'ಮಿಥುನ್ ಚಕ್ರವರ್ತಿಗೆ ಮಾನಸಿಕ ಕಾಯಿಲೆ ಇದೆ'- ಟಿಎಂಸಿ ತಿರುಗೇಟು
ನವದೆಹಲಿ ಜುಲೈ 27: ತೃಣಮೂಲ ಕಾಂಗ್ರೆಸ್ನ 38 ಶಾಸಕರ ಬಗ್ಗೆ ಬಿಜೆಪಿ ನಾಯಕ ಮತ್ತು ಬಾಲಿವುಡ್ ಸ್ಟಾರ್ ಮಿಥುನ್ ಚಕ್ರವರ್ತಿ ಹೇಳಿಕೆಯಿಂದಾಗಿ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಕೋಲಾಹಲ ಉಂಟಾಗಿದೆ. ಟಿಎಂಸಿಯಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಸಂಸದ ಶಂತನು ಸೇನ್ ಮಿಥುನ್ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಅವರಿಗೆ ಮಾನಸಿಕ ಖಾಯಿಲೆ ಇದ್ದಂತಿದೆಯೇ ಹೊರತು ಶಾರೀರಿಕವಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಹೇಳಿದ ಮಾತು ಆಶ್ಚರ್ಯ ಹಾಗೂ ಕುತೂಹಲವನ್ನುಟ್ಟು ಹಾಕಿದೆ. ತೃಣಮೂಲ ಕಾಂಗ್ರೆಸ್ನ ಮೂರು ಡಜನ್ಗಿಂತಲೂ ಹೆಚ್ಚು ಬಂಗಾಳದ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಟ ಮಿಥುನ್ ಚಕ್ರವರ್ತಿ ಹೊಸ ಬಾಂಬ್ ಸಿಡಿಸಿದ್ದಾರೆ. ಬೃಹತ್ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಲುಕಿದ ಸಚಿವರು ಮತ್ತು ಅವರ ಸಹಾಯಕರ ಬಂಧನದಿಂದ ಪಕ್ಷದೊಳಗೆ ತೊಂದರೆ ಉಂಟಾಗಿದೆ ಎಂದು ಹೇಳಿದ್ದಾರೆ.
"ನಾನು ನಿಮಗೆ ಎಲ್ಲಾ ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ. ಈ ಸಮಯದಲ್ಲಿ 38 ಟಿಎಂಸಿ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಅವರಲ್ಲಿ 21 ಮಂದಿ ನನ್ನೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ'' ಎಂದು ನಟ ಹೇಳಿದ್ದಾರೆ. ಮಹಾರಾಷ್ಟ್ರದಂತಹ ಪರಿಸ್ಥಿತಿಗಳು ಯಾವುದೇ ದಿನ ಸಂಭವಿಸಬಹುದು. ನಾಳೆಯೂ ಅದು ಆಗಬಹುದು ಎಂದು ಹೇಳಿದ್ದಾರೆ.
ಮಿಥುನ್ ಚಕ್ರವರ್ತಿ ವಿರುದ್ಧ ಡೋಲಾ ಸೇನ್ ಟೀಕೆ
ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿಯ ಈ ಹೇಳಿಕೆಯ ನಂತರ, ಬಿಜೆಪಿ ಮತ್ತು ಮಿಥುನ್ ಚಕ್ರವರ್ತಿ ಬಗ್ಗೆ ಪಶ್ಚಿಮ ಬಂಗಾಳ ಟಿಎಂಸಿ ತೀಕ್ಷ್ಣವಾದ ಹೇಳಿಕೆಗಳನ್ನು ನೀಡುತ್ತಿದೆ. ನಟರಿಗೆ ವಿಭಿನ್ನ ಕನಸುಗಳನ್ನು ಹೇಗೆ ಕಾಣಬೇಕೆಂದು ತಿಳಿದಿದೆ ಎಂದು ಟಿಎಂಸಿ ಸಂಸದ ಡೋಲಾ ಸೇನ್ ಹೇಳಿದ್ದಾರೆ. ಆದರೆ ನಾವು ಸಾರ್ವಜನಿಕರು, ಹೀಗಾಗಿ ಹೆಚ್ಚು ಕನಸು ಕಾಣುವುದಿಲ್ಲ. ಕನಸು ಕಾಣಲು ಮಿಥುನ್ ಚಕ್ರವರ್ತಿಗೆ ಶುಭವಾಗಲಿ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.
ಮಿಥುನ್ ಹೇಳಿಕೆಗೆ ಶಾಂತನು ಸೇನ್ ತಿರುಗೇಟು
ಮಿಥುನ್ ಚಕ್ರವರ್ತಿ ಹೇಳುವುದನ್ನು ಪಶ್ಚಿಮ ಬಂಗಾಳದಲ್ಲಿ ಯಾರೂ ನಂಬುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಶಾಂತನು ಸೇನ್ ಹೇಳಿದ್ದಾರೆ. ಮಿಥುನ್ ಚಕ್ರವರ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೇಳಿದ್ದೇವೆ. 'ನನಗೆ ಇದು ಮಾನಸಿಕ ಕಾಯಿಲೆ, ದೈಹಿಕ ಕಾಯಿಲೆ ಅಲ್ಲ ಎನಿಸುತ್ತದೆ. ಜೊತೆಗೆ ಅವರು ಹೇಳಲು ಪ್ರಯತ್ನಿಸುತ್ತಿರುವುದನ್ನು ಬಂಗಾಳದಲ್ಲಿ ಯಾರೂ ನಂಬುವುದಿಲ್ಲ' ಎಂದಿದ್ದಾರೆ.
ಪಾರ್ಥ ಚಟರ್ಜಿ ಬಂಧನ ಬಗ್ಗೆ ಮಿಥುನ್ ಹೇಳಿದ್ದೇನು?
"ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ನನ್ನನ್ನು ಪ್ರೀತಿಸುವುದರಿಂದ ನಾನು ಇಂದು ಈ ಸ್ಥಿತಿಗೆ ತಲುಪಿದ್ದೇನೆ" ಎಂದು ಅವರು ಹೇಳಿದರು. ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಬಂಧನದ ಬಗ್ಗೆ ನಟ-ರಾಜಕಾರಣಿ ಮಾತನಾಡಿದ್ದಾರೆ.
"ಯಾವುದೇ ಪುರಾವೆಗಳಿಲ್ಲದಿದ್ದರೆ, ಅವನು ಭಯಪಡಲು ಯಾವುದೇ ಕಾರಣವಿಲ್ಲ. ಆದರೆ ಆತ ತಪ್ಪು ಮಾಡಿದ್ದರೆ ಜಗತ್ತಿನ ಯಾವ ಶಕ್ತಿಯೂ ಆತನನ್ನು ರಕ್ಷಿಸಲಾರದು,'' ಎಂದು ಹೇಳಿದ್ದಾರೆ. ಕೋಲ್ಕತ್ತಾದಲ್ಲಿರುವ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಸಹಾಯಕನ ಮನೆಯಿಂದ 21 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡ ನಂತರ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ. ಶಿಕ್ಷಕರ ನೇಮಕಾತಿ ಹಗರಣದಲ್ಲಿ 2,000 ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಬಂಗಾಳದಕ್ಕೂ ಅರಳಲಿದೆಯಾ ಕಮಲ
ಮಹಾರಾಷ್ಟ್ರ ರಾಜಕಾರಣ ಯಾರೂ ಊಹಿಸಿರದ ರೀತಿಯಲ್ಲಿ ಬದಲಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಏಕನಾಥ್ ಶಿಂಧೆ ನೇತೃತ್ವದಲ್ಲಿ ಸುಮಾರು 40 ಶಾಸಕರ ಬಂಡಾಯ ಅನಿರೀಕ್ಷಿತವಾಗಿತ್ತು. ಸರ್ಕಾರ ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳು ವಿಫಲವಾದಾಗ, ಬಿಜೆಪಿ ಮತ್ತು ಶಿವಸೇನಾದ ಬಂಡಾಯ ಶಾಸಕರ ಮೈತ್ರಿಯ ಹೊಸ ಸರ್ಕಾರ ಸ್ಥಾಪನೆ ಮಾಡಿತು. ಇದೇ ಗಾಳಿ ಬಂಗಾಳಕ್ಕೂ ಬೀಸಿದಿಯಾ ಎನ್ನುವ ಅನುಮಾನ ಆಗಾಗ ಮೂಡುತ್ತಿತ್ತಾದರೂ ಬಲವಾದ ಕಾರಣಗಳು ಇರಲಿಲ್ಲ. ಆದರೆ ಮಿಥುನ್ ಚಕ್ರವರ್ತಿ ಹೇಳಿಕೆ ಬಂಗಾಳದಲ್ಲೂ ಕಮಲ ಅರಳುವ ಸಾಧ್ಯತೆಗಳು ಗೋಚರಿಸುತ್ತಿವೆ. ಆಲ್ ಇಂಡಿಯಾ ತೃಣಮೂಲ ಪಕ್ಷದ ಅಧ್ಯಕ್ಷೆಯಾಗಿರುವ ಮಮತಾ ಬ್ಯಾನರ್ಜಿ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ. 38 ತೃಣಮೂಲ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂದು ಮಿಥುನ್ ಚಕ್ರವರ್ತಿ ಹೊಸ ಬಾಂಬ್ ಸಿಡಿಸಿದ್ದು ಆಶ್ಚರ್ಯದೊಂದಿಗೆ ಕುತೂಹಲವೂ ಮೂಡಿಸಿದೆ.