ಕೊಪ್ಪಳ: ದಲಿತ ಮಗು ದೇವಸ್ಥಾನ ಪ್ರವೇಶಕ್ಕೆ ದಂಡ ವಿಧಿಸಿದ ಪ್ರಕರಣ; 5 ಆರೋಪಿಗಳ ಬಂಧನ
ಕೊಪ್ಪಳ, ಸೆಪ್ಟೆಂಬರ್ 22: "ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮಿಯ್ಯಾಪೂರ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದ 4 ವರ್ಷದ ಮಗುವೊಂದು ದೇವಸ್ಥಾನದೊಳಗೆ ಪ್ರವೇಶಿಸಿದ ಬಗ್ಗೆ ದಂಡ ವಿಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಲಾಗಿದೆ," ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ತಿಳಿಸಿದ್ದಾರೆ.
"ಇದೇ ಸೆ.04ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮಿಯ್ಯಾಪೂರ ಗ್ರಾಮದ ಪರಿಶಿಷ್ಟ ಜನಾಂಗಕ್ಕೆ ಸೇರಿದ ವ್ಯಕ್ತಿ ತನ್ನ 4 ವರ್ಷದ ಮಗನ ಹುಟ್ಟುಹಬ್ಬದ ಪ್ರಯುಕ್ತ ಪೂಜೆ ಮಾಡಿಸಲು ಗ್ರಾಮದ ಮಾರುತೇಶ್ವರ (ಆಂಜನೇಯ) ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದು, ಪೂಜೆ ಮಾಡಿಸುವ ವೇಳೆ ಮಳೆ ಬಂದ ಕಾರಣ ಮಗು ದೇವಸ್ಥಾನದ ಒಳಗಡೆ ಹೋಗಿದ್ದರಿಂದ ಮಗುವಿನ ತಂದೆ ದೇವಸ್ಥಾನದ ಒಳಗಡೆ ಹೋಗಿ ತನ್ನ ಮಗನನ್ನು ಕರೆದುಕೊಂಡು ಬಂದಿದ್ದರು."
"ಇದನ್ನು ನೋಡಿದ ದೇವಸ್ಥಾನದ ಪೂಜಾರಿ ಮತ್ತು ಗ್ರಾಮದ ಕೆಲ ಸವರ್ಣೀಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಗ್ರಾಮದ ಮುಖಂಡರು ಸಭೆ ಸೇರಿ ದೇವಸ್ಥಾನ ಅಪವಿತ್ರವಾಗಿದೆ, ಶುದ್ಧಿ ಕಾರ್ಯ ಮಾಡಲು ದಂಡ ಕಟ್ಟಬೇಕು ಎಂದು ಒತ್ತಾಯ ಮಾಡಿದ್ದರು."

"ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಸೆ.21ರಂದು ಸರ್ಕಾರದ ವತಿಯಿಂದ ಕುಷ್ಟಗಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ 5 ಜನರ ವಿರುದ್ಧ ಎಸ್ಸಿ/ ಎಸ್ಟಿ ಕಾಯ್ದೆ- 2015ರ ಪ್ರಕಾರ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ."
"ಇಂತಹ ಅಸ್ಪೃಶ್ಯತೆ ಆಚರಣೆ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧ ಕೃತ್ಯವಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಇಂತಹ ಅನಿಷ್ಟ ಆಚರಣೆಗಳು ಕಂಡುಬಂದಲ್ಲಿ ಅಂತವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು," ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲರೂ ಒಂದಾಗಿ ಬಾಳುವಂತೆ ಮನವಿ
ಇಂಥ ಅಸ್ಪೃಶ್ಯತೆ ಆಚರಣೆ ತಡೆಯಬೇಕು, ದಲಿತ ಸಮುದಾಯಗಳು ಎಲ್ಲರಂತೆ ಬೆರತು ಜೀವನ ನಡೆಸಲು ಅವಕಾಶ ನೀಡಬೇಕೆಂದು ಮಿಯ್ಯಾಪುರ ಗ್ರಾಮದ ದಲಿತ ಸಮುದಾಯದವರು ಮನವಿ ಮಾಡಿಕೊಂಡಿದ್ದರು. ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ ಪ್ರಕರಣದ ನಂತರ ಗ್ರಾಮಕ್ಕೆ ಕುಷ್ಟಗಿ ತಹಶೀಲ್ದಾರ ಸಿದ್ದೇಶ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಭೇಟಿ ನೀಡಿ ಸಭೆ ನಡೆಸಿದರು.
ಮುಂದೆ ಇಂಥ ಘಟನೆಯಾಗದಂತೆ ಎಚ್ಚರಿಕೆ ನೀಡಿದ್ದರು, ಅದಕ್ಕೆ ಗ್ರಾಮಸ್ಥರು ಸಹ ಒಪ್ಪಿಕೊಂಡು ಯಾವುದೋ ತಪ್ಪು ಕಲ್ಪನೆಯಿಂದ ಈ ರೀತಿಯಾಗಿದೆ, ಮುಂದಿನ ದಿನಗಳಲ್ಲಿ ಎಲ್ಲರೂ ಒಂದಾಗಿರುತ್ತೇವೆ ಎಂದು ಹೇಳಿದ್ದರು. ಇಷ್ಟೆಲ್ಲಾ ರಾದ್ಧಾಂತವಾಗಿ ನಂತರ ರಾಜಿಯಾದ ಮೇಲೆ ಊರಿನ ದಲಿತರೆಲ್ಲಾ ದೇವಸ್ಥಾನದೊಳಗೆ ಹೋಗಿದ್ದರು.
ಇದು ಕೇವಲ ಕೊಪ್ಪಳ ಜಿಲ್ಲೆ ಪರಿಸ್ಥಿತಿ ಮಾತ್ರವಲ್ಲ. ಇಡೀ ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದೇಶದ ಬಹುತೇಕ ಗ್ರಾಮೀಣ ಭಾಗದಲ್ಲಿ ದಲಿತರಿಗೆ ಈಗಲೂ ದೇವಸ್ಥಾನ, ಹೋಟೆಲ್, ಕುಡಿಯುವ ನೀರು, ಸಭೆ- ಸಮಾರಂಭಗಳಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ನಾವೆಲ್ಲರೂ ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದು, ವಿದ್ಯಾವಂತ ಸಮಾಜ ನಿರ್ಮಾಣವಾಗುತ್ತಿದೆ.
ಒಟ್ಟಾರೆಯಾಗಿ ಅಸ್ಪೃಶ್ಯತೆ ಎಂಬುದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ದೂರ ಮಾಡಬೇಕು. ಈ ಘಟನೆಗಳು ಮರುಕಳಿಸದಂತೆ ಜನರಲ್ಲಿ ಜಾಗೃತಿ ಮೂಡಿಸಿ ಅಸ್ಪೃಶ್ಯತೆ ನಿರ್ಮೂಲನೆ ಮಾಡುವುದು ಅವಶ್ಯವಾಗಿದೆ.












Click it and Unblock the Notifications