ಕೊಪ್ಪಳ ಜಿಲ್ಲಾಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆ
ಕೊಪ್ಪಳ, ಡಿಸೆಂಬರ್ 14: ಇನ್ನು ಕೆಲವೇ ತಿಂಗಳಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ 'ನವಕರ್ನಾಟಕ ನಿರ್ಮಾಣ ಯಾತ್ರೆ' ಹೆಸರಿನಲ್ಲಿ ಪ್ರವಾಸ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಕೊಪ್ಪಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ಇದುವರೆಗೂ ಕೈಗೊಂಡ ಯೋಜನೆಯ ಕುರಿತು ಸಿದ್ದರಾಮಯ್ಯನವರು ವಿವರಿಸಿದ ಮುಖ್ಯಾಂಶಗಳು ಇಲ್ಲಿವೆ.

* ಕೃಷಿ ಭಾಗ್ಯ ಯೋಜನೆಯಡಿ ಕಲ್ಪಿಸಲಾಗಿರುವ ಕೃಷಿ ಹೊಂಡ ಯೋಜನೆಯಿಂದ ಕೊಪ್ಪಳ ರೈತರಿಗೆ ಅತ್ಯಂತ ಉಪಯುಕ್ತವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಈವರೆಗೆ 7840 ಕೃಷಿ ಹೊಂಡಗಳು ಹಾಗೂ 87 ಪಾಲಿ ಹೌಸ್ ನಿರ್ಮಾಣವಾಗಿದೆ. ಈ ಎರಡೂ ಯೋಜನೆಗಳಿಗೆ 67.46 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ವರ್ಷ ಉತ್ತಮ ಮಳೆಯಾದ ಕಾರಣ ಶೇ. 90 ರಷ್ಟು ಕೃಷಿ ಹೊಂಡಗಳು ಭರ್ತಿಯಾಗಿವೆ.
* ಸಿದ್ದರಾಮಯ್ಯ ಸರ್ಕಾರವು ಸರ್ಕಾರೀ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ 161.70 ಕೋಟಿ ರೂ. ಅನುದಾನ ನೀಡಿದ್ದ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಈ ಮೂಲಕ ಈ ಭಾಗದ ಜನರ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಿದ್ದು ಇಂದು ಜಿಲ್ಲೆಯ ವೈದ್ಯಕೀಯ ಸೇವೆಯ ಗುಣಮಟ್ಟ ಸುಧಾರಣೆಗೊಂಡಿದೆ.
* ಕೊಪ್ಪಳ ಜಿಲ್ಲೆಯಲ್ಲಿ 2,91,337 ಕುಟುಂಬಗಳು ಸರ್ಕಾರದ ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆಯುತ್ತಿದ್ದು, 9,56,019 ಫಲಾನುಭವಿಗಳಿಗೆ ಈ ಯೋಜನೆ ತಲುಪಿದೆ. ಇದರಿಂದ ಇಲ್ಲಿನ ಬಹುಪಾಲು ಕುಟುಂಬಗಳು ಗುಳೆ ಹೋಗುವುದು ತಪ್ಪಿದೆ.
* ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಕೇವಲ 200 ಗಂಟೆಗಳಲ್ಲಿ 21129 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಹಿಂದೆಂದೂ ಆಗದ ದಾಖಲೆಯನ್ನು ನಿರ್ಮಿಸಲಾಗಿದೆ. ಇನ್ನೂ 28 ಸಾವಿರ ಶೌಚಾಲಯ ನಿರ್ಮಾಣ ಮಾತ್ರ ಜಿಲ್ಲೆಯಲ್ಲಿ ಬಾಕಿಯಿದ್ದು, ಕೊಪ್ಪಳ ಶೀಘ್ರವೇ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಲಿದೆ.
* ಸರ್ಕಾರದ ಗೃಹಭಾಗ್ಯ ಯೋಜನೆಯಡಿ ವಿವಿಧ ಜಿಲ್ಲೆಗಳಲ್ಲಿ ಪೌರಕಾರ್ಮಿಕರಿಗಾಗಿ 2030 ಅಳತೆಯ ನಿವೇಶನದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, 32 ಪೌರಕಾರ್ಮಿಕ ಕುಟುಂಬಗಳಿಗೆ 3040 ನಿವೇಶನ ಮಂಜೂರು ಮಾಡಿ 7.5 ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ಮಂಜೂರು ಮಾಡಲಾಗಿದ್ದು ಶ್ರಮಿಕರಿಗೆ ಬಲ ತುಂಬಲಾಗಿದೆ.
* ಬರ ಪರಿಸ್ಥಿತಿಯಿಂದ ಆತಂಕಕ್ಕೀಡಾಗಿರುವ ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಸಹಕಾರಿ ಸಂಘಗಳಲ್ಲಿ ರೈತರು ಪಡೆದಿದ್ದ ಸಾಲದಲ್ಲಿ 50. ಸಾವಿರ ರೂಪಾಯಿಗಳನ್ನು ಮನ್ನಾ ಮಾಡಲಾಗಿದೆ. ಕೊಪ್ಪಳದ 33744 ರೈತರ 104.62 ಕೋಟಿ ರೂ. ಸಾಲವನ್ನು ಸರ್ಕಾರ ಮನ್ನಾ ಮಾಡಿದೆ.
* ಸಾಲ ಪಡೆದು, ಮರು ಪಾವತಿ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ ಬಡವರನ್ನು ಪಾರು ಮಾಡಲು ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ನಿಗಮಗಳಡಿ ಸಾಲ ಪಡೆದಿದ್ದ 21537 ಕುಟುಂಬಗಳ ಸಾಲ ಮನ್ನಾ ಮಾಡಿದ್ದು ಇದಕ್ಕಾಗಿ ಒಟ್ಟು 32.89 ಕೋಟಿ ರೂ. ವೆಚ್ಚವಾಗಿದೆ.
* ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ 329 ಜನವಸತಿ ಪ್ರದೇಶಗಳಿಗೆ ಆಲಮಟ್ಟಿಯಿಂದ ಕೃಷ್ಣಾ ನದಿಯಿಂದ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸಲು 763 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ಕಾಮಗಾರಿ ಪ್ರಾರಂಭಗೊಂಡಿದೆ. ಇದರಿಂದ ಎರಡೂ ತಾಲೂಕಿನಲ್ಲಿ ಫ್ಲೋರೈಡ್ ಯುಕ್ತ ನೀರನ್ನೇ ಬಳಸುತ್ತಿದ್ದ ಇಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗಲಿದೆ.
* ಬಡ ಮಕ್ಕಳಿಗೆ ನೆರವಾಗಲು ಕೊಪ್ಪಳ ನಗರದಲ್ಲಿ ಹಾಗೂ ಯಲಬುರ್ಗಾ ತಾಲೂಕಿನ ಚಿಕ್ಕೊಪ್ಪದಲ್ಲಿ 2017-18 ನೇ ಶೈಕ್ಷಣಿಕ ಸಾಲಿನಿಂದಲೇ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಆರಂಭಿಸಿದ್ದು ನೂರಾರು ವಿದ್ಯಾರ್ಥಿಗಳು ಅಲ್ಲಿ ಶಿಕ್ಷಣ ಮುಂದುವರೆಸಿದ್ದಾರೆ.
* ಕೊಪ್ಪಳ ತಾಲೂಕು ಬೆಟಗೇರಿ ಗ್ರಾಮದಲ್ಲಿ 88 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಜಾರಿಯಿಂದ 06 ಸಾವಿರ ಎಕರೆ ಭೂಮಿಗೆ ನೀರಾವರಿ ಲಭ್ಯವಾಗಲಿದೆ.
* ಭತ್ತದ ನಾಡು ಎನಿಸಿರುವ ಕೊಪ್ಪಳ ಜಿಲ್ಲೆಯ, ಗಂಗಾವತಿ ತಾಲೂಕಿನ ನವಲಿ-ಸೋಮನಾಳ ಗ್ರಾಮಗಳ ಮಧ್ಯೆ 37. 19 ಕೋಟಿ ರೂ. ವೆಚ್ಚದಡಿ ಏಷ್ಯಾದಲ್ಲೇ ಮೊದಲ ರೈಸ್ ಟೆಕ್ನಾಲಜಿ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.
* ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆ ಜಾರಿಗೊಳಿಸಲಾಗಿದ್ದು, ಜಿಲ್ಲೆಯಲ್ಲಿ 33405 ಮಹಿಳಾ ಫಲಾನುಭವಿಗಳಿಗೆ ಈ ಯೋಜನೆಯಡಿ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.












Click it and Unblock the Notifications