡಲು ರಣತಂತ್ರ ರೂಪಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆಯೋ ಗೊತ್ತಿಲ್ಲ.
ವೈಭವ್ ವಿರುದ್ಧ ಕಮ್ಮಿನ್ಸ್ ರಣತಂತ್ರ ಫ್ಲಾಪ್
ಯಾಕಂದ್ರೆ ಈಗಾಗಲೇ ಎಲಿಮಿನೇಟರ್ ಪಂದ್ಯದಲ್ಲೂ ಎಸ್ಆರ್ಎಚ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಸಹ ಇಂತಹದ್ದೇ ತಂತ್ರದ ಮೂಲಕ ಬೌಲಿಂಗ್ ದಾಳಿಗೆ ಮುಂದಾಗಿದ್ದರು. ಆದರೆ ಇದ್ಯಾವುದನ್ನೂ ಲೆಕ್ಕಕ್ಕೆ ಇಡದ ಈ ಬಾಲಕ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈಯ್ಯುವ ಮೂಲಕ ರನ್ ಮಳೆ ಸುರಿಸಿದರು. ಇವರನ್ನು ಔಟ್ ಮಾಡುವುದೇ ಒಂದು ತಲೆನೋವಾಗಿ ಪರಿಣಮಿತ್ತು ಅಷ್ಟರ ಮಟ್ಟಿಗೆ ಸ್ಫೋಟಕ ಬ್ಯಾಟಿಂಗ್ ಆಡಿ ಎದುರಾಳಿ ಬೌಲರ್ಗಳನ್ನು ಕಂಗೆಡಿಸಿದ್ದರು.
ವಂಡರ್ Vs ಮಿಯಾ ಬಾಯ್
ಕ್ರಿಕೆಟ್ ದಿಗ್ಗಜರ ಪ್ರಕಾರ, ಎಲಿಪಿನೇಟರ್ 2 ಪಂದ್ಯದ ಭವಿಷ್ಯವು ಪವರ್ಪ್ಲೇನಲ್ಲಿ ನಿರ್ಧಾರವಾಗಲಿದೆ. ಒಂದು ವೇಳೆ ವೈಭವ್ ಸೂರ್ಯವಂಶಿ ಸಿರಾಜ್ ಅವರ ಆರಂಭಿಕ ಓವರ್ಗಳಲ್ಲಿ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದರೆ ರಾಜಸ್ಥಾನ್ ತಂಡ ದೊಡ್ಡ ಮೊತ್ತ ಗಳಿಸುವುದಂತೂ ಗ್ಯಾರಂಟಿ. ಆದರೆ ಸಿರಾಜ್ ತಮ್ಮ ಅನುಭವವನ್ನು ಬಳಸಿ ವೈಭವ್ ಅವರ ವಿಕೆಟ್ ಬೇಗನೆ ಪಡೆದರೆ ಮಾತ್ರ ಗುಜರಾತ್ ಪಂದ್ಯದ ಮೇಲೆ ಹಿಡಿತ ಸಾಧಿಸಲಿದೆ.
ಜಿಟಿ ವಿರುದ್ಧ ವೈಭವ್ ಅಂಕಿಅಂಶಗಳು
ಮತ್ತೊಂದೆಡೆ ಮೇ 9, 2026ರಂದು ಜೈಪುರದಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ (36 ರನ್, 16 ಎಸೆತ) ಮೊಹಮ್ಮದ್ ಸಿರಾಜ್ ಎಸೆದ ಬೌನ್ಸರ್ನಲ್ಲಿ ಅರ್ಶದ್ ಖಾನ್ಗೆ ಕ್ಯಾಚ್ ನೀಡಿ ಔಟಾಗಿದ್ದರು. ಇದಕ್ಕೂ ಮುನ್ನ ಏಪ್ರಿಲ್ 4, 2026ರಂದು ಅಹಮದಾಬಾದ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ವೈಭವ್ (31 ರನ್, 18 ಎಸೆತ) ರಶೀದ್ ಖಾನ್ ಬೌಲಿಂಗ್ನಲ್ಲಿ ಗ್ಲೆನ್ ಫಿಲಿಪ್ಸ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದರು. ಇದನ್ನೆಲ್ಲಾ ನೆನಪಿನಲ್ಲಿಟ್ಟುಕೊಂಡಿರುವ 15 ವರ್ಷದ ವೈಭವ್ ಸೂರ್ಯವಂಶಿ ಕೂಡ ಭರ್ಜರಿ ಸಿದ್ಧತೆಯೊಂದಿಗೆ ಕಣಕ್ಕಿಳಿಯುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸೇಡು ತೀರಿಸಿಕೊಳ್ಳುತ್ತಾರಾ ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ.
ಭರ್ಜರಿ ಫಾರ್ಮ್ನಲ್ಲಿರುವ ಯೂನಿವರ್ಸ್ ಬೇಬಿ ಬಾಯ್
ಮುಲ್ಲನ್ಪುರ ಕ್ರೀಡಾಂಗಣದ ಪಿಚ್ ವೇಗಿಗಳಿಗೆ ಅನುಕೂಲವಾಗಿದೆ. ಇದು ಸಿರಾಜ್ಗೆ ಪ್ಲಸ್ ಪಾಯಿಂಟ್ ಆಗಬಹುದು. ಆದರೆ ಭರ್ಜರಿ ಫಾರ್ಮ್ನಲ್ಲಿರುವ ವೈಭವ್ಗೆ ಯಾವುದೇ ಪಿಚ್ ಅಡ್ಡಿಯಾಗುತ್ತಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ 15 ವರ್ಷದ ಪೋರ ಸಿರಾಜ್ ದಾಳಿಯನ್ನು ಹೇಗೆ ಎದುರಿಸುತ್ತಾನೆ? ಎನ್ನುವ ಚರ್ಚೆ ಜೋರಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಮೇ 29ರ ಈ ಪಂದ್ಯವು ಕೇವಲ ಎರಡು ತಂಡಗಳ ನಡುವಿನ ಹೋರಾಟವಾಗಿ ಉಳಿದಿಲ್ಲ. ಇದು ಭಾರತೀಯ ಕ್ರಿಕೆಟ್ನ ಉದಯೋನ್ಮುಖ ತಾರೆ ವೈಭವ್ ಮತ್ತು ಅನುಭವಿ ವೇಗಿ ಸಿರಾಜ್ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ. ಗೆದ್ದವರು ಫೈನಲ್ನಲ್ಲಿ ಆರ್ಸಿಬಿಯನ್ನು ಎದುರಿಸಲಿದ್ದಾರೆ. ಸೋತ ತಂಡವು ಈ ಬಾರಿಯ ಟೂರ್ನಿಯಿಂದ ಹೊರನಡೆಯಲಿದೆ. ಈ ಹೈವೋಲ್ಟೇಜ್ ಸಮರಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications