ನಂದಿಗ್ರಾಮದಲ್ಲಿ ಸೋಲೊಪ್ಪಿಕೊಂಡ್ರು, ಬಂಗಾಳ ಗೆದ್ದ ಮಮತಾ
ಕೋಲ್ಕತಾ, ಮೇ 2: ಪಶ್ಚಿಮ ಬಂಗಾಳದಲ್ಲಿ ಮಮತಾ ನೇತೃತ್ವದ ಟಿಎಂಸಿ ಪಕ್ಷವು ಸ್ಪಷ್ಟ ಬಹುಮತದತ್ತ ಸಾಗಿದೆ. ಈಗಾಗಲೇ ಮ್ಯಾಜಿಕ್ ಸಂಖ್ಯೆ ದಾಟಿರುವ ಟಿಎಂಸಿ 200 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಬಿಜೆಪಿ ಇನ್ನೂ 100 ಕ್ಷೇತ್ರಗಳಲ್ಲಿಯೂ ಮುನ್ನಡೆ ಗಳಿಸಿಲ್ಲ. ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ನಂದಿಗ್ರಾಮ ಕ್ಷೇತ್ರದ ಫಲಿತಾಂಶ ಕೊನೆಗೂ ಹೊರ ಬಂದಿದೆ. ಈ ಹಿಂದೆ ಮಮತ ಗೆಲುವು ಎಂದು ಹಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಆದರೆ, ಇದೀಗ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಸೋಲು ಕಂಡಿದ್ದಾರೆ ಎಂದು ತಿಳಿದು ಬಂದಿದೆ.
ನಂದಿ ಗ್ರಾಮ ಕ್ಷೇತ್ರದಲ್ಲಿ ತಮ್ಮ ಮಾಜಿ ಬಲಗೈ ಬಂಟ ಸುವೇಂದು ಅಧಿಕಾರಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದ ಸಿಎಂ ಮಮತಾ ಆರಂಭದಲ್ಲಿ 9000 ಕ್ಕೂ ಹೆಚ್ಚು ಮತಗಳ ಹಿನ್ನಡೆ ಅನುಭವಿಸಿದ್ದರು. ಆದರೆ, ಕೊನೆಕ್ಷಣದಲ್ಲಿ ರೋಚಕ ತಿರುವು ಪಡೆದು ಫಲಿತಾಂಶ ಬಿಜೆಪಿ ಪರವಾಗಿ ಬಂದಿದೆ.
ನಂದಿಗ್ರಾಮದ ಪುತ್ರ ಸುವೇಂದು ಅಧಿಕಾರಿ 1,622 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಮಮತಾ ಬ್ಯಾನರ್ಜಿ ಈ ಕ್ಷೇತ್ರದಲ್ಲಿ ಸೋತರೂ ಸಹ ಅವರೇ ಸಿಎಂ ಅಭ್ಯರ್ಥಿಯಲ್ಲಿ ಬದಲಾವಣೆಯಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಮೂಲಗಳು ಹೇಳಿವೆ.
ಈ ನಡುವೆ ತಮ್ಮ ಸೋಲಿನ ಬಗ್ಗೆ ಮಮತಾ ಪ್ರತಿಕ್ರಿಯಿಸಿ, ನಾನು ಈ ಸೋಲನ್ನು ಒಪ್ಪಿಕೊಳ್ಳುತ್ತೇನೆ, ನಂದಿಗ್ರಾಮದ ಬಗ್ಗೆ ಚಿಂತಿಸಬೇಡಿ, ಇಲ್ಲಿ ನಾನು ಹೋರಾಟ ಮಾಡಿದ್ದರಿಂದ ಇಲ್ಲಿಂದ ಕಣಕ್ಕಿಳಿದಿದ್ದೆ. ನಂದಿಗ್ರಾಮದ ಜನತೆಯ ತೀರ್ಪನ್ನು ಮುಕ್ತವಾಗಿ ಸ್ವೀಕರಿಸುತ್ತೇನೆ, ನಾವು 221 ಸ್ಥಾನ ಗೆದ್ದಿದ್ದೇವೆ, ಬಿಜೆಪಿ ಸೋಲು ಕಂಡಿದೆ, ಕೋವಿಡ್ 19 ನಿಯಂತ್ರಣಕ್ಕಾಗಿ ಈಗ ಹೋರಾಟ ನಡೆಸಬೇಕಿದೆ. ಚುನಾವಣೆ ಸಂದರ್ಭದಲ್ಲಿ ಆಯೋಗದಿಂದ ಅನುಭವಿಸಿದ ಹಿಂಸೆ ವಿವರಿಸಲು ಸಾಧ್ಯವಿಲ್ಲ, ಎಲ್ಲದರ ನಡುವೆ ಟಿಎಂಸಿ ಗೆದ್ದಿದೆ ಎಂಬುದು ಈಗ ಮುಖ್ಯ ಎಂದಿದ್ದಾರೆ.
2007ರಲ್ಲಿ ವಿಶೇಷ ಆರ್ಥಿಕ ವಲಯ ಯೋಜನೆ ವಿರೋಧಿಸಿ ಎಡಪಕ್ಷಗಳ ವಿರುದ್ಧ ತೃಣಮೂಲ ಕಾಂಗ್ರೆಸ್ ಹೋರಾಟ ನಡೆಸಿತ್ತು. ಅಂದು ಸುವೇಂದು ಹಾಗೂ ಮಮತಾ ನಡೆಸಿದ ಮಾ ಮಾತಿ ಮಾನುಷ್ ಹೋರಾಟಕ್ಕೆ ತಕ್ಕ ಬೆಲೆ ಸಿಕ್ಕಿ, ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿತ್ತು.
Recommended Video
ಕೋಲ್ಕತಾದ ಕ್ಷೇತ್ರ ಬಿಟ್ಟು ನಂದಿಗ್ರಾಮದತ್ತ ಮಮತಾ ಮುಖ ಮಾಡಿರುವುದು ಅವರ ಅಸ್ಥಿರ ರಾಜಕೀಯ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ನಂದಿಗ್ರಾಮ ಘರ್ಷಣೆಯಲ್ಲಿ 14 ಜನ ಬಲಿಯಾಗಿದ್ದರು. ಅಂದು ಗುಂಡು ಹಾರಿಸಿದ್ದ ಸತ್ಯಜಿತ್ ಬಂಡೋಪಾಧ್ಯಾಯ್ ಐಪಿಎಸ್ ಅವರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಹಾಕಿದೆ. ಈಗ ಆ ವ್ಯಕ್ತಿಯನ್ನು ಟಿಎಂಸಿ ಸೇರಿಸಿಕೊಂಡಿದ್ದು ಹೇಗೆ? ಏಕೆ? ಎಂದು ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.