ರಾಜ್ಯಪಾಲರ ಹುದ್ದೆಯಿಂದ ರಾಜ್ಯ ರಾಜಕಾರಣಕ್ಕೆ ಸಿಗುತ್ತಾ ಅವಕಾಶ?
ಕೋಲ್ಕತ್ತಾ, ಆಗಸ್ಟ್.13: ಪಶ್ಚಿಮ ಬಂಗಾಳದ ರಾಜಕಾರಣಕ್ಕೆ ಮರಳುವ ಬಗ್ಗೆ ಮೇಘಾಲಯ ರಾಜ್ಯಪಾಲ ತಥಾಗತ್ ರಾಯ್ ಮುನ್ಸೂಚನೆ ನೀಡಿದ್ದಾರೆ. 2021ರ ವಿಧಾನಸಭಾ ಚುನಾವಣೆ ವೇಳೆಗೆ ಸಕ್ರಿಯ ರಾಜಕೀಯಕ್ಕೆ ಬರುವುದಾಗಿ ಸ್ಪಷ್ಟಪಡಿಸಿದ್ದಾರೆ.
Recommended Video
2002-2006 ಅವಧಿಯಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ತಥಾಗತ್ ರಾಯ್ ಮತ್ತೆ ತಾಯ್ನಾಡಿನಲ್ಲಿ ರಾಜಕಾರಣ ಮಾಡುವುದಕ್ಕೆ ಹೆಚ್ಚು ಉತ್ಸುಕರಾಗಿದ್ದಾರೆ. ಈ ಬಗ್ಗೆ ಸ್ವತಃ ಹಾಲಿ ಮೇಘಾಲಯದ ರಾಜ್ಯಪಾಲರಾಗಿರುವ ತಥಾಗತ್ ರಾಯ್ ತಿಳಿಸಿದ್ದಾರೆ. 'ದಿ ಪ್ರಿಂಟ್' ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಥಾಗತ್ ರಾಯ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಪ್ರಸ್ತುತ ಮೇಘಾಲಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ತಥಾಗತ್ ರಾಯ್ ಅವರ ಅಧಿಕಾರವಧಿಯು ಕಳೆದ ಮೇ.20ರಂದು ಪೂರ್ಣಗೊಂಡಿದೆ. ಆದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಅವರ ಅವಧಿಯನ್ನು ತಾತ್ಕಾಲಿಕವಾಗಿ ಮುಂದುವರಿಸಲಾಗಿದೆ.

"ರಾಜ್ಯಪಾಲರ ಹುದ್ದೆ ಸಿಕ್ಕಿದ್ದು ಅನಿರೀಕ್ಷಿತ ಬೆಳವಣಿಗೆ"
ರಾಜಕೀಯದ ಪ್ರಾಣಿಯಂತೆ ಜೀವಿಸಿದ ನಾನು ರಾಜಕಾರಣವನ್ನು ಬಿಟ್ಟು ದೂರ ಉಳಿಯುವುದಕ್ಕೆ ಸಾಧ್ಯವಿಲ್ಲ. ಕೆಲವು ಕಾರಣಗಳಿಂದ ನಾನು ರಾಜ್ಯಪಾಲ ಹುದ್ದೆಗೆ ನೇಮಕಗೊಂಡಿದ್ದೆನು. ಅದೊಂದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಪಕ್ಷದ ಸೂಚನೆಯನ್ನು ಶಿಸ್ತಿನ ಕಾರ್ಯಕರ್ತನಾಗಿ ನಾನು ಅಂದು ಪಾಲನೆ ಮಾಡಿದ್ದೆನು ಎಂದು ತಥಾಗತ್ ರಾಯ್ ಹೇಳಿದ್ದಾರೆ.

"ಜೀವನದ 25 ವರ್ಷಗಳು ರಾಜಕಾರಣಕ್ಕಾಗಿಯೇ ಹೂಡಿಕೆ"
ಮೇಘಾಲಯ ರಾಜ್ಯಪಾಲರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ನನ್ನ ಅವಧಿಯನ್ನು ಪೂರ್ಣಗೊಳಿಸಿದ್ದೇನೆ. ನನ್ನ ಬದುಕಿನ 25 ವರ್ಷಗಳನ್ನು ಹೂಡಿಕೆ ಮಾಡಿರುವ ರಾಜಕಾರಣಕ್ಕೆ ಮರಳಲು ನಾನು ಬಯಸುತ್ತೇನೆ. ರಾಜ್ಯದಲ್ಲಿ ಕೇಸರಿ ಪಡೆಗೆ ಯಾರೂ ಶಕ್ತಿಯಿಲ್ಲ ಎಂಬ ಸಂದರ್ಭದಲ್ಲಿ ನಾನು ಪಕ್ಷದ ಜೊತೆಗೆ ಇರುತ್ತಿದ್ದೆನು. ಈ ಹಿಂದೆ ನನ್ನ ಸ್ನೇಹಿತರು ಮತ್ತು ಸಹದ್ಯೋಗಿಗಳನ್ನು ನನ್ನನ್ನು ಕಂಡು ಹೀಯಾಳಿಸುತ್ತಿದ್ದರು. ಆದರೆ ಅಂದೂ ಕೂಡಾ ನಾನು ಪಕ್ಷ ಮತ್ತು ಸಿದ್ದಾಂತವನ್ನೇ ಮೆಚ್ಚಿಕೊಂಡಿದ್ದೆ ಎಂದು ತಥಾಗತ್ ರಾಯ್ ತಿಳಿಸಿದ್ದಾರೆ.

"ಬಿಜೆಪಿ ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಿರುವೆ"
ಕಳೆದ ವರ್ಷ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತ್ ಶಾರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಜಕಾರಣಕ್ಕೆ ಮರಳಿ ಬರುವ ಬಗ್ಗೆ ಪ್ರಸ್ತಾಪಿಸಿದ್ದೆನು. ನನ್ನ ಭಾವನೆಯನ್ನು ವ್ಯಕ್ತಪಡಿಸಿದಾಗ ಅವರು ನಕ್ಕು ಸುಮ್ಮನಾದರು. ಪಕ್ಷದ ಹಲವು ನಾಯಕರಿಗೆ ಈ ಬಗ್ಗೆ ಗೊತ್ತಿದ್ದು, ನಾನು ಹೈಕಮಾಂಡ್ ತೀರ್ಮಾನವನ್ನೇ ಎದುರು ನೋಡುತ್ತಿದ್ದೇನೆ. ಒಂದು ವೇಳೆ ಅವರು ಅನುಮತಿ ನೀಡಿದರೆ ನಾನು ರಾಜಕಾರಣದಲ್ಲಿ ಸೇವೆ ಸಲ್ಲಿಸುವುದಕ್ಕೆ ಸಿದ್ಧನಿದ್ದೇನೆ. ಒಂದು ವೇಳೆ ನನ್ನ ವಯಸ್ಸನ್ನು ಮುಂದಿಟ್ಟುಕೊಂಡು ಅವಕಾಶ ನೀಡದಿದ್ದರೆ, ಬೇರೆ ವಿಷಯದ ಮೇಲೆ ಲಕ್ಷ್ಯ ವಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಸಕ್ರಿಯ ರಾಜಕಾರಣಕ್ಕೆ ಮರಳಲು ಯಾವುದೇ ಅಡ್ಡಿಯಿಲ್ಲ
ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ನಂತರ ಮತ್ತೆ ಸಕ್ರಿಯ ರಾಜಕಾರಣಕ್ಕೆ ಸೇರ್ಪಡೆಗೊಳ್ಳುವುದು ‘ಕಾನೂನುಬದ್ಧವಾಗಿ ಹಾಗೂ ಸಾಂವಿಧಾನಿಕವಾಗಿ' ತಪ್ಪಲ್ಲ. ಈ ಹಿಂದೆ "ಅರ್ಜುನ್ ಸಿಂಗ್, ಶೀಲಾ ದೀಕ್ಷಿತ್ ರಿಂದ ಹಿಡಿದು ಮೋತಿಲಾಲ್ ವೊರಾವರೆಗೆ ಹಲವರು ರಾಜ್ಯಪಾಲರಾಗಿ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿದ ನಂತರ ಸಕ್ರಿಯ ರಾಜಕಾರಣಕ್ಕೆ ಮರಳಿದ ನಿದರ್ಶನಗಳಿವೆ ಎಂದು ತಥಗಾತ್ ರಾಯ್ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರ ಉಲ್ಲೇಖ
ಲೆಬನಾನ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 163 ಮಂದಿ ಪ್ರಾಣ ಬಿಟ್ಟಿರುವ ಘಟನೆಯನ್ನು ಪಶ್ಚಿಮ ಬಂಗಾಳದಲ್ಲಿನ ಬಾಂಗ್ಲಾದೇಶದ ವಲಸಿಗರಿಗೆ ಹೋಲಿಕೆ ಮಾಡಿದ್ದಾರೆ. ಅಕ್ರಮ ವಲಸಿಗರಿಂದ ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಜನರು ಬಳಲುತ್ತಿದ್ದಾರೆ. 2018ರಲ್ಲಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ಅಕ್ರಮವಾಗಿ ವಲಸೆ ಬರುತ್ತಿದ್ದಾರೆ ಎಂದು ದೂರಿಷಿಸಿದ್ದಾರೆ.












Click it and Unblock the Notifications