ನೋಡಬನ್ನಿ ನಿಡಶೇಸಿ; ಬಿಸಿಲ ನಾಡಲ್ಲಿ ಕಣ್ಣಿಗೆ ತಂಪೀಯುವ ಹಕ್ಕಿಗಳ ಕಲರವ
ಕೊಪ್ಪಳ, ಅಕ್ಟೋಬರ್ 19: ಬಿಸಿಲ ನಾಡು, ಬರದ ಬೀಡು ಎಂದು ಕರೆಸಿಕೊಳ್ಳುವ ಜಿಲ್ಲೆಗಳಲ್ಲಿ ಕೊಪ್ಪಳ ಸಹ ಒಂದು. ಆದರೆ ಈ ಬಿಸಿಲ ನಾಡಲ್ಲೀಗ ಕಣ್ಣಿಗೆ ತಂಪು ನೀಡುವ ಸಂಗತಿ ಎಲ್ಲರ ಚಿತ್ತ ಸೆಳೆಯುತ್ತಿದೆ. ನಿಡಶೇಸಿ ಕೆರೆಯಲ್ಲಿನ ಹಕ್ಕಿಗಳ ಕಲರವ ಎಲ್ಲರನ್ನೂ ಬರಮಾಡಿಕೊಳ್ಳುತ್ತಿದೆ.
ಕೆಂಚನಗುಡ್ಡದ ಸುತ್ತ ಕಿಂಗ್ ಫಿಷರ್ ಗಳ ಕಲರವ ಕೇಳ ಬನ್ನಿ
ಜಿಲ್ಲೆಯ ದಾಳಿಂಬೆ ನಗರಿ ಎಂದು ಕರೆಸಿಕೊಳ್ಳುವ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ಯಾರಿಗೆ ಗೊತ್ತಿಲ್ಲ ಹೇಳಿ? ಆದರೆ ನಿರಂತರ ಬರಗಾಲದಿಂದಾಗಿ ಕೆರೆ ತುಂಬದೇ ವರ್ಷಗಳೇ ಕಳೆದುಹೋಗಿದ್ದವು. ಹೀಗಾಗ್ಯೂ ಕುಷ್ಟಗಿ ತಾಲೂಕಿನ ವಿವಿಧೆಡೆ ಈ ಬಾರಿ ತುಂಬಾ ಮಳೆಯಾಗಿದೆ. ಇದರಿಂದ ನಿಡಶೇಸಿ ಕೆರೆ ಭರ್ತಿಯಾಗಿದ್ದು, ಗ್ರಾಮದ ಜನರಿಗೆ ಮಾತ್ರವಲ್ಲ, ಬಾನಾಡಿಗಳಲ್ಲೂ ಸಂತಸ ತಂದಿದೆ. ಸುಮಾರು ದಶಕದ ನಂತರ ಕೆರೆ ಸುತ್ತಮುತ್ತ ದೇಶಿ ಬಾನಾಡಿಗಳ ಕಲರವ ಕೇಳಿಬರುತ್ತಿದೆ.
ಹಿಂಗಾರು ಮಳೆ ಕೊಟ್ಟ ಹಸಿರು ಫಲ
ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃಧ್ಧಿಗೊಂಡಿರುವ ಈ ಕೆರೆಗೆ ಮುಂಗಾರು ಗತಿಸಿದರೂ ನೀರಿರಲಿಲ್ಲ. ಆದರೆ ಹಿಂಗಾರು ಕೊನೆಯ ಘಟ್ಟದಲ್ಲಿ ಸುರಿದ ಭಾರಿ ಮಳೆಗೆ ಕೆರೆ ತುಂಬಿಕೊಂಡಿತು. ನೀರು ತುಂಬುತ್ತಿದ್ದಂತೆ ಕೆರೆ ಸುತ್ತಮುತ್ತಲಿನ ತೋಟಗಳು ಹಸಿರಿನಿಂದ ಕಂಗೊಳಿಸಲು ಆರಂಭಿಸಿದವು. ಈ ಕೆರೆಯೀಗ ಪಕ್ಷಿಗಳಿಗೆ ಆಸರೆ ತಾಣವಾಗಿ ಬದಲಾಗಿದೆ. ಪಕ್ಷಿಗಳ ಕಲರವ ಕೆರೆಯ ಅಂದವನ್ನು ಹೆಚ್ಚಿಸಿದೆ.
ಕೆರೆಯಂಗಳಕ್ಕೆ ಜಮಾಯಿಸುತ್ತಿರುವ ನಮನಮೂನೆ ಹಕ್ಕಿಗಳು
ಸುಮಾರು ವರ್ಷಗಳಿಂದ ಬರಗಾಲದ ಬೇಗುದಿಗೆ ನಿಡಶೇಸಿ ಕೆರೆ ಬತ್ತಿಹೋಗಿತ್ತು. ಹೀಗಾಗಿ ಪ್ರಾಣಿ ಪಕ್ಷಿಗಳು ಕೆರೆಯತ್ತ ಮುಖ ಮಾಡಿರಲಿಲ್ಲ. ಇದನ್ನು ಮನಗಂಡ ಪಕ್ಷಿಪ್ರಿಯರು, ಸಮಾಜಪರ ಸಂಘಟನೆಗಳ ಕಾರ್ಯಕರ್ತರು ಪ್ರಾಣಿ ಪಕ್ಷಿಗಳಿಗೆ ಅಲ್ಲಲ್ಲಿ ನೀರಿನ ಅರವಟ್ಟಿಗೆಗಳನ್ನು ಇಟ್ಟು ಅನುಕೂಲ ಮಾಡಿಕೊಡುವ ಕಾರ್ಯವನ್ನು ಮಾಡಿದ್ದರು.
ಈಗ ಮಳೆರಾಯನ ಕೃಪೆಗೆ ಈ ಕೆರೆಗೆ ನೀರು ಹರಿದುಬಂದಿದೆ. ಪಕ್ಷಿಗಳ ಆಗಮನವೂ ಆಗುತ್ತಿದೆ. ಕೆರೆಯಂಗಳದಲ್ಲಿ ಹಿಂಡು ಹಿಂಡಾಗಿ ಪಕ್ಷಿಗಳು ಜಮಾಯಿಸುತ್ತಿವೆ.
ಇನ್ನು ಮುಂದೆ ರಂಗನತಿಟ್ಟಿನಲ್ಲಿ ವರ್ಷ ಪೂರ್ತಿ ಪ್ರವಾಸಿಗರಿಗೆ ಬೋಟಿಂಗ್ ಅನುಭವ
ಬೂದುಬುಕ್ಕ, ಹುಲ್ಲಂಕಿ, ಗುಳಮುಳಕ....
ದಿನ ಕಳೆದಂತೆ ಥರಾವರಿ ಪಕ್ಷಿಗಳು ಬರುತ್ತಿವೆ. ಕೆರೆಯಂಗಳದಲ್ಲಿ ಪಕ್ಷಿಗಳಿಗಾಗಿ ನಿರ್ಮಿಸಿದ ನಡುಗಡ್ಡೆಗಳಲ್ಲಿ ಆಹಾರಕ್ಕಾಗಿ ಹಕ್ಕಿಗಳು ಕಾದು ಕುಳಿತಿರುವ ದೃಶ್ಯ ಕಂಡುಬರುತ್ತದೆ. ಚುಕ್ಕೆ ಬಾತು, ಬಣ್ಣದ ಕೊಕ್ಕರೆ, ಬೆಳ್ಳಕ್ಕಿ, ಬಿಳಿ, ಕರಿ ಬಣ್ಣದ ಕೆಂಬರ್ಲು, ಬೂದುಬುಕ್ಕ, ಹುಲ್ಲಂಕಿ, ಗುಳಮುಳಕ, ಮೆಟ್ಟಗಾಲು ಹಕ್ಕಿ, ಟಿಟ್ಟಿಬಾ ಮೊದಲಾದ ಪಕ್ಷಿಗಳು ಇಲ್ಲಿಗೆ ಬಂದಿದ್ದು, ಇನ್ನೂ ಹಲವು ನಮೂನೆಯ ಪಕ್ಷಿಗಳ ಆಟವನ್ನು ಕಣ್ತುಂಬಿಕೊಳ್ಳುವ ತಾಣವಾಗಿ ನಿಡಶೇಸಿ ಕೆರೆ ಮಾರ್ಪಟ್ಟಿದೆ.
ಡಿಸೆಂಬರ್ ನಲ್ಲಿ ವಿದೇಶಿ ಹಕ್ಕಿಗಳ ನಿರೀಕ್ಷೆ
ಸತತ ಬರ, ಮಳೆ ಅಭಾವದ ಹಿನ್ನೆಲೆಯಲ್ಲಿ ನಿಡಶೇಸಿ ಕೆರೆ ಬತ್ತಿದ್ದರಿಂದ ವಿದೇಶಿ ಹಕ್ಕಿಗಳು ಬಂದಿರಲಿಲ್ಲ. ಇದೀಗ ನೀರು ಬಂದಿದ್ದು, ಸದ್ಯ ದೇಶಿ ಹಕ್ಕಿಗಳನ್ನು ಕಾಣಬಹುದಾಗಿದೆ. ನವೆಂಬರ್, ಡಿಸೆಂಬರ್ ವೇಳೆ ಚಳಿ ಹೆಚ್ಚುವ ಹಿನ್ನೆಲೆಯಲ್ಲಿ ವಿದೇಶಿ ಹಕ್ಕಿಗಳ ಆಗಮನದ ನಿರೀಕ್ಷೆ ಇದೆ. ಕೆರೆ ಅಭಿವೃಧ್ಧಿ ಸಂದರ್ಭದಲ್ಲಿ ಕೆರೆ ದಡದಲ್ಲಿದ್ದ ಗಿಡಗಳನ್ನು ತೆರವುಗೊಳಿಸಲಾಗಿದ್ದು, ಸದ್ಯ ಪಕ್ಷಿಗಳು ಕೂರಲು ಗಿಡಗಳ ವ್ಯವಸ್ಥೆ ಇಲ್ಲ. ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಬೇಗ ಬೆಳೆಯುವ ಗಿಡ, ಪೊದೆ ಸಸ್ಯಗಳನ್ನು ನೆಡುವುದಂದ ಪಕ್ಷಿಗಳಿಗೆ ವಿಶ್ರಾಂತಿಗೆ ಹಾಗೂ ಗೂಡು ಕಟ್ಟಲು ಸಹಕಾರಿಯಾಗಲಿದೆ.
ಹಂಪಿಯಲ್ಲಿ ಕಾಣಿಸಿಕೊಂಡಿದೆ ಅಪರೂಪದ ಹಳದಿಕಾಲಿನ ಹಸಿರು ಪಾರಿವಾಳ
ಸಂತಾನಾಭಿವೃದ್ಧಿಗೆ ಪ್ರಾಶಸ್ತ್ಯ
ಕೆರೆಯು ಸದ್ಯ ಪಕ್ಷಿಗಳಿಗೆ ಸಂತಾನವೃದ್ಧಿಗೆ ಪ್ರಾಶಸ್ತ್ಯ ಎನಿಸಿದೆ. ಆದರೆ ಕೆರೆ ಸುತ್ತಲು ಗಿಡಗಳಿಲ್ಲ. ತೋಟ ಪಟ್ಟಿಗಗಳಲ್ಲಿರುವ ಗಿಡಗಳನ್ನೇ ಆಶ್ರಯಿಸಬೇಕಿದೆ. ಅರಣ್ಯ ಇಲಾಖೆ ಕೆರೆಯ ಸರಹದ್ದಿನ ಒಡ್ಡಿನ ಸುತ್ತಲೂ ಗಿಡ ನೆಟ್ಟಿದ್ದು, ಜನರ ಓಡಾಟದ ಹಿನ್ನೆಲೆಯಲ್ಲಿ ಪಕ್ಷಿಗಳು ಕೆರೆ ದಡಕ್ಕೆ ಆಗಮಿಸುತ್ತಿಲ್ಲ. ಕೆಲ ಸಮಯ ಮಾತ್ರ ಕೆರೆ ದಡದಲ್ಲಿ ಕಾಣಿಸಿಕೊಳ್ಳುವ ಪಕ್ಷಿಗಳು, ಬಹುತೇಕ ಸಮಯವನ್ನು ಕೆರೆಯ ನಡುಗಡ್ಡೆಗಳಲ್ಲಿ ಕಳೆಯುತ್ತವೆ. ಹೀಗಾಗಿ ಪಕ್ಷಿಗಳ ನೈಜತೆಯನ್ನು ದೂರದರ್ಶಕ ಸಾಧನದಿಂದ ನೋಡಬಹುದಾಗಿದೆ.