ಮಮತಾಗೆ ಹಿನ್ನಡೆ, ಸುವೇಂದು ಅಧಿಕಾರಿ ರಾಜೀನಾಮೆ
ಕೋಲ್ಕತಾ, ಡಿ. 16: ಪಶ್ಚಿಮ ಬಂಗಾಳದ ನೀರಾವರಿ, ಸಾರಿಗೆ ಸಚಿವ ಸ್ಥಾನಕ್ಕೆ ಸುವೇಂದು ಅಧಿಕಾರಿ ಮತ್ತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ನೀಡಿದ್ದ ರಾಜೀನಾಮೆ ಅಂಗೀಕಾರವಾಗಿರಲಿಲ್ಲ, ಮಮತಾ ಬ್ಯಾನರ್ಜಿ ಕಳಿಸಿದ್ದ ನಿಯೋಗದ ಜೊತೆ ಸಂಧಾನ ಮಾತುಕತೆ ನಡೆಸಿ, ಟಿಎಂಸಿಯಲ್ಲಿ ಉಳಿಯುವುದಾಗಿ ಹೇಳಿದ್ದರು.
ಆದರೆ, ಈಗ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಡಿಸೆಂಬರ್ 19- 20ರಂದು ಗೃಹ ಸಚಿವ ಅಮಿತ್ ಶಾ ಅವರು ಬೆಂಗಾಳ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಬಂದಿದೆ.
ಹೂಗ್ಲಿ ನದಿ ಸೇತುವೆ ಕಮಿಷನರ್ಸ್(HRBC)ಚೇಮರ್ನ್ ಸ್ಥಾನವನ್ನು ಅಧಿಕಾರಿ ತೊರೆದಿದ್ದರು. ಆ ಸ್ಥಾನಕ್ಕೆ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ತಕ್ಷಣವೇ ನೇಮಿಸಲಾಗಿತ್ತು. ನಂದಿಗ್ರಾಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಮಮತಾ ಅಧಿಕಾರಕ್ಕೇರಲು ಸಹಕರಿಸಿದ್ದ ಸುವೇಂದು ಅವರು ಪಕ್ಷ ತೊರೆದರೆ ಮಮತಾಗೆ ಭಾರಿ ಹಿನ್ನಡೆಯಾಗಲಿದೆ.

ಕಳೆದ ವಾರ ಹೊರಕ್ಕೆ ಕಾಲಿಟ್ಟಿದ್ದ ರೆಬೆಲ್ ಸಚಿವ
ತೃಣಮೂಲ ಕಾಂಗ್ರೆಸ್ ನಿಂದ ಕಳೆದ ವಾರ ಹೊರಕ್ಕೆ ಕಾಲಿಟ್ಟಿದ್ದ ರೆಬೆಲ್ ಸಚಿವ ಸುವೇಂದು ಅಧಿಕಾರಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಿಎಂ ಮಮತಾ ಬ್ಯಾನರ್ಜಿ ತಮ್ಮ ಆಪ್ತರ ನಿಯೋಗವನ್ನು ಸಂಧಾನಕ್ಕಾಗಿ ಕಳಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಗೌಪ್ಯವಾಗಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸುವೇಂದು ಅವರ ಮನವೊಲಿಸುವುದರಲ್ಲಿ ಅಭಿಶೇಕ್ ಬ್ಯಾನರ್ಜಿ ಸಫಲರಾಗಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ, ಪಕ್ಷ ತೊರೆಯುವುದು ಈಗ ಖಾತ್ರಿಯಾಗಿದೆ.

ಸಾರಿಗೆ, ನೀರಾವರಿ ಹಾಗೂ ಜಲ ಸಂಪನ್ಮೂಲ ಸಚಿವ
ಸಾರಿಗೆ, ನೀರಾವರಿ ಹಾಗೂ ಜಲ ಸಂಪನ್ಮೂಲ ಖಾತೆ ಸಚಿವರಾಗಿದ್ದ ಅಧಿಕಾರಿ ಅವರು ಕಳೆದ ಕೆಲ ತಿಂಗಳುಗಳಿಂದ ಟಿಎಂಸಿ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ ಪಕ್ಷದ ಬ್ಯಾನರ್ ನಡಿ ಕಾಣಿಸಿಕೊಂಡಿಲ್ಲ. ಅಧಿಕಾರಿ ಪಾಲ್ಗೊಂಡಿದ್ದ ಸಭೆ, ಸಮಾರಂಭಗಳಲ್ಲಿ ಅಮ್ರಾ ದಾದರ್ ಅನುಗಾಮಿ (ದಾದಾನ ಅನುಯಾಯಿಗಳು) ಎಂಬ ಬ್ಯಾನರ್ ಕಾಣಿಸಿಕೊಂಡಿದ್ದರು. ಪಕ್ಷದ ವ್ಯವಸ್ಥೆ ಬಗ್ಗೆ ಅಪಸ್ವರ ಎತ್ತಿ, ಹೊರ ನಡೆಯಲು ಮುಂದಾಗಿದ್ದರು.

ಪೂರ್ವ ಮಿಡ್ನಾಪೂರ್ ಜಿಲ್ಲೆಯ ಮುಖಂಡ
ಪೂರ್ವ ಮಿಡ್ನಾಪೂರ್ ಜಿಲ್ಲೆಯ ಹಿರಿಯ ಮುಖಂಡ ಸುವೇಂದು ಅವರು ಕನಿಷ್ಠ 40 ರಿಂದ 45 ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದಾರೆ. ಜಂಗಲ್ ಮಹಾಲ್ ಪ್ರದೇಶ ಬುಡಕಟ್ಟು ಜನಾಂಗ, ಪಶ್ಚಿಮ ಮಿಡ್ನಾಪೂರ್, ಬಂಕುರಾ, ಪುರೂಲಿಯಾ ಹಾಗೂ ಝರ್ಗ್ರಾಮ್ ಹಾಗೂ ಬಿರ್ಬಂ ಕೆಲಭಾಗ ಮತ್ತುಅಲ್ಪಸಂಖ್ಯಾತರನ್ನು ಹೆಚ್ಚಾಗಿ ಹೊಂದಿರುವ ಮುರ್ಷಿದಾಬಾದ್ ಪ್ರದೇಶದಲ್ಲಿ ಸುವೇಂದು ಅವರಿಗೆ ಹಿಡಿತವಿದೆ.

1998ರಿಂದ ಟಿಎಂಸಿ ಕಟ್ಟಾಳುವಾಗಿದ್ದ ಸುವೇಂದು
1998ರಿಂದ ಟಿಎಂಸಿ ಕಟ್ಟಾಳುವಾಗಿದ್ದ ಸುವೇಂದು ಅವರು ತಕ್ಷಣದ ನಿರ್ಧಾರ ಮಾಡಿ ಮಮತಾ ಅವರ ಬಣ ತೊರೆಯುತ್ತಿಲ್ಲ ಎಂಬುದಂತೂ ಸ್ಪಷ್ಟವಾಗಿದೆ. ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಸುವೇಂದು ಅವರು ಬಿಜೆಪಿ ಸೇರಿದರೆ, ಹಿಂದುಳಿದ, ಅಲ್ಪ ಸಂಖ್ಯಾತ ಸಮುದಾಯ ಸೆಳೆಯಲು ಸಮರ್ಥ ನಾಯಕರೊಬ್ಬರು ದೊರೆತಂತೆ ಆಗುತ್ತದೆ.
ಅಮೆರಿಕನ್ ಪವರ್ಬಾಲ್ ಜಾಕ್ಪಾಟ್ನಲ್ಲಿ 520 ಮಿಲಿಯನ್ ಡಾಲರ್ ಗೆಲ್ಲಲು ಭಾರತೀಯರಿಗೆ ಅವಕಾಶ












Click it and Unblock the Notifications