ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಿದರೂ ಟ್ವಿಟ್ಟರ್ ತ್ಯಜಿಸುತ್ತೇನೆ: ಪ್ರಶಾಂತ್ ಕಿಶೋರ್ ಶಪಥ
ಕೋಲ್ಕತಾ, ಡಿಸೆಂಬರ್ 21: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎರಡಂಕಿಯ ಸೀಟುಗಳನ್ನು ಪಡೆದರೂ ತಾವು ಟ್ವಿಟ್ಟರ್ ಖಾತೆಯನ್ನು ತ್ಯಜಿಸುವುದಾಗಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಶಪಥ ಮಾಡಿದ್ದಾರೆ. 2021ರಲ್ಲಿ ನಡೆಯುವ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಹತ್ತು ಸ್ಥಾನ ಪಡೆಯಲೂ ಹೆಣಗಾಡಲಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಪಶ್ಚಿಮ ಬಂಗಾಳ ಭೇಟಿ ನೀಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪರ ಚುನಾವಣೆಯ ತಂತ್ರ ಹೆಣೆಯುತ್ತಿರುವ ಪ್ರಶಾಂತ್ ಕಿಶೋರ್ ಈ ಹೇಳಿಕೆ ನೀಡಿದ್ದಾರೆ. 294 ಸೀಟುಗಳ ಪೈಕಿ ಪಕ್ಷವು 200 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದೆ ಎಂದು ಅಮಿತ್ ಶಾ ತಿಳಿಸಿದ್ದರು. ಆದರೆ ಎರಡಂಕಿ ಮುಟ್ಟಲೂ ಬಿಜೆಪಿಗೆ ಸಾಧ್ಯವಾಗದು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
'ಎಲ್ಲ ಬಗೆಯ ಅತಿಯಾದ ಪ್ರಚಾರಗಳು ಬೆಂಬಲಿತ ಮಾಧ್ಯಮ ವರ್ಗದಿಂದಷ್ಟೇ ಎದ್ದು ಕಾಣಿಸುತ್ತಿದೆ. ಆದರೆ ವಾಸ್ತವವಾಗಿ ಪಶ್ಚಿಮ ಬಂಗಾಳದಲ್ಲಿ ಎರಡಂಕಿ ದಾಟಲು ಕೂಡ ಬಿಜೆಪಿ ಕಷ್ಟಪಡಲಿದೆ.

ಸೂಚನೆ: ಈ ಟ್ವೀಟ್ಅನ್ನು ಉಳಿಸಿಟ್ಟುಕೊಳ್ಳಿ. ಬಿಜೆಪಿ ಇದಕ್ಕಿಂತ ಉತ್ತಮ ಸಾದನೆಯೇನಾದರೂ ಮಾಡಿದರೆ ನಾನು ಈ ಜಾಗವನ್ನು ತ್ಯಜಿಸುತ್ತೇನೆ' ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.
'ಪಶ್ಚಿಮ ಬಂಗಾಳದ ಜನತೆ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅವರು ಬದಲಾವಣೆ ಬಯಸಿದ್ದಾರೆ. ಇಷ್ಟು ದೊಡ್ಡ ರೋಡ್ ಶೋ ಅನ್ನು ನನ್ನ ಜೀವನದಲ್ಲಿ ನೋಡಿರಲಿಲ್ಲ. ಈ ರೋಡ್ ಶೋ ಪ್ರಧಾನಿ ನರೇಂದ್ರ ಮೋದಿ ಅವರ ಕಡೆಗೆ ಬಂಗಾಳದ ಜನತೆ ಇರಿಸಿರುವ ಪ್ರೀತಿ ಮತ್ತು ನಂಬಿಕೆಯನ್ನು ತೋರಿಸುತ್ತದೆ. ಬಂಗಾಳದ ಜನತೆಗೆ ಬದಲಾವಣೆ ಬೇಕಿದೆ' ಎಂದು ಅಮಿತ್ ಶಾ ಬೋಲ್ಪುರ ಪ್ರದೇಶದಲ್ಲಿ ನಡೆಸಿದ ರೋಡ್ ಶೋ ವೇಳೆ ಹೇಳಿದ್ದರು.












Click it and Unblock the Notifications