ಮೋದಿ, ಹಿಟ್ಲರ್ನ ತಾತ, ಅತ್ಯಂತ ಅಯೋಗ್ಯ ಪ್ರಧಾನಿ: ಮಮತಾ ಬ್ಯಾನರ್ಜಿ ವಾಗ್ದಾಳಿ
ಅಮ್ದಂಗಾ, ಏಪ್ರಿಲ್ 30: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಾರಕ್ಪುರ ಲೋಕಸಭೆ ಕ್ಷೇತ್ರದ ಅಮ್ದಂಗಾದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮಮತಾ, ಮೋದಿ ಅವರ ವಿರುದ್ಧದ ತಮ್ಮ ಅಸಹನೆ, ಆಕ್ರೋಶವನ್ನು ಹೊರಹಾಕಿದರು.
ಪ್ರಧಾನಿ ನರೇಂದ್ರ ಮೋದಿ 'ಅತ್ಯಂತ ದೊಡ್ಡ ಫ್ಯಾಸಿಸ್ಟ್' ಎಂದು ಜರೆದ ಮಮತಾ, ಅವರು 'ಹಿಟ್ಲರ್ನ ತಾತ' ಎಂದೂ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಆದರೆ, ತಮಗೆ ಅವರ ಬಗ್ಗೆ ಯಾವುದೇ ಭಯವಿಲ್ಲ ಎಂದಿದ್ದಾರೆ.
ನಾನು ಹುಲಿಯಂತೆ ಹೋರಾಟ ನಡೆಸುತ್ತಿದ್ದೇನೆ ಎಂದು ಹೇಳಿಕೊಂಡ ದೀದಿ, ರಾಜಕೀಯವಾಗಿ ತಮ್ಮೊಂದಿಗೆ ಸ್ಪರ್ಧಿಸಲು ಧೈರ್ಯವಿದೆಯೇ ಎಂದು ಮೋದಿ ಮತ್ತು ಬಿಜೆಪಿಯನ್ನು ಪ್ರಶ್ನಿಸಿದರು.
'ನನ್ನೊಂದಿಗೆ ರಾಜಕೀಯವಾಗಿ ಸ್ಪರ್ಧಿಸಲು ಅವರಿಗೆ ಸವಾಲು ಹಾಕುತ್ತೇನೆ. ನಿಮ್ಮಿಂದ ಸಾಧ್ಯವಾದರೆ ನನ್ನನ್ನು ಹಿಡಿಯಿರಿ. ನಿಮ್ಮಿಂದ ಸಾಧ್ಯವಾದರೆ ನನ್ನೊಂದಿಗೆ ಹೋರಾಡಿ' ಎಂದು ಅಬ್ಬರಿಸಿದರು.
ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ತ್ರಿವೇದಿ ಅವರಿಗೆ ಮತ ಹಾಕುವಂತೆ ಕರೆ ನೀಡಿದ ಮಮತಾ, 'ಗದ್ದರ್'ಗೆ (ಬಿಜೆಪಿ ಅಭ್ಯರ್ಥಿ) ಪಾಠ ಕಲಿಸುವಂತೆ ಕೋರಿದರು.

ಗದ್ದರ್ಗಳು ಬಿಜೆಪಿಗೂ ದ್ರೋಹ ಮಾಡುತ್ತಾರೆ
'ಮೋದಿ ಈಗ ತುಂಬಾ ನಂಬುತ್ತಿರುವ ಈ ಗದ್ದರ್ಗಳು ಮುಂದೆ ಬಿಜೆಪಿಗೆ ಕೂಡ ದ್ರೋಹ ಬಗೆಯುತ್ತಾರೆ. ಇದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲ ಅಥವಾ ವಿಧಾನಸಭೆ ಚುನಾವಣೆಯಲ್ಲ. ಇದು ಲೋಕಸಭೆಗಾಗಿ ನಡೆಯುತ್ತಿರುವ ಚುನಾವಣೆ. ಕೇಂದ್ರದಲ್ಲಿ ಯಾರು ಸರ್ಕಾರ ರಚಿಸಿ, ದೇಶವನ್ನು ಮುನ್ನಡೆಸುತ್ತಾರೆ ಎಂಬುದು ಈ ಚುನಾವಣೆಯಲ್ಲಿ ನಿರ್ಧಾರವಾಗಲಿದೆ' ಎಂದರು.

ಅತ್ಯಂತ ಅನರ್ಹ ಪ್ರಧಾನಿ
'ನಾನು ಅನೇಕ ಪ್ರಧಾನಿಗಳ ಆಡಳಿತಾವಧಿಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ಈಗ ಪ್ರಧಾನಿ ಕುರ್ಚಿಯ ಮೇಲೆ ಕುಳಿತಿರುವವರು ಅತ್ಯಂತ ಅನರ್ಹ. ಪ್ರಧಾನಿಗೆ ಮೂಲ ರಾಜಕೀಯ ಕೃತಜ್ಞತೆಗಳೇ ತಿಳಿದಿಲ್ಲ. ಅವರು ಬಳಸುವ ಭಾಷೆಯನ್ನು ನೋಡಿ. ಅವರಿಗೆ ಬಂಗಾಳಿ ಸಂಸ್ಕೃತಿ ತಿಳಿದಿಲ್ಲ. ಪ್ರತಿಯೊಬ್ಬರೂ ತನ್ನ ಸೇವಕ ಎಂದು ಅವರು ಭಾವಿಸಿದ್ದಾರೆ' ಎಂದು ಮೋದಿ ವಿರುದ್ಧ ಕಿಡಿಕಾರಿದರು.

ಬೃಹತ್ ರಸಗುಲ್ಲ ನೀಡಲಿದೆ
'ಅವರು ಮಾಧ್ಯಮಗಳನ್ನು ಹಿಡಿದಿಟ್ಟಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡಿದ್ದಾರೆ. ಸಂವಿಧಾನವನ್ನು ಬದಲಿಸಿದ್ದಾರೆ. ಹೊಡೆದು ಕೊಲ್ಲುವುದು ಮಿತಿ ಮೀರಿ ಹೋಗಿದೆ. ಬಂಗಾಳದಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಇಲ್ಲಿ ಅವರು ಎರಡು ಸೀಟುಗಳನ್ನು ಹೊಂದಿದ್ದಾರೆ. ಈ ಎರಡನ್ನೂ ಅವರು ಕಳೆದುಕೊಳ್ಳಲಿದ್ದಾರೆ. ಬಂಗಾಳವು ಬಿಜೆಪಿಗೆ ಬೃಹತ್ 'ರಸಗುಲ್ಲ' ನೀಡಲಿದೆ' ಎಂದು ವ್ಯಂಗ್ಯವಾಗಿ ಹೇಳಿದರು.

ಬಿಜೆಪಿ ಪರ ಸಿಪಿಎಂ, ಕಾಂಗ್ರೆಸ್ ಕೆಲಸ
ರಾಜ್ಯದಲ್ಲಿ ಸಿಪಿಐಎಂ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ಮಾಲ್ಡಾ ಮತ್ತು ಬಹರಾಂಪುರಗಳಲ್ಲಿ ಸಿಪಿಐಎಂ, ಬಿಜೆಪಿ ಮತ್ತು ಕಾಂಗ್ರೆಸ್ ಜತೆಗೂಡಿ ಕೆಲಸ ಮಾಡುತ್ತಿವೆ. ಇಲ್ಲಿಯೂ ಅವರ ನಡುವೆ ಒಪ್ಪಂದ ನಡೆದಿದೆ. ಸಿಪಿಐಎಂ ಮತ್ತು ಕಾಂಗ್ರೆಸ್ ಎರಡೂ ಬಿಜೆಪಿಗಾಗಿ ಕೆಲಸ ನಿರ್ವಹಿಸುತ್ತಿವೆ. ಅವರಿಗಾಗಿ ನಿಮ್ಮ ಮತವನ್ನು ವ್ಯರ್ಥಮಾಡಬೇಡಿ ಎಂದರು.












Click it and Unblock the Notifications