ದೀದಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿಂದ 20 ಲಕ್ಷ ರೂ. ದಂಡ
ಕೋಲ್ಕತ್ತಾ, ಏಪ್ರಿಲ್ 12: ಭೋಬಿಷ್ಯೋತರ್ ಭೂತ್(ಭವಿಷ್ಯದ ಭೂತ)ಎಂಬ ರಾಜಕೀಯ ವಿಡಂಬನೆಯ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಅನುಮತಿ ನೀಡದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 20 ಲಕ್ಷ ರೂ.ಗಳ ದಂಡ ವಿಧಿಸಿದೆ.
ತೃಣಮೂಲ ಕಾಂಗ್ರೆಸ್ ಸರ್ಕಾರ ಕಲಾವಿದರ ಸ್ವಾತಂತ್ರ್ಯವನ್ನು ಕಿತ್ತುಕೊಂಡು, ಅಸಹಿಷ್ಣುತೆ ವ್ಯಕ್ತಪಡಿಸುತ್ತಿದೆ ಎಂದು ಕೋರ್ಟ್ ಹೇಳಿದೆ.
ಅನಿಕಾ ದತ್ತ ಎಂಬ ಚಿತ್ರ ನಿರ್ದೇಶಕರ ಬಂಗಾಳಿ ಭಾಷೆಯ "ಭೋಬಿಷ್ಯೋತರ್ ಭೂತ್" ಚಿತ್ರ ರಾಜಕೀಯ ವಿಡಂಬನೆಯನ್ನು ಒಳಗೊಂಡಿತ್ತು. ಇದರಿಂದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿ ಕೆಟ್ಟ ಭಾವನೆ ಬರುತ್ತದೆಂಬ ಕಾರಣಕ್ಕೆ ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಬಿಡುಗಡೆಯಾದ ಮರುದಿನವೇ ನಿಷೇಧಿಸಲಾಗಿತ್ತು.

ಈ ಚಿತ್ರವನ್ನು ಪ್ರದರ್ಶಿಸುವ ಥಿಯೇಟರ್ ಓನರ್ ಗಳ ಮೇಲೆ ಪೊಲೀಸ್ ಕ್ರಮ ಕೈಗೊಳ್ಳಲಾಗಿತ್ತು. ಇದನ್ನೂ ಖಂಡಿಸಿರುವ ಸುಪ್ರೀಂ ಕೋರ್ಟ್, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅಥವಾ, ಕಲಾವಿದರ ಅಭಿವ್ಯಕ್ತಿಗೆ ವಿರುದ್ಧವಾಗಿ ಅಸಹಿಷ್ಣುತೆ ವ್ಯಕ್ತಪಡಿಸುವುದು ತಪ್ಪು ಎಂದು ಹೇಳಿದೆ. ಮಾತ್ರವಲ್ಲ ಚಿತ್ರ ಪ್ರದರ್ಶನ ಮಾಡಲಾಗದೆ ನಷ್ಟ ಅನುಭವಿಸಿದ ಥಿಯೇಟರ್ ಮಾಲೀಕರ ನಷ್ಟವನ್ನೂ ಸರ್ಕಾರ ಭರಿಸಬೇಕು ಎಂದು ಹೇಳಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ನಿಂದ ಪ್ರಮಾಣಪತ್ರ ಸಿಕ್ಕಮೇಲೆ ಅದನ್ನು ಪಾಲಿಸಬೇಕಾದ್ದು ಪಶ್ಚಿಮ ಬಂಗಾಳ ಸರ್ಕಾರದದ ಕರ್ತವ್ಯ ಎಂದು ಕೋರ್ಟು ಹೇಳಿದೆ.












Click it and Unblock the Notifications