ಪಂ.ಬಂಗಾಳ ಪೊಲೀಸರು ಪ್ರಯೋಗಿಸಿದ ಜಲಫಿರಂಗಿಯಲ್ಲಿತ್ತಾ ರಾಸಾಯನಿಕ
ಕೋಲ್ಕತ್ತಾ, ಅಕ್ಟೋಬರ್.08: ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ವಿರುದ್ಧ ನಬನ್ನೋ ನಡಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ ಖಂಡನೀಯವಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ದೂಷಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮತ್ತು ತೃಣಮೂಲ ಕಾಂಗ್ರೆಸ್ ಗೆ ನಾವು ನಯವಾಗಿ ಹೇಳುವುದಕ್ಕೆ ಬಯಸುತ್ತೇವೆ. ಲಾಠಿಪ್ರಹಾರದ ಮೂಲಕ ನಮ್ಮ ಬಿಜೆಪಿ ಕಾರ್ಯಕರ್ತರನ್ನು ತಡೆ ಹಿಡಿಯುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಬಂಗಾಳದಲ್ಲಿ ಫ್ಯಾಸಿಸ್ಟ್ ಆಡಳಿತ: ತೇಜಸ್ವಿ ಸೂರ್ಯ
ಬಿಜೆಪಿ ಕಾರ್ಯಕರ್ತರ ಮೇಲೆ ಸಿಡಿಸಿದ ಜಲಫಿರಂಗಿಯ ನೀರಿನಲ್ಲಿ ಯಾವುದೋ ರಾಸಾಯನಿಕವನ್ನು ಮಿಶ್ರಣ ಮಾಡಿರುವ ಬಗ್ಗೆ ನಮಗೆ ಅನುಮಾನವಿದೆ. ಇಲ್ಲದಿದ್ದರೆ ನಮ್ಮ ಕಾರ್ಯಕರ್ತರು ಜಲಫಿರಂಗಿ ಪ್ರಯೋಗಿಸಿದ ಕೆಲವು ನಿಮಿಷಗಳ ನಂತರ ವಾಂತಿ ಮಾಡಿಕೊಳ್ಳುತ್ತಿರಲಿಲ್ಲ ಎಂದು ರವಿಶಂಕರ್ ಪ್ರಸಾದ್ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ 1500 ಕಾರ್ಯಕರ್ತರಿಗೆ ಗಾಯ:
ಪಶ್ಚಿಮ ಬಂಗಾಳದ ಹೌರಾ ಬ್ರಿಡ್ಜ್ ಬಳಿ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರ, ಜಲಫಿರಂಗಿ ಪ್ರಯೋಗ, ಅಶ್ರುವಾಯು ಪ್ರಯೋಗದಿಂದ 1500 ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಶ್ರೀಮಂತಿಕೆಯ ವೈಭವವನ್ನು ಉಳಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷದ ಹೋರಾಟವು ಮುಂದುವರಿಯುತ್ತದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಟ್ವೀಟ್ ಮಾಡಿದ್ದಾರೆ. "ರಾಜ್ಯದಲ್ಲಿ ಮುಖ್ಯಮಂತ್ರಿ ಮಮತಾ ದೀದಿ ಅವರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದರೂ, ನಾವು ಅಲ್ಲಿನ ಬಡ ಜನರ ಪರವಾಗಿ ನಿಲ್ಲುತ್ತೇವೆ. ನಮ್ಮ ಬಿಜೆಪಿ ಕಾರ್ಯಕರ್ತರು ಅಲ್ಲಿನ ಸಚಿವಾಲಯವನ್ನು ಮುಚ್ಚುವಂತೆ ಕೋರಿದರು. ಇದರಿಂದಲೇ ಅವರು ಸಾರ್ವಜನಿಕರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನಬನ್ನಾಕ್ಕೆ ನಡಿಗೆ:
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿಯ ಯುವ ಘಟಕವು ನಡೆಸುತ್ತಿದ್ದ 'ನಬನ್ನಾಕ್ಕೆ ನಡಿಗೆ' ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ತೀವ್ರ ಸಂಘರ್ಷ ನಡೆದಿತ್ತು. ನಬನ್ನಾಕ್ಕೆ ಮೆರವಣಿಗೆ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಪಶ್ಚಿಮ ಬಂಗಾಳದ ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಮೆರವಣಿಗೆ ತಡೆಯಲು ಮುಂದಾದ ಪಶ್ಚಿಮ ಬಂಗಾಳ ಪೊಲೀಸರು ಹೌರಾದ ಸಂಟ್ರಗಚಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿ, ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗ ಮಾಡಲಾಗಿತ್ತು.