'ಭಾರತಕ್ಕೆ ಭೇಟಿ ನೀಡಿ': ಮೋದಿ ಆಹ್ವಾನವನ್ನು ಸ್ವೀಕರಿಸಿದ ಬ್ರಿಟನ್ ಪ್ರಧಾನಿ
ನವದೆಹಲಿ, ನವೆಂಬರ್ 02: ಭಾರತಕ್ಕೆ ಭೇಟಿ ನೀಡುವಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಹ್ವಾನ ಮಾಡಿದ್ದಾರೆ. ಈ ಆಹ್ವಾನವನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸ್ವೀಕಾರ ಮಾಡಿದ್ದು, ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಯುಕೆ ಪ್ರಧಾನ ಮಂತ್ರಿ ಜಾನ್ಸನ್ ಬೋರಿಸ್, ಭಾರತದ ಪ್ರಧಾನ ಮಂತ್ರಿಯ ಆಹ್ವಾನವನ್ನು ಸ್ವೀಕರಿಸಿರುವ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಮಾಹಿತಿ ನೀಡಿದ್ದಾರೆ. ಬ್ರಿಟಿಷ್ ಪ್ರಧಾನಿಯು ಸಂದರ್ಭವು ಸರಿಯಾದ ಬಳಿಕ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೂಡಾ ಹೇಳಿದ್ದಾರೆ.
ಗ್ಲಾಸ್ಗೋದಲ್ಲಿ ನಡೆದ COP26 ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯುಕೆ ಪ್ರಧಾನಿಯನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ಉಭಯ ನಾಯಕರುಗಳು ಹಸಿರು ಜಲಜನಕ, ತಂತ್ರಜ್ಞಾನ, ಆರ್ಥಿಕತೆ, ರಕ್ಷಣೆಯಂತಹ ಕ್ಷೇತ್ರಗಳ ಬಗ್ಗೆ ಸಹಕಾರದ ಬಗ್ಗೆ ಮಾತುಕತೆ ನಡೆಸಿದರು.

ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದ್ವಿಪಕ್ಷೀಯ ಸಹಕಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಉಭಯ ದೇಶದ ನಾಯಕರುಗಳು ಮಾತನಾಡಿದ್ದಾರೆ. ಈ ಸಂವಾದದ ಸಂದರ್ಭದಲ್ಲಿ ಪ್ರಧಾನಿ ಮೋದಿ ಶೀಘ್ರದಲ್ಲೇ ಭಾರತಕ್ಕೆ ಜಾನ್ಸನ್ ಬರುವಂತೆ ಆಹ್ವಾನವನ್ನು ಪುನರುಚ್ಛರಿಸಿದ್ದಾರೆ ಎಂದು ಅಧಿಕೃತ ಪ್ರಕರಣೆ ತಿಳಿಸಿದೆ. ಒಂದು ದಿನದ ಒಳಗಾಗಿ ಬ್ರಿಟನ್ ಪ್ರಧಾನಿ ಆಹ್ವಾನವನ್ನು ಸ್ವೀಕಾರ ಮಾಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಖಚಿತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮೂಲಗಳು, ಉಭಯ ನಾಯಕರ ನಡುವೆ ನಡೆದ ಮಾತುಕತೆಯು ಹೆಚ್ಚಾಗಿ ದ್ವಿಪಕ್ಷೀಯ ಸಂಬಂಧದ ಮೇಲೆ ಕೇಂದ್ರಿಕರಿಸಿತ್ತು ಎಂದು ಹೇಳಿದೆ. "ನಿಗದಿತ ಸಮಯದೊಳಗೆ ರಸ್ತೆಯ ನಕ್ಷೆಯ ಅನುಷ್ಠಾನಕ್ಕೆ ಉಭಯ ರಾಷ್ಟ್ರಗಳು ಬದ್ದವಾಗಿರುತ್ತದೆ," ಎಂದು ಭಾರತದ ಹೈಕಮಿಷನರ್ ಗಾಯತ್ರಿ ಇಸ್ಸಾರ್ ಕುಮಾರ್ ಪ್ರಧಾನ ಮಂತ್ರಿಯ ಮಾತುಕತೆ ಆರಂಭಕ್ಕೂ ಮುನ್ನವೇ ಹೇಳಿದ್ದಾರೆ. "ನಾವು ಮಾರ್ಚ್ 2022 ರಲ್ಲಿ ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಲು ನವೆಂಬರ್ 2021 ರಲ್ಲಿ ಮಾತುಕತೆಗಳನ್ನು ಪ್ರಾರಂಭಿಸಲು ನಿರ್ಧಾರ ಮಾಡಿದ್ದೇವೆ. ಅಂತಿಮವಾಗಿ ನವೆಂಬರ್ 2022 ರ ವೇಳೆಗೆ ವೇಳಾಪಟ್ಟಿಯ ಪ್ರಕಾರ ಎಲ್ಲವೂ ನಡೆದರೆ ಸಮಗ್ರ ಒಪ್ಪಂದಕ್ಕೆ ಸಹಿ ಹಾಕುತ್ತೇವೆ," ಎಂದು ಗಾಯತ್ರಿ ಇಸ್ಸಾರ್ ಕುಮಾರ್ ತಿಳಿಸಿದ್ದರು.

ಚಂಡಮಾರುತದ ಪರಿಣಾಮದ ಬಗ್ಗೆ ಉಲ್ಲೇಖ
ಇನ್ನು ಈ ಮಾತುಕತೆಯ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, "ಇದು ತುಂಬಾ ಬಿಡುವಿಲ್ಲದ ದಿನವಾಗಿದೆ. ಇಂದು ಬೆಳಿಗ್ಗೆ 8:30 ಕ್ಕೆ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ವಿಶೇಷ ಅಧಿವೇಶನವನ್ನು ನಡೆಸಿದ್ದಾರೆ," ಎಂದು ಹೇಳಿದರು. "ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಲವಾರು ವಿಚಾರಗಳನ್ನು ಉಲ್ಲೇಖ ಮಾಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಜೀವಗಳು ಹೋಗಿದೆ, ಚಂಡ ಮಾರುತದಿಂದಾಗಿ ವಸತಿ, ಮೂಲಸೌಕರ್ಯಗಳಿಗೆ ಭಾರೀ ಹಾನಿ ಉಂಟಾಗಿದೆ. ಎಲ್ಲವೂ ನಾಶವಾಗಿದೆ. ವಿಶೇಷವಾಗಿ ಸಣ್ಣ ದ್ವೀಪ ರಾಜ್ಯಗಳು ಮತ್ತು ಕರಾವಳಿ ಪ್ರದೇಶಗಳು ಈ ಚಂಡ ಮಾರುತದಿಂದಾಗಿ ವಿನಾಶಕ್ಕೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಬದಲಾವಣೆಯ ಪರಿಣಾಮವನ್ನು ಎದುರಿಸಲು ಸಜ್ಜುಗೊಳಿಸುವ ಪ್ರಯತ್ನ ಇದಾಗಿದೆ," ಎಂದು ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಪಕ್ಷಗಳ ಸಮ್ಮೇಳನದ (COP-26) 26 ನೇ ಅಧಿವೇಶನದಲ್ಲಿ ದ್ವೀಪ ರಾಷ್ಟ್ರಗಳಿಗೆ (ಐರಿಸ್) ಮೂಲಸೌಕರ್ಯದ ವ್ಯವಸ್ಥೆಯನ್ನು ಜಂಟಿಯಾಗಿ ಪ್ರಾರಂಭ ಮಾಡಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಂಗಳವಾರ ತಿಳಿಸಿದ್ದಾರೆ. ಇದರಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್, ಯುನೈಟೆಡ್ ಅರಬ್ ಎಮಿರೇಟ್ ರಾಜ, ಬಾಂಗ್ಲಾದೇಶ ಪ್ರಧಾನ ಮಂತ್ರಿ ಕೂಡಾ ಭಾಗಿಯಾಗಲಿದ್ದಾರೆ ಎಂದು ವರದಿಯು ಹೇಳಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications