ಅಭಿವೃದ್ಧಿ ಮಂಡಳಿಯಿಂದ ಸುವೇಂದು ಅಧಿಕಾರಿ ತಂದೆ ತೆಗೆದುಹಾಕಿದ ಟಿಎಂಸಿ
ಕೋಲ್ಕತ್ತಾ, ಜನವರಿ 12: ಈಚೆಗೆ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಸುವೇಂದು ಅಧಿಕಾರಿಯವರ ತಂದೆ, ತೃಣಮೂಲ ಕಾಂಗ್ರೆಸ್ ನ ಹಿರಿಯ ಸಂಸದ ಶಿಶಿರ್ ಅಧಿಕಾರಿಯವರನ್ನು ದಿಘಾ ಶಂಕರಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ.
ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿನ ಬೀಚ್ ಟೌನ್ ಅಭಿವೃದ್ಧಿಯನ್ನೊಳಗೊಂಡ ಪ್ರಾಧಿಕಾರ ಇದಾಗಿದ್ದು, ಇದರ ಅಧ್ಯಕ್ಷ ಸ್ಥಾನವನ್ನು ಶಿಶಿರ್ ಅಧಿಕಾರಿಯವರಿಗೆ ನೀಡಲಾಗಿತ್ತು. ಮಂಗಳವಾರ ಆ ಸ್ಥಾನದಿಂದ ಅವರನ್ನು ತೆಗೆದುಹಾಕಲಾಗಿದೆ. ಶಿಶಿರ್ ಅವರಿಗೆ ವಿರೋಧಿ ಎನ್ನಲಾದ ಶಾಸಕ ಅಖಿಲ್ ಗಿರಿ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ.
"ಡಿಎಸ್ ಡಿಎ ಅಧ್ಯಕ್ಷರಾಗಿ ಅವರು ಯಾವ ಕೆಲಸವನ್ನೂ ಮಾಡಿಲ್ಲ. ಹೀಗಾಗಿ ಅವರನ್ನು ಸ್ಥಾನದಿಂದ ತೆಗೆದುಹಾಕಲಾಗಿದೆ" ಎಂದು ಅಖಿಲ್ ತಿಳಿಸಿದ್ದಾರೆ. "ಶಿಶಿರ್ ಅಧಿಕಾರಿಯವರು ತಮ್ಮ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗಿಲ್ಲ. ಅವರ ಆರೋಗ್ಯ ಸರಿಯಾಗಿಲ್ಲ ಎನಿಸುತ್ತದೆ. ಅವರ ಮಕ್ಕಳಾದ ಸುವೇಂದು ಹಾಗೂ ಸೌಮೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ನಂತರ ತೃಣಮೂಲ ಕಾಂಗ್ರೆಸ್ ವಿರುದ್ಧವಾಗಿ ನಿರಂತರ ಮಾತನಾಡುತ್ತಿದ್ದರೂ ಒಂದು ಮಾತನ್ನೂ ಶಿಶಿರ್ ಅವರು ಆಡಿಲ್ಲ" ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.

ಆದರೆ ಈ ಯಾವುದೇ ಬೆಳವಣಿಗೆಗೆ ಶಿಶಿರ್ ಅಧಿಕಾರಿ ಪ್ರತಿಕ್ರಿಯಿಸಿಲ್ಲ.
ಸುವೇಂದು ಅಧಿಕಾರಿ ಕಳೆದ ತಿಂಗಳಷ್ಟೇ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಂತರ ಸೋದರ ಸೌಮೇಂದು ಕೂಡ ಬಿಜೆಪಿ ಸೇರ್ಪಡೆಯಾಗಿದ್ದರು. ವಿಧಾನಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಅಣಿಯಾಗುತ್ತಿದ್ದು, ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ-ಟಿಎಂಸಿ ನಡುವೆ ಹಣಾಹಣಿ ಶುರುವಾಗಿದೆ.












Click it and Unblock the Notifications