ಪ.ಬಂಗಾಳ: ರಾಜ್ಯಸಭಾ ಸದಸ್ಯತ್ವಕ್ಕೆ ಸ್ವಪನ್ ದಾಸ್ಗುಪ್ತಾ ರಾಜೀನಾಮೆ
ನವದೆಹಲಿ, ಮಾರ್ಚ್ 16: ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿ ಸ್ವಪನ್ ದಾಸ್ಗುಪ್ತಾ ಅವರು ಮಂಗಳವಾರ ತಮ್ಮ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಸ್ವಪನ್ ದಾಸ್ ಗುಪ್ತಾ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಹೂಗ್ಲಿ ಜಿಲ್ಲೆಯ ತಾರಕೇಶ್ವರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಆದರೆ ರಾಜ್ಯಸಭಾ ಸದಸ್ಯರಾಗಿರುವವರು ಬಿಜೆಪಿಯಿಂದ ಚುನಾವಣಾ ಅಭ್ಯರ್ಥಿಯಾಗಿ ನಾಮ ನಿರ್ದೇಶನಗೊಂಡಿರುವ ಕುರಿತು ಟಿಎಂಸಿ ಆಕ್ಷೇಪ ವ್ಯಕ್ತಪಡಿಸಿತ್ತು.
ಬಂಗಾಳದಲ್ಲಿ ಮೂವರು ಸಂಸದರನ್ನು ವಿಧಾನಸಭಾ ಕಣಕ್ಕಿಳಿಸಿದ ಬಿಜೆಪಿ!
ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸ್ವಪನ್ ದಾಸ್ಗುಪ್ತಾ ಅವರನ್ನು ಸಂವಿಧಾನದ 10ನೇ ಕಾರ್ಯವಿಧಿಯಡಿ ರಾಜ್ಯಸಭೆಯಿಂದ ಅನರ್ಹಗೊಳಿಸಬಹುದು ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆಗ್ರಹಿಸಿದ್ದರು. ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು ಅಧಿಕಾರ ವಹಿಸಿಕೊಂಡ ಆರು ತಿಂಗಳ ನಂತರ ಯಾವುದೇ ರಾಜಕೀಯ ಪಕ್ಷ ಸೇರಿದಲ್ಲಿ ಅವರನ್ನು ಅನರ್ಹಗೊಳಿಸಬೇಕು ಎಂದು ಟ್ವೀಟ್ ನಲ್ಲಿ ಆಗ್ರಹಿಸಿದ್ದರು.
ಸ್ವಪನ್ ದಾಸ್ಗುಪ್ತ ಅವರು 2016ರ ಏಪ್ರಿಲ್ನಲ್ಲಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಬಿಜೆಪಿ ಸೇರಿರುವುದರಿಂದ ಅವರನ್ನು ಅನರ್ಹಗೊಳಿಸಬೇಕು ಎಂದು ಮೊಯಿತ್ರಾ ಅವರು ಒತ್ತಾಯಿಸಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸ್ವಪನ್ ದಾಸ್ಗುಪ್ತಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ.