ಕೊಪ್ಪಳದ ಅಂಜನಾದ್ರಿ ಬೆಟ್ಟ ಮುಜರಾಯಿ ಇಲಾಖೆ ವಶಕ್ಕೆ?
ಕೊಪ್ಪಳ, ಜುಲೈ 24 : ಸ್ಥಳೀಯರ ವಿರೋಧದ ನಡುವೆಯೇ ಅಂಜನಾದ್ರಿ ಬೆಟ್ಟವನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಬೆಟ್ಟವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಕುರಿತು ಜಿಲ್ಲಾಧಿಕಾರಿಗಳು ನಿರ್ಧಾರವನ್ನು ಕೈಗೊಳ್ಳಬೇಕಿದೆ.
ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು ಅರ್ಚಕರಿಂದ ವಿವಿಧ ಮಾಹಿತಿಗಳನ್ನು ಸಂಗ್ರಹಿಸಿದರು. ದೇಗುಲದ ವ್ಯಾಪ್ತಿ, ಬೆಟ್ಟದ ವಿಸ್ತೀರ್ಣ, ಅರಣ್ಯ ಇಲಾಖೆ ಸೇರಿದ ಪ್ರದೇಶದ ಕುರಿತು ವಿವರಗಳನ್ನು ಪಡೆದರು.
ಬೌಗೋಳಿಕ ವಿಸ್ತೀರ್ಣ, ದೇವಾಲಯಕ್ಕಿರುವ ಆದಾಯ, ಸಂಗ್ರಹವಾಗುವ ಆದಾಯ, ಚಿನ್ನ, ಬೆಳ್ಳಿ ವಸ್ತುಗಳ ಬಗ್ಗೆ ವಿವರವಾದ ವರದಿ ಸಿದ್ಧಪಡಿಸಿ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ನೀಡಲಿದ್ದಾರೆ.

'ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ. ಮುಂದಿನ ಕ್ರಮ, ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಬಗ್ಗೆ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಾರೆ' ಎಂದು ತಹಶೀಲ್ದಾರ್ ಎಲ್.ಡಿ.ಚಂದ್ರಕಾಂತ್ ಹೇಳಿದರು.
ಅಂಜನಾದ್ರಿ ಬೆಟ್ಟವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಶೀಘ್ರದಲ್ಲಿಯೇ ಸ್ಥಳೀಯರ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ದೇವಾಲಯವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತಂದರೂ ಸ್ಥಳೀಯವಾಗಿ ಒಂದು ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಸ್ಥಳೀಯರನ್ನು ಸಮಿತಿಗೆ ಸೇರಿಸಿಕೊಳ್ಳಲು ಅವಕಾಶವಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಅಂಜನಾದ್ರಿ ಬೆಟ್ಟವಿದೆ. ಐತಿಹಾಸಿಕ ಹಿನ್ನಲೆಯನ್ನು ಬೆಟ್ಟ ಹೊಂದಿದೆ. ಹನುಮಂತ ಇಲ್ಲಿ ಜನಿಸಿದ್ದಾನೆ ಎಂಬ ನಂಬಿಕೆ ಇದ್ದು, ಸಾವಿರಾರು ಭಕ್ತರು ಇಲ್ಲಿನ ದೇವಾಲಯಕ್ಕೆ ಭೇಟಿ ನೀಡುತ್ತಾರೆ.












Click it and Unblock the Notifications