'ನಾನು 2 ಶಿಶುಗಳ ತಾಯಿ': ವಿಚಾರಣೆಗೆ ವಿನಾಯಿತಿ ಕೋರಿ ಅಭಿಷೇಕ್ ಬ್ಯಾನರ್ಜಿ ಪತ್ನಿ ಮನವಿ
ನವದೆಹಲಿ, ಸೆಪ್ಟೆಂಬರ್ 01: ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿಯ ಪತ್ನಿ ರುಜಿರಾ ಬ್ಯಾನರ್ಜಿಗೆ ಕಲ್ಲಿದ್ದಲು ಹಗರಣದಲ್ಲಿ ಇಡಿ ಸಮನ್ಸ್ ನೀಡಿದೆ. ತಾನು ಎರಡು ಶಿಶುಗಳ ತಾಯಿಯಾಗಿರುವ ಕಾರಣ ನನಗೆ ಈ ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕು ನಡುವೆ ನವದೆಹಲಿಗೆ ಪ್ರಯಾಣ ಮಾಡುವುದರಿಂದ ವಿನಾಯಿತಿ ನೀಡಬೇಕು ಎಂದು ಕೋರಿ ಅಭಿಷೇಕ್ ಬ್ಯಾನರ್ಜಿಯ ಪತ್ನಿ ರುಜಿರಾ ಬ್ಯಾನರ್ಜಿ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ. ಹಾಗೆಯೇ ಇದೇ ಸಂದರ್ಭದಲ್ಲಿ ತಾನು ಮನೆಯಲ್ಲಿ ಅಥವಾ ಇಲ್ಲಿನ ಇಡಿ ಕೇಂದ್ರದಲ್ಲಿ ವಿಚಾರಣೆಗೆ ಒಳಗಾಗಲು ಸಿದ್ದ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ, ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯ ಪತ್ನಿ ರುಜಿರಾ ಬ್ಯಾನರ್ಜಿಯನ್ನು ನವದೆಹಲಿಗೆ ತೆರಳಿ ಬುಧವಾರ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದೆ. ಹಾಗೆಯೇ ರುಜಿರಾ ಬ್ಯಾನರ್ಜಿಯ ಪತಿ ಅಭಿಷೇಕ್ ಬ್ಯಾನರ್ಜಿಯನ್ನು ಸೆಪ್ಟೆಂಬರ್ 6 ರ ಒಳಗೆ ನವದೆಹಲಿಗೆ ತೆರಳಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ.
ಈ ಹಿನ್ನೆಲೆ ಆಗಸ್ಟ್ 31 ರಂದು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಪತ್ನಿ ರುಜಿರಾ ಬ್ಯಾನರ್ಜಿ, "ನಾನು ಎರಡು ಶಿಶುಗಳ ತಾಯಿ ಆಗಿರುವ ಹಿನ್ನೆಲೆ ಈ ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕಿನ ಕಾಲದಲ್ಲಿ ನವದೆಹಲಿಗೆ ಒಬ್ಬಳೇ ಬರುವುದು ನನ್ನನ್ನು ಹಾಗೂ ನನ್ನ ಇಬ್ಬರು ಮಕ್ಕಳನ್ನು ಗಂಭೀರ ಅಪಾಯಕ್ಕೆ ದೂಡುತ್ತದೆ. ನನ್ನ ನಿವಾಸವಿರುವ ಕೋಲ್ಕತ್ತಾದಲ್ಲಿ ಜಾರಿ ನಿರ್ದೇಶನಾಲಯದ ಕಚೇರಿ ಇರುವ ಹಿನ್ನೆಲೆ ನಾನು ಇಲ್ಲೇ ಜಾರಿ ನಿರ್ದೇಶಾನಲಯದ ಮುಂದೆ ಹಾಜರಾಗಲು ನೀವು ಅನುಮತಿ ನೀಡಿದರೆ ಉತ್ತಮ," ಎಂದು ಮನವಿ ಮಾಡಿದ್ದಾರೆ.

ಹಾಗೆಯೇ "ನೀವು ವಿಚಾರಣೆ ನಡೆಸಲು ಉದ್ದೇಶಿಸಿರುವ ವಿಷಯವು ಕೋಲ್ಕತ್ತಾಗೆ ಸಂಬಂಧಿಸಿದ್ದು ಆಗಿದೆ," ಎಂದು ಕೂಡಾ ರುಜಿರಾ ಬ್ಯಾನರ್ಜಿ ತಿಳಿಸಿದ್ದಾರೆ. ಕಲ್ಲಿದ್ದಲ್ಲು ಹಗರಣದಲ್ಲಿ ಹಣವನ್ನು ಅಕ್ರಮ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಹಾಗೂ ಪತ್ನಿ ರುಜಿರಾ ಬ್ಯಾನರ್ಜಿ ವಿರುದ್ದ ಇಡಿ ತನಿಖೆ ಆರಂಭ ಮಾಡಿದೆ. ಆದರೆ ಈ ನಡುವೆ ಶನಿವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವು ತನ್ನ ಕೇಂದ್ರ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ವಿರುದ್ದ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪ ಮಾಡಿದ್ದಾರೆ.
ರಾಜಕೀಯವಾಗಿ ಬೇಕಾದರೆ ಬಿಜೆಪಿ ಟಿಎಂಸಿ ವಿರುದ್ದ ಹೋರಾಡಲಿ ಎಂದು ಹೇಳಿದ ಮಮತಾ ಬ್ಯಾನರ್ಜಿ, "ನೀವು ನಮ್ಮ ವಿರುದ್ದ ಜಾರಿ ನಿರ್ದೇಶನಾಲಯವನ್ನು ಯಾಕೆ ಬಳಸುತ್ತಿದ್ದೀರಿ. ನೀವು ನಮ್ಮ ವಿರುದ್ದ ಒಂದು ಹಗರಣ ಮಾಡುವಾಗ ನಿಮ್ಮ ವಿರುದ್ದ ತುಂಬಿ ತುಳುಕುವಷ್ಟು ಹಗರಣದ ಆರೋಪಗಳು ಇದೆ. ನಾವು ಗುಜರಾತ್ನ ಇತಿಹಾಸವನ್ನು ಬಲ್ಲೆವು," ಎಂದು ದೂರಿದ್ದಾರೆ.
ಇನ್ನು ಈ ಕಲ್ಲಿದ್ದಲ್ಲು ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಪತ್ನಿ ರುಜಿರಾ ಬ್ಯಾನರ್ಜಿರನ್ನು ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆಗೂ ಕೊಂಚ ಸಮಸಯಕ್ಕೂ ಮುನ್ನ ಫೆಬ್ರವರಿ 23 ರಂದು ವಿಚಾರಣೆ ಒಳಪಡಿಸಿತ್ತು. ಈ ಕಲ್ಲಿದ್ದಲ್ಲು ಹಗರಣ ಪ್ರಕರಣಕ್ಕೆ ಸಂಬಂಧಿಸಿ ರುಜಿರಾ ಬ್ಯಾನರ್ಜಿಯ ಸಹೋದರಿ ಹಾಗೂ ತಾಯಿಯನ್ನು ಕೂಡಾ ವಿಚಾರಣೆಗೆ ಒಳಪಡಿಸಲಾಗಿತ್ತು.
(ಒನ್ ಇಂಡಿಯಾ ಸುದ್ದಿ)












Click it and Unblock the Notifications