ಕೊಪ್ಪಳ; ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರಲ್ಲಿ ಮೂವರ ಮೃತದೇಹ ಪತ್ತೆ
ಕೊಪ್ಪಳ, ಅ.03: ಕೊಪ್ಪಳ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಳೆದ ರಾತ್ರಿ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ನಾಲ್ವರು ಮಹಿಳೆಯರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು.
ನಾಲ್ವರು ಮಹಿಳೆಯರ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಕಳೆದ ರಾತ್ರಿ ಸಂಕನೂರು ಗ್ರಾಮದ ಹೊರವಲಯದ ಹಳ್ಳದಲ್ಲಿ ಗಿರಿಜಾ ಮಾಲಿ ಪಾಟೀಲ್(40), ಭುವನೇಶ್ವರಿ ಪೊಲೀಸ್ ಪಾಟೀಲ್(40), ಪವಿತ್ರಾ ಪೊಲೀಸ್ ಪಾಟೀಲ್(45), ವೀಣಾ ಮಾಲಿ ಪಾಟೀಲ್(19) ಎಂಬ ನಾಲ್ವರು ಕೊಚ್ಚಿಕೊಂಡು ಹೋಗಿದ್ದರು.
ನಾಲ್ವರು ಕೆಲಸಕ್ಕೆ ಹೋಗಿ ಮರಳಿ ಗ್ರಾಮಕ್ಕೆ ಬರುವಾಗ ನೀರಿನ ರಭಸ ಲೆಕ್ಕಿಸದೇ ಹಳ್ಳಕ್ಕೆ ಇಳಿದಿದ್ದರು. ಹಳ್ಳದಲ್ಲಿ ಇಳಿಯುತ್ತಲೇ ನೀರಿನಲ್ಲಿ ಪವಿತ್ರಾ ಮತ್ತು ವೀಣಾ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿದ್ದರು. ಕೆಲಹೊತ್ತು ಹಳ್ಳದಲ್ಲಿನ ಗಿಡ ಹಿಡಿದುಕೊಂಡಿದ್ದ ಗಿರಿಜಾ ಮತ್ತು ಭುವನೇಶ್ವರಿ ಗ್ರಾಮಸ್ಥರು ರಕ್ಷಿಸಲು ಮುಂದಾಗುವ ಸಮಯದಲ್ಲಿ ಕೊಚ್ಚಿಹೋಗಿದ್ದರು.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಚರಣೆ ಆರಂಭಿಸಿದ್ದರು. ಭುವನೇಶ್ವರಿ ಪೊಲೀಸ್ ಪಾಟೀಲ್ (40), ಗಿರಿಜಾ ಮಾಲಿ ಪಾಟೀಲ್ (40) , ವೀಣಾ ಮಾಲಿಪಾಟೀಲ್(19) ಮೃತದೇಹ ಪತ್ತೆಯಾಗಿದೆ. ಸೇತುವೆಯಿಂದ 2 ಕಿಲೋಮೀಟರ್ ದೂರದಲ್ಲಿ ವೀಣಾ ಮೃತದೇಹ ಪತ್ತೆಯಾಗಿದೆ. ಮತ್ತಿಬ್ಬರಿಗಾಗಿ ಶೋಧಕಾರ್ಯ ಮುಂದುವರೆಯುತ್ತಿದೆ.

ಇನ್ನು, ಜಿಲ್ಲೆಯಾದ್ಯಂತ ತುಂಬಿ ಹರಿಯುತ್ತಿರುವ ಹಳ್ಳ-ಕೊಳ್ಳಗಳಿದ್ದರೂ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಶಿವಪುರ ಗ್ರಾಮದಲ್ಲಿ ಬೈಕ್ ಸವಾರರು ಹಳ್ಳಕ್ಕೆ ಇಳಿಸಿದ್ದಾರೆ. ಈ ವೇಳೆ ಇಬ್ಬರ ಬೈಕ್ ಹಳ್ಳದ ಪಾಲಾಗಿದ್ದು, ಅದೃಷ್ಟವಶಾತ್ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮಸ್ಥರು ನೀರಿನಲ್ಲಿ ಮುಳುಗಿ ಒಬ್ಬರ ಬೈಕ್ ತೆಗೆದುಕೊಂಡು ಬಂದಿದ್ದಾರೆ. ಇನ್ನೂಬ್ಬರ ಬೈಕ್ಗಾಗಿ ಶೋಧ ನಡೆಯುತ್ತಿದೆ.












Click it and Unblock the Notifications