ಬಿಜೆಪಿ ತೊರೆದ ಬಾಬುಲ್ ಸುಪ್ರಿಯೋ ಈಗ ಟಿಎಂಸಿ ವಕ್ತಾರ
ಕೋಲ್ಕತಾ, ಜುಲೈ 10: ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಕ ಮಾಡಲಾಗಿದೆ. ಬಾಬುಲ್ ಸುಪ್ರಿಯೋ ತಮಗೆ ಟಿಎಂಸಿ ನೀಡಿರುವ ಹೊಸ ಜವಾಬ್ದಾರಿ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
"ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರತಿಷ್ಠಿತ ರಾಷ್ಟ್ರೀಯ ವಕ್ತಾರರ ತಂಡದಲ್ಲಿ ನನ್ನನ್ನು ಸೇರಿಸಿರುವ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರಿಗೆ ನನ್ನ ಕೃತಜ್ಞತೆ. ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ" ಎಂದು ಅವರು ಟ್ಟಿಟ್ಟರ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಬಂಗಾಳದ ಆಚೆ ಟಿಎಂಸಿ ಸೀಮೆ
51 ವರ್ಷದ ಬಾಬುಲ್ ಸುಪ್ರಿಯೋ ಅವರನ್ನು ಟಿಎಂಸಿ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಕ ಮಾಡಿರುವುದರ ಹಿಂದೆ ರಣತಂತ್ರ ಅಡಗಿದೆ ಎನ್ನುತ್ತಾರೆ ಪಕ್ಷದ ಒಬ್ಬ ಹಿರಿಯ ಮುಖಂಡ. ಅವರ ಪ್ರಕಾರ, ಪಶ್ಚಿಮ ಬಂಗಾಳದ ಹೊರಗೆ ಟಿಎಂಸಿ ಪಕ್ಷವನ್ನು ಬಲಪಡಿಸುವ ಅಥವಾ ಪ್ರಚುರಪಡಿಸುವ ಉದ್ದೇಶದ ಭಾಗವಾಗಿ ಸುಪ್ರಿಯೋಗೆ ಈ ಅವಕಾಶ ಕೊಡಲಾಗಿದೆ.
"ಬಾಬುಲ್ ಸುಪ್ರಿಯೋ ಗಾಯಕನಾಗಿ ಮತ್ತು ರಾಜಕಾರಣಿಯಾಗಿ ದೇಶದ ಹಲವೆಡೆ ಚಿರಪರಿಚಿತರಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪಕ್ಷದ ದೃಷ್ಟಿಕೋನ, ವಿಚಾರ ಮತ್ತು ನೀತಿಗಳ್ನು ಪ್ರಸ್ತುಪಡಿಸಲು ಅವರಿಂದ ಸಹಾಯವಾಗಬಹುದು" ಎಂದು ಟಿಎಂಸಿ ಮುಖಂಡ ಹೇಳಿದ್ದಾರೆಂದು ಡಿಎನ್ಎ ವರದಿ ಮಾಡಿದೆ.

ಬಿಜೆಪಿ ತೊರೆದಿದ್ದ ಬಾಬುಲ್
ಖ್ಯಾತ ಗಾಯಕರಾಗಿದ್ದ ಬಾಬುಲ್ ಸುಪ್ರಿಯೋ 2014ರಲ್ಲಿ ರಾಜಕೀಯ ಪ್ರವೇಶಿಸಿದರು. ಬಿಜೆಪಿ ಸೇರಿದ ಅವರು ಆಸನಸೋಲ್ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದರು. ಸಂಸತ್ಗೆ ಅವರ ಮೊದಲ ಪ್ರವೇಶದಲ್ಲೇ ಸಚಿವಗಿರಿ ಸಿಕ್ಕಿತು. ಎನ್ಡಿಎ ಸರಕಾರದ ಎರಡೂ ಅವಧಿಯಲ್ಲೂ ಅವರು ಕೇಂದ್ರ ಮಂತ್ರಿಗಳಾದರು. ಕಳೆದ ವರ್ಷದ ಅವರನ್ನು ಕೇಂದ್ರ ಸಂಪುಟದಿಂದ ಕೈಬಿಡಲಾಯಿತು.

ರಾಜಕೀಯ ತೊರೆಯುವುದಾಗಿ ಹೇಳಿದ್ದ ಬಾಬುಲ್ ಸುಪ್ರಿಯೋ ಅಂತಿಮವಾಗಿ ಟಿಎಂಸಿ ಸೇರಿದರು. ಆಸನಸೋಲ್ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಟಿಎಂಸಿ ಟಿಕೆಟ್ನಲ್ಲಿ ಬಾಲಿಗಂಜ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾದರು. ಇದೀಗ ಅವರು ಟಿಎಂಸಿಯ ರಾಷ್ಟ್ರೀಯ ವಕ್ತಾರರಾಗಿ ಗುರುತರ ಜವಾಬ್ದಾರಿ ಪಡೆದಿದ್ದಾರೆ.
ಬಾಬುಲ್ ಸುಪ್ರಿಯೋ ಗಾಯಕರಾಗಿ ಬಹಳ ಹೆಸರು ಮಾಡಿದವರು. ಅವರ ಬಹುತೇಕ ಹಾಡುಗಳು ಹಿಂದಿ ಮತ್ತು ಬಂಗಾಳಿ ಸಿನಿಮಾಗಳದ್ದಾಗಿವೆ. ಜೊತೆಗೆ ಅನೇಕ ಆಲ್ಬಂ ಹಾಡುಗಳನ್ನೂ ಹೊರತಂದಿದ್ಧಾರೆ. ಹೃತಿಕ್ ರೋಷನ್ ಅವರ ಚೊಚ್ಚಲ ಸಿನಿಮಾ 'ಕಹೋ ನಾ ಪ್ಯಾರ್ ಹೈ"ನಲ್ಲಿ 'ದಿಲ್ ನೇ ದಿಲ್ ಕೋ ಪುಕಾರ' ಹಾಡು ಹಾಡಿದ್ದು ಸುಪ್ರಿಯೋ.
(ಒನ್ಇಂಡಿಯಾ ಸುದ್ದಿ)












Click it and Unblock the Notifications