ವರ್ಷಗಳ ಬೇಡಿಕೆಗೆ ಮನ್ನಣೆ; ನ.10ರಿಂದ ಕಾರಟಗಿಗೆ ರೈಲು
ಕೊಪ್ಪಳ, ನವೆಂಬರ್ 08; ಕೊಪ್ಪಳ ಜಿಲ್ಲೆಯ ಕಾರಟಗಿ ರೈಲು ನಿಲ್ದಾಣವನ್ನು ನವೆಂಬರ್ 10ರಂದು ಉದ್ಘಾಟನೆ ಮಾಡಲಾಗುತ್ತದೆ. ಜನರ ದಶಕಗಳ ಬೇಡಿಕೆ ಈಡೇರಲಿದ್ದು ಕಾರಟಗಿಯಿಂದ ರೈಲು ಸಂಚಾರ ಆರಂಭವಾಗುತ್ತಿದೆ.
ಗಿಣಿಗೇರಾ-ಮೆಹಬೂಬ್ ನಗರ ರೈಲ್ವೆ ಮಾರ್ಗದ ಕಾಮಗಾರಿ ಕಾರಟಗಿ ತನಕ ಪೂರ್ಣಗೊಂಡಿದೆ. ನವೆಂಬರ್ 10ರಂದು ಕಾರಟಗಿ ರೈಲು ನಿಲ್ದಾಣವನ್ನು ಕೊಪ್ಪಳ ಸಂಸದ ಸಂಗಣ್ಣ ಕರಡಿ ಉದ್ಘಾಟನೆ ಮಾಡಲಿದ್ದಾರೆ.
7 ತಿಂಗಳ ಹಿಂದೆಯೇ ರೈಲ್ವೆ ಇಲಾಖೆ ಅಧಿಕಾರಿಗಳು ಗಂಗಾವತಿ-ಕಾರಟಗಿ ತನಕ ರೈಲುಗಳ ಪ್ರಾಯೋಗಿಕ ಸಂಚಾರವನ್ನು ನಡೆಸಿ ರೈಲುಗಳ ವಾಣಿಜ್ಯ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಆದರೆ ಕೋವಿಡ್ ಲಾಕ್ಡೌನ್ ಪರಿಣಾಮ ರೈಲು ಸಂಚಾರ ಆರಂಭಗೊಂಡಿರಲಿಲ್ಲ.

ನವೆಂಬರ್ 10ರಿಂದ ಗಂಗಾವತಿಯಿಂದ ಕಾರಟಗಿ ತನಕ ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆ ಈಗಾಗಲೇ ಒಪ್ಪಿಗೆ ನೀಡಿದೆ. ಮೂರು ರೈಲುಗಳು ಕಾರಟಗಿ ತನಕ ಸಂಚಾರ ನಡೆಸಲಿದ್ದು, ಹುಬ್ಬಳ್ಳಿ, ಬೆಂಗಳೂರಿಗೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.
ಯಾವ-ಯಾವ ರೈಲು; ಕಾರಟಗಿ ರೈಲು ನಿಲ್ದಾಣ ನವೆಂಬರ್ 10ರಂದು ಉದ್ಘಾಟನೆಗೊಳ್ಳಲಿದ್ದು ಅಂದಿನಿಂದಲೇ ರೈಲುಗಳ ಸಂಚಾರ ಆರಂಭವಾಗಲಿದೆ. ಗಂಗಾವತಿ ತನಕ ಸಂಚಾರ ನಡೆಸುವ ರೈಲುಗಳನ್ನು ಕಾರಟಗಿ ತನಕ ವಿಸ್ತರಣೆ ಮಾಡಿ ನವೆಂಬರ್ 6ರಂದು ಆದೇಶ ಹೊರಡಿಸಲಾಗಿದೆ.
ರೈಲು ಸಂಖ್ಯೆ 07303/04 ಕಾರಟಗಿ-ಹುಬ್ಬಳ್ಳಿ ಎಕ್ಸ್ಪ್ರೆಸ್, 07381/02 ಕಾರಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ಮತ್ತು 06207/08 ಕಾರಟಗಿ ಯಶವಂತಪುರ ರೈಲುಗಳು ನೂತನ ರೈಲು ನಿಲ್ದಾಣದಿಂದ ಸಂಚಾರ ನಡೆಸಲಿವೆ.
ಬೆಂಗಳೂರು, ಹುಬ್ಬಳ್ಳಿಯನ್ನು ಕಾರಟಗಿ ರೈಲು ನಿಲ್ದಾಣಕ್ಕೆ ಸಂಪರ್ಕಿಸಲಿದೆ. ಇದರಿಂದಾಗಿ ರೈತರು, ವ್ಯಾಪಾರಿಗಳು ಉಭಯ ನಗರಗಳಿಗೆ ಕಡಿಮೆ ದರದಲ್ಲಿ ಸಂಚಾರ ನಡೆಸಬಹುದಾಗಿದೆ.
ಎಚ್. ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಗಿಣಗೇರಾ ಕಾರಟಗಿ 66 ಕಿ. ಮೀ. ರೈಲು ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಸಂಸದ ಸಂಗಣ್ಣ ಕರಡಿ ಯೋಜನೆ ಪೂರ್ಣಗೊಳಿಸಲು ಆದ್ಯತೆ ನೀಡಿದ್ದರು. ಈ ಮಾರ್ಗದ ಕಾಮಗಾರಿ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗುತ್ತಿದೆ.
ರೈಲು ಸೇವೆ ವಿಸ್ತರಣೆಗೆ ಒತ್ತಾಯ; ಕೊಪ್ಪಳ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಪದಾಧಿಕಾರಿಗಳು ಕಾರಟಗಿ-ಹುಬ್ಬಳ್ಳಿ ರೈಲನ್ನು ಪಣಜಿ ತನಕ ವಿಸ್ತರಣೆ ಮಾಡಬೇಕು ಎಂದು ಸಂಸದ ಸಂಗಣ್ಣ ಕರಡಿಗೆ ಮನವಿ ಸಲ್ಲಿಸಿದ್ದಾರೆ.
ರೈಲುಗಳ ವಿಸ್ತರಣೆಯಿಂದ ಗಂಗಾವತಿ ಭಾಗದ ವಾಣಿಜ್ಯ ಚಟುವಟಿಕೆ ಮತ್ತು ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ಮನವಿ ಮಾಡಲಾಗಿದೆ. ಸೊಲ್ಹಾಪುರ-ಗದಗ ರೈಲನ್ನು ಕಾರಟಗಿ ತನಕ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.
06207/08 ಕಾರಟಗಿ ಯಶವಂತಪುರ ರೈಲು ಹೊರತು ಪಡಿಸಿ ಕಾರಟಗಿ-ಬೆಂಗಳೂರು ನಡುವೆ ಮತ್ತೊಂದು ರೈಲು ಸಂಚಾರ ನಡೆಸಲು ಸಹ ಬೇಡಿಕೆ ಇಡಲಾಗಿದೆ. ರೈಲ್ವೆ ಇಲಾಖೆಗೆ ಈ ಕುರಿತು ಪ್ರಸ್ತಾವನೆ ಸಹ ಸಲ್ಲಿಕೆ ಮಾಡಲಾಗಿದೆ. ಆದರೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.
ಗಂಗಾವತಿಯಿಂದ ಹೊರಡುವ ರೈಲು ಶ್ರೀರಾಮನಗರ, ಸಿದ್ದಾಪುರ ಮೂಲಕ ಕಾರಟಗಿಗೆ ತಲುಪಲಿದೆ. ಈ ರೈಲು ಮಾರ್ಗ ನಿರ್ಮಾಣ 2020ರಲ್ಲಿಯೇ ಪೂರ್ಣಗೊಂಡಿತ್ತು. 2021ರ ಮಾರ್ಚ್ನಲ್ಲಿ ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡಿತ್ತು. ಆದರೆ ರೈಲು ಸಂಚಾರ ಆರಂಭವಾಗಿರಲಿಲ್ಲ.
2017ರಲ್ಲಿ ಚಿಕ್ಕಬೆಣಕಲ್ ತನಕ ರೈಲು ಸಂಚಾರ ಆರಂಭವಾಗಿತ್ತು. ಚಿಕ್ಕಬೆಣಕಲ್-ಗಂಗಾವತಿ 13 ಕಿ. ಮೀ. ಮಾರ್ಗದಲ್ಲಿ 2019ರಲ್ಲಿ ರೈಲು ಓಡಿತ್ತು. ಈಗ ಗಂಗಾವತಿ-ಕಾರಟಗಿ 27 ಕಿ. ಮೀ. ನಡುವೆ ರೈಲು ಸಂಚಾರ ಆರಂಭವಾಗುತ್ತಿದೆ.
ಕಾರಟಗಿ ಪಟ್ಟಣದಲ್ಲಿ ಅತಿ ಹೆಚ್ಚು ರೈಸ್ ಮಿಲ್ಗಳಿವೆ. ಇದು ಪ್ರಮುಖ ವಾಣಿಜ್ಯ ಪಟ್ಟಣವಾಗಿದೆ. ಈಗ ರೈಲು ಸಂಚಾರ ಆರಂಭವಾಗಿರುವುದು ಬೆಂಗಳೂರು, ಹುಬ್ಬಳ್ಳಿಯಿಂದ ಹೆಚ್ಚಿನ ವ್ಯಾಪಾರಿಗಳು ಆಗಮಿಸಲು ಅನುಕೂಲವಾಗಿದೆ.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications