ಆಲಮಟ್ಟಿ-ಚಿತ್ರದುರ್ಗ ಹೊಸ ರೈಲು ಮಾರ್ಗ; ಶೀಘ್ರ ವರದಿ ಸಲ್ಲಿಕೆ
ಕೊಪ್ಪಳ, ಜುಲೈ 15; ಆಲಮಟ್ಟಿ- ಚಿತ್ರದುರ್ಗ ನೇರ ರೈಲು ಮಾರ್ಗದ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಈ ಮಾರ್ಗಕ್ಕೆ ಕೊಪ್ಪಳ ಜಿಲ್ಲೆಯನ್ನು ಸೇರಿಸಲಾಗಿದ್ದು, ರೈಲ್ವೆ ಇಲಾಖೆಗೆ ಸಮೀಕ್ಷೆ ವರದಿಯನ್ನು ಎರಡು ವಾರದಲ್ಲಿ ಸಲ್ಲಿಸಲಾಗುತ್ತದೆ.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ರೈಲು ಮಾರ್ಗದ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ವಲಯದ ರೈಲ್ವೆ ಮಹಾಪ್ರಬಂಧಕ ಸಂಜೀವ್ ಕಿಶೋರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಚಿವರ ಜೊತೆ ಭಾರತ್ ಗೌರವ್ ರೈಲು ಬೋಗಿ ಪರಿಶೀಲಿಸಿದ ರೋಹಿಣಿ ಸಿಂಧೂರಿ
ಸಭೆಯ ಬಳಿಕ ಮಾತನಾಡಿದ ಕೊಪ್ಪಳ ಸಂಸದ ಸಂಗಣ್ಣ ಕರಡಿ, "ಹೊಸ ರೈಲು ಮಾರ್ಗ ಬಹುಜನರ ಬೇಡಿಕೆಯಾಗಿತ್ತು. ಆಮಮಟ್ಟಿ-ಚಿತ್ರದುರ್ಗ ನೇರ ರೈಲು ಮಾರ್ಗಕ್ಕೆ ಕೊಪ್ಪಳವನ್ನೂ ಸಹ ಸೇರ್ಪಡೆಗೊಳಿಸಲಾಗಿದೆ" ಎಂದು ಹೇಳಿದ್ದಾರೆ.
ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 112 ಕೋಟಿ ಅನುದಾನ
ಆಲಮಟ್ಟಿ-ಚಿತ್ರದುರ್ಗ ನೂತನ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಈ ಹಿಂದೆಯೇ ಸಮೀಕ್ಷೆ ನಡೆದಿತ್ತು. ಆದರೆ ಕೊಪ್ಪಳವನ್ನು ಸೇರ್ಪಡೆಗೊಳಿಸಿರಲಿಲ್ಲ. ಈಗ ಕೊಪ್ಪಳವನ್ನು ಸಹ ಸೇರ್ಪಡೆಗೊಳಿಸಲಾಗಿದೆ. ಎರಡು ವಾರದಲ್ಲಿ ವರದಿ ಇಲಾಖೆಗೆ ಸಲ್ಲಿಕೆಯಾಗಲಿದೆ.
ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ಶೀಘ್ರ ಆರಂಭ
ವಿವಿಧ ರೈಲು ಯೋಜನೆಗಳು; ವಿವಿಧ ರೈಲು ಯೋಜನೆಗಳ ಕುರಿತು ಮಾತನಾಡಿದ ಸಂಸದರು, "ದರೋಜಿ-ಗಂಗಾವತಿ ನೂತನ ರೈಲ್ವೆ ಮಾರ್ಗದ ಸಮೀಕ್ಷೆ ಕಾರ್ಯಕ್ಕೆ ರೈಲ್ವೆ ಇಲಾಖೆ ಈಗಾಗಲೇ ಮಂಜೂರಾತಿ ನೀಡಿದ್ದು, ಐತಿಹಾಸಿಕ ತಾಣಗಳ ಸಂಪರ್ಕ ಹಾಗೂ ಉದ್ಯಮಕ್ಕೆ ಅನುಕೂಲವಾಗುವಂತೆ ಈ ಯೋಜನೆಯನ್ನು ಮಾರ್ಪಡಿಸಿ, ದರೋಜಿ-ಗಂಗಾವತಿ ರೈಲ್ವೆ ಮಾರ್ಗವನ್ನು ಬಾಗಲಕೋಟೆಯವರೆಗೂ ವಿಸ್ತರಿಸುವಂತೆ ಮನವಿ ಮಾಡಲಾಗಿದೆ" ಎಂದರು.
ದರೋಜಿ-ಗಂಗಾವತಿ ರೈಲು ಮಾರ್ಗ ಬಾಗಲಕೋಟೆಯವರೆಗೂ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಮಹಾಪ್ರಬಂಧಕರು ಸಮ್ಮತಿ ಸೂಚಿಸಿದ್ದಾರೆ. ಶೀಘ್ರದಲ್ಲಿಯೇ ಈ ಕುರಿತ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಗದಗ-ವಾಡಿ ಮಾರ್ಗ; ಗದಗ-ವಾಡಿ ರೈಲ್ವೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, 2023ರ ಜನವರಿ ವೇಳೆಗೆ ತಳಕಲ್ನಿಂದ ಲಿಂಗಲಬಂಡಿವರೆಗೆ ರೈಲು ಸಂಚರಿಸಲು ಮಾರ್ಗ ಸಿದ್ಧವಾಗಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಆದರೆ, ತಳಕಲ್ನಿಂದ ಕೇವಲ ಲಿಂಗಲಬಂಡಿವರೆಗೆ ರೈಲು ಸಂಚರಿಸುವ ರೀತಿ ಆಗುವ ಬದಲು ಬರುವ ಫೆಬ್ರವರಿ ವೇಳೆಗೆ ಕನಿಷ್ಟ ತಳಕಲ್ನಿಂದ ಕುಷ್ಟಗಿ ವರೆಗಾದರೂ ರೈಲು ಸಂಚರಿಸುವಂತೆ ಯೋಜನೆ ಕಾರ್ಯಗತಗೊಳಿಸಬೇಕು ಎಂದು ಸಂಸದರು ಸೂಚಿಸಿದರು. ಅಧಿಕಾರಿಗಳು ಫೆಬ್ರವರಿ ವೇಳೆಗೆ ಕುಷ್ಟಗಿ ತನಕ ಮಾರ್ಗಪೂರ್ಣಗೊಳಿಸುವುದಾಗಿ ಭರವಸೆ ಕೊಟ್ಟಿದ್ದಾರೆ.
ಉಳಿದಂತೆ ಮುನಿರಾಬಾದ್-ಮೆಹಬೂಬ್ನಗರ ಮಾರ್ಗದಲ್ಲಿ ರೈಲು ಇದೀಗ ಗಂಗಾವತಿ ಮಾರ್ಗವಾಗಿ ಕಾರಟಗಿವರೆಗೆ ಸಂಚರಿಸುತ್ತಿದೆ. ಬರುವ ಫೆಬ್ರವರಿ ವೇಳೆಗೆ ಸಿಂಧನೂರುವರೆಗೂ ರೈಲು ಸಂಚರಿಸುವ ರೀತಿ ಕಾಮಗಾರಿ ಪೂರ್ಣಗೊಳಿಸುವುದಾಗಿ ರೈಲ್ವೆ ಅಧಿಕಾರಿಗಳು ಸಭೆಗೆ ತಿಳಿಸಿದರು.
ಅಲ್ಲದೇ ಗಂಗಾವತಿ-ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲಿಗೆ ಬನ್ನಿಕೊಪ್ಪದಲ್ಲಿ ನಿಲುಗಡೆ ನೀಡುವಂತೆ ಮಾಡಿದ ಮನವಿಗೆ ರೈಲ್ವೆ ಅಧಿಕಾರಿಗಳು ಸಹ ಒಪ್ಪಿಗೆ ನೀಡಿದ್ದಾರೆ.