ಕೊಪ್ಪಳ : ಹುಲಿಗೆಮ್ಮ ಜಾತ್ರೆಗೆ ಸಾಕ್ಷಿಯಾದ ಅಪಾರ ಭಕ್ತರು
ಕೊಪ್ಪಳ, ಮೇ 11 : ಕೊಪ್ಪಳ ತಾಲೂಕಿನ ಹುಲಿಗೆ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ವಿಜೃಂಭಣೆಯಿಂದ, ಅಪಾರ ಜನ ಸಾಗರದ ನಡುವೆ ರಥೋತ್ಸವ ಬುಧವಾರ ನಡೆಯಿತು.
ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ದೇವಾಲಯ. ಈ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ 10 ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಾಲಯದಲ್ಲಿ ನಡೆಯುತ್ತಿತ್ತು.

ಬುಧವಾರ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಸಂಜೆ 5.30ರ ಸುಮಾರಿಗೆ ಅಪಾರ ಜನ ಸಾಗರದ ನಡುವೆ, ಭಕ್ತರ ಉಧೋ ಉಧೋ ಘೋಷಣೆ ಮುಗಿಲು ಮುಟ್ಟಿತ್ತು. ರಥೋತ್ಸವ ಸಂಪನ್ನಗೊಂಡಿತು.

ದೇವಿಯ ದರ್ಶನಕ್ಕೆ ಆಗಮಿಸಿದ್ದ ಆಪಾರ ಭಕ್ತವೃಂದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿದರು. ದೇವಿಯ ದರ್ಶನ ಪಡೆದು ಪುನೀತರಾದರು. ಕೊಪ್ಪಳ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಜಾತ್ರೆಯನ್ನು ಕಣ್ತುಂಬಿಕೊಂಡರು.
ದೇವಾಲಯದ ಕುರಿತು : ಕೊಪ್ಪಳ ತಾಲೂಕಿನ ಶ್ರೀ ಹುಲಿಗೆಮ್ಮ ದೇವಾಲಯ ರಾಜ್ಯದ ಪ್ರಮುಖ ಶಕ್ತಿ ದೇವತೆಯ ಕ್ಷೇತ್ರವಾಗಿದೆ. ಕರ್ನಾಟಕ ಮಾತ್ರವಲ್ಲ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡುವಿನಿಂದಲೂ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ.
ಪ್ರತಿ ವರ್ಷ ಭರತ ಹುಣ್ಣಿಮೆಯ 9 ದಿನಗಳ ನಂತರ ಹುಲಿಗೆಮ್ಮ ದೇವಿಯ ಮಹಾರಥೋತ್ಸವ ನಡೆಯುತ್ತದೆ. ಜಾತ್ರೆ ಸಂದರ್ಭದಲ್ಲಿ ದೇವಾಲಯದ ಬಯಲಿನಲ್ಲಿಯೇ ಅಡಿಗೆ ಮಾಡಿ ದೇವಿಗೆ ನೈವೇದ್ಯ ಅರ್ಪಿಸುತ್ತಾರೆ.
ಪ್ರತಿ ವರ್ಷ ದೇವಿಯ ಜಾತ್ರೆಗೆ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಈ ಕ್ಷೇತ್ರದ ಪೂರ್ವಕ್ಕೆ ತುಂಗಭದ್ರಾ ನದಿ ಹರಿಯುತ್ತದೆ. ನದಿಯ ದಂಡೆಯಲ್ಲಿ ಶ್ರೀ ಸೋಮೇಶ್ವರ ಲಿಂಗವಿದ್ದು, ಅಲ್ಲಿಯೂ ವಿಶೇಷ ಪೂಜೆ ನಡೆಯುತ್ತದೆ.












Click it and Unblock the Notifications