ಕೊಪ್ಪಳ: ಹುಲಿಹೈದರ್ ಘರ್ಷಣೆ ಪ್ರಕರಣ, 56 ಜನ ಬಂಧನ!
ಕೊಪ್ಪಳ, ಆಗಸ್ಟ್ 18 : ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಆಗಸ್ಟ್ 11 ರಂದು ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ದಾಖಲಾಗಿರುವ ದೂರಿನ ಅನ್ವಯದಂತೆ ಪೊಲೀಸರು ಈಗ 56 ಜನರನ್ನು ಬಂಧಿಸಿದ್ದಾರೆ.
ಮೇಲ್ನೋಟಕ್ಕೆ ಕ್ಷುಲ್ಲಕ ಕಾರಣಕ್ಕಾಗಿ ಆಗಸ್ಟ್ 11 ರಂದು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಗುಂಪು ಘರ್ಷಣೆ ನಡೆದಿತ್ತು. ಘಟನೆಯಲ್ಲಿ ಭಾಷಾವಲಿ ಹಾಗೂ ಯಂಕಪ್ಪ ಎಂಬ ಇಬ್ಬರು ಸಾವನ್ನಪ್ಪಿದ್ದರು. ಧರ್ಮರಾಜ ಹರಿಜನ ಎಂಬ ಯುವಕ ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘರ್ಷಣೆ ನಡೆದ ಬಳಿಕ ಗ್ರಾಮದಲ್ಲಿ ಬಹುತೇಕರು ಊರನ್ನು ತೊರೆದಿದ್ದರು. ಘಟನೆಯಿಂದ ಇಡಿ ಹುಲಿಹೈದರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆಗಸ್ಟ್ 11 ರಿಂದ ಆಗಸ್ಟ್ 20 ರವರೆಗೆ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಸದ್ಯ ಗ್ರಾಮದಲ್ಲಿ ಪರಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಗ್ರಾಮದಲ್ಲಿ ಪೊಲೀಸರ ಸರ್ಪಗಾವಲು ಮುಂದುವರಿದಿದೆ.

ಘಟನೆಯಲ್ಲಿ ಸಾವನ್ನಪ್ಪಿದ್ದ ಭಾಷಾವಲಿ ಸಹೋದರ ಕನಕಗಿರಿ ಪೊಲೀಸ್ ಠಾಣೆಯಲ್ಲಿ 28 ಜನರ ವಿರುದ್ದ ದೂರು ಸಲ್ಲಿಸಿದ್ದರು. ಮೃತ ಯಂಕಪ್ಪನ ಕುಟುಂಬಸ್ಥರೂ ಸಹ 30 ಜನರ ವಿರುದ್ಧ ದೂರು ನೀಡಿದ್ದರು. ಘಟನೆಗೆ ಕಾರಣರಾದವರು ಎನ್ನಲಾದ ಆರೋಪಿಗಳು ಗ್ರಾಮವನ್ನು ತೊರೆದಿದ್ದರು. ದೂರು ಮತ್ತು ಪ್ರತಿದೂರಿನಲ್ಲಿ ಆರೋಪಿಸಲಾದ ವ್ಯಕ್ತಿಗಳ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಗಿರಿ ಐದು ವಿಶೇಷ ತಂಡಗಳನ್ನು ರಚಿಸಿದ್ದರು. ಆರೋಪಿಗಳ ಪತ್ತೆಗೆ ಇಳಿದ ತಂಡ ಈಗಾಗಲೇ ಹಂತ ಹಂತವಾಗಿ 56 ಜನರನ್ನು ಬಂಧಿಸಿದ್ದಾರೆ.
ಪೊಲೀಸರ ಕೈಗೆ ಸಿಗದೆ ಆರೋಪಿ ಶರಣು
ಘಟನೆಯಲ್ಲಿ ಮೃತಪಟ್ಟ ಬಾಷಾವಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಪಾಪತಿ ಎಂಬ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ ಎನ್ನಲಾಗಿದೆ. ಮೃತ ಬಾಷಾವಲಿ ಪ್ರಕರಣದಲ್ಲಿ ಆರೋಪಿ ನಂಬರ್ 2 ಪಂಪಾಪತಿ ನಾಯಕ್ ಎಂಬಾತ ಗಲಾಟೆ ನಡೆದ ಬಳಿಕ ಎರಡು ಮೊಬೈಲ್ ತನ್ನ ಮನೆಯಲ್ಲಿ ಬಿಟ್ಟು ಪರಾರಿಯಾಗಿದ್ದ. ಕೊಪ್ಪಳ, ಗಂಗಾವತಿ, ಕುಷ್ಟಗಿ ಹೀಗೆ ಸುತ್ತುತ್ತಿರುವ ಪಂಪಾಪತಿ, ತನಗೆ ಅವಶ್ಯವಿರುವಾಗ ಮತ್ತೊಬ್ಬರ ಮೊಬೈಲ್ ಬಳಿಸಿ ಮಾತಾನಡುತ್ತಿದ್ದಾನೆ. ಹೀಗೆ ಮಾತನಾಡಿ ಮತ್ತೆ ಅಲ್ಲಿಂದ ಮತ್ತ ಕಾಲ್ಕೀಳುತ್ತಿದ್ದಾನೆ. ಹೀಗೆ ಕಳೆದ ಒಂದು ವಾರದಿಂದಲೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ ಪಂಪಾಪತಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪೊಲೀಸ್ ಠಾಣೆಗೆ ಬಂದು ಬುಧವಾರ ಶರಣಾಗಿದ್ದಾನೆ.











Click it and Unblock the Notifications