ಕೊಪ್ಪಳ; ಮಳೆಗೆ ಬೆಳೆ ಹಾನಿ, ವರದಿ ನೀಡಲು ಡಿಸಿ ಸೂಚನೆ
ಕೊಪ್ಪಳ, ನವೆಂಬರ್ 21; " ಕೊಪ್ಪಳ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಯಾಗಿರುವ ಭತ್ತ ಮತ್ತು ಇತರ ಯಾವುದೇ ಬೆಳೆಗಳ ಹಾನಿ ವರದಿಯನ್ನು ತ್ವರಿತವಾಗಿ ಸಲ್ಲಿಸಬೇಕು" ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಗಂಗಾವತಿ ತಾಲ್ಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯಿಂದಾಗಿ ಹಾನಿಯಾದ ಭತ್ತದ ಬೆಳೆ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ಹಾನಿಯಾದ ರೈತರಿಗೆ ಬೆಳೆ ವಿಮೆ ಹಾಗೂ ಪರಿಹಾರ ಬೇಗನೆ ತಲುಪುವಂತಾಗಬೆಕು. ಆದ್ದರಿಂದ ಅಧಿಕಾರಿಗಳು ಪ್ರತಿ ತಾಲ್ಲೂಕಿನಲ್ಲಿ ಮಳೆಯಿಂದಾಗಿರುವ ಬೆಳೆ ಹಾನಿಯ ವರದಿಯನ್ನು ತಕ್ಷಣ ನೀಡಬೇಕು ಎಂದರು.
ವಾಯುಭಾರ ಕುಸಿತದ ಪರಿಣಾಮ ಇನ್ನೂ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯು ಈ ಕುರಿತು ಮುನ್ಸೂಚನೆ ನೀಡಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನವನ್ನು ತೊರೆಯದೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಜಿಲ್ಲೆಯ ವಿವಿಧೆಡೆ ಭತ್ತದ ಬೆಳೆ ನೆಲಕಚ್ಚಿದ್ದು, ಬೆಳೆ ನಾಶವಾದಂತಹ ರೈತರು ಈಗಾಗಲೇ ಫಸಲ್ ಭೀಮಾ ಯೋಜನೆಯಡಿ ಪ್ರೀಮಿಯಂ ತುಂಬಿದ್ದರೆ ಅಂತಹ ರೈತರು ಕಾಲ್ ಸೆಂಟರ್ 18002664141ಗೆ ಕರೆ ಮಾಡಿ, ಬೆಳೆ ನಾಶದ ಕುರಿತು ಮಾಹಿತಿ ನೀಡಿ ದೂರನ್ನು ದಾಖಲಿಸಬಹುದಾಗಿದೆ.

ರೈತರು ದಾಖಲಿಸಿದ ದೂರಿನ ನಂಬರ್ ಅನ್ನು ಪಡೆದುಕೊಳ್ಳುವುದು ಸಹ ಅತ್ಯವಶ್ಯಕವಾಗಿದ್ದು, ಈ ಬಗ್ಗೆ ಕೃಷಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಹಾಯವಾಣಿಗಳ ವ್ಯವಸ್ಥೆ; ಕೊಪ್ಪಳ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ತುರ್ತು ಸಂದರ್ಭಕ್ಕೆ ಜನರ ಅನುಕೂಲಕ್ಕಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿ ವ್ಯವಸ್ಥೆಯನ್ನು ಮಾಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಾದ್ಯಂತ ಇನ್ನೂ ಒಂದು ವಾರ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.

ಸಹಾಯವಾಣಿ ಸಂಖ್ಯೆಗಳು
* ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ 08539-225001 ಹಾಗೂ 9481767314
* ಕೊಪ್ಪಳ 08539-220381 ಹಾಗೂ 9164258531
* ಯಲಬುರ್ಗಾ 7975027648 ಹಾಗೂ 6360821215
* ಕುಷ್ಟಗಿ 8217634269 ಹಾಗೂ 08536-267031
* ಕನಕಗಿರಿ 9900433012 ಹಾಗೂ 9535754151
* ಕುಕನೂರು 8050303495 ಹಾಗೂ 9902488347
* ಗಂಗಾವತಿ 9740793877 ಹಾಗೂ 08533-230929
* ಕಾರಟಗಿ 8792429600 ಹಾಗೂ 08533-275106/07
ಬೆಳೆ ಸಮೀಕ್ಷೆಗೆ ಆದ್ಯತೆ ನೀಡಿ; ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಇತ್ತಿಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈತರು ಭತ್ತ, ದ್ರಾಕ್ಷಿ, ಶೆಂಗಾ, ತೊಗರಿ, ಮೆಕ್ಕೆಜೋಳ, ಈರುಳ್ಳಿ, ಸೇರಿದಂತೆ ಈ ಭಾಗದ ಪ್ರಮುಖ ಬೆಳೆಗಳು ಹಾನಿಗೊಳಗಾಗಿದ್ದು, ಈ ಬೆಳೆಗಳ ಸಮೀಕ್ಷೆಯನ್ನು ಪ್ರಥಮ ಆದ್ಯತೆಯ ಮೇರೆಗೆ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಜೊತೆಗೆ ಇತರೆ ಇಲಾಖೆಗಳನ್ನು ಬಳಸಿಕೊಂಡು ನಷ್ಟದ ಅಂದಾಜು ಸಮೀಕ್ಷೆ ನಡೆಸಬೇಕು ಎಂದು ಕೊಪ್ಪಳ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗಿರುವುದರ ಬಗ್ಗೆ ವರದಿಯನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದು ಸರ್ಕಾರಕ್ಕೆ ವರದಿಯನ್ನು ರವಾನಿಸಲು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಈ ತುರ್ತು ಸಂದರ್ಭದಲ್ಲಿ ಆಯಾ ಜಿಲ್ಲೆಯ ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ದಲ್ಲಿಯೇ ಇದ್ದು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಪ್ರಥಮ ಆದ್ಯತೆಯ ಮೇರೆಗೆ ಕ್ರಮ ಕೈಗೊಳುವಂತೆ ಸಚಿವರು ತಿಳಿಸಿದ್ದಾರೆ.












Click it and Unblock the Notifications