ನನ್ನನ್ನು ಉಬರ್ ಕ್ಯಾಬ್ ನಿಂದ ಎಳೆದು ಹಿಂಸಿಸಿದರು: ರೂಪದರ್ಶಿಯ ಕರಾಳ ರಾತ್ರಿ
ಕೋಲ್ಕತ್ತಾ, ಜೂನ್ 19: ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ರೂಪದರ್ಶಿಯೊಬ್ಬರ ಮೇಲೆ ಕೆಲವು ಕಿಡಿಗೇಡಿಗಳು ದಾಳಿ ಮಾಡಿದ ಕರಾಳ ಕ್ಷಣಗಳನ್ನು ಆಕೆ ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
ಊಬರ್ ಎಂದು ಕಾರು ಹತ್ತಿ ಕೊಲೆಯಾಗಿ ಹೋದ ಅಮೆರಿಕದ ಕಾಲೇಜು ಯುವತಿ
ಕೋಲ್ಕತ್ತದ ರೂಪದರ್ಶಿ, ನಟಿ ಮತ್ತು ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಉಶೋಶಿ ಸೇನ್ ಗುಪ್ತ ಮಂಗಳವಾರ ರಾತ್ರಿ ಸುಮಾರು 11:40 ರ ವೇಳೆಗೆ ಮನೆಗೆ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ ಕೆಲವು ಕಿಡಿಗೇಡಿಗಳು ಆಕೆ ಇದ್ದ ಉಬರ್ ಕ್ಯಾಬ್ ಮೇಲೆ ದಾಳಿ ನಡೆಸಿದ್ದರು. ಕ್ಯಾಬ್ ಡ್ರೈವರ್ ಮೇಲೆಯೂ ನಿಷ್ಕಾರಣವಾಗಿ ಹಲ್ಲೆ ನಡೆಸಿದ್ದರು. ಈ ಘಟನೆಯ ವಿಡಿಯೋವನ್ನು ತೆಗೆಯುತ್ತಿದ್ದ ಕಾರಣಕ್ಕೆ ಉಶೋಶಿ ಅವರ ಮೇಲೂ ದಾಳಿ ಮಾಡಲಾಗಿದೆ.
ಮಾಜಿ ಮಿಸ್ ಇಂಡಿಯಾ ಯುನಿವರ್ಸ್ ಉಶೋಶಿ, ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಎಫ್ ಐಆರ್ ದಾಖಲಿಸಲಾಗಿದ್ದು, ಈಗಾಗಲೇ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಉಬರ್ ಚಾಲಕನ ಮೇಲೆ ಹಲ್ಲೆ
ಜೂನ್ 18 ರ ರಾತ್ರಿ ಸುಮಾತು 11:40 ರ ಸಮಯಕ್ಕೆ ನಾನು ಕೆಲಸ ಮುಗಿಸಿ ಜೆಡಬ್ಲ್ಯು ಮಾರಿಯೋಟ್ ನಿಂದ ಹೊರಟಿದ್ದೆ. ನನ್ನೊಂದಿಗೆ ನನ್ನ ಸಹೋದ್ಯೋಗಿಯೂ ಇದ್ದರು. ಮಾಧ್ಯಮ ಮತ್ತು ಮನರಂಜನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ನಾವು ದಿನವೂ ಕೆಲಸ ಮುಗಿಸೋದು ಇದೇ ಸಮಯವಾಗುತ್ತಿತ್ತು. ಉಬರ್ ಬುಕ್ ಮಾಡಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಬೈಕಿನಲ್ಲಿ ಬಂದ ಕೆಲ ಹುಡುಗರು ಉಬರ್ ಕ್ಯಾಬ್ ನ ಎದುರು ಬೈಕ್ ನಿಲ್ಲಿಸಿ, ಇಳಿದುಬಂದು ಕಾರಿನ ಗ್ಲಾಸ್ ಗೆ ಹೊಡೆಯುವುದಕ್ಕೆ ಆರಂಭಿಸಿದರು. ನಂತರ ಉಬರ್ ಡ್ರೈವರ್ ನನ್ನು ಕಾರಿನಿಂದ ಇಳಿಸಿ ಆತನಿಗೆ ಚೆನ್ನಾಗಿ ಥಳಿಸುವುದಕ್ಕೆ ಆರಂಭಸಿದರು. ಕೂಡಲೆ ನಾನೂ ಕಾರಿನಿಂದ ಇಳಿದು ಈ ಘಟನೆಯ ವಿಡಿಯೋ ಮಾಡಿಕೊಳ್ಳಲು ಪ್ರಯತ್ನಿಸಿದೆ. ನಂತರ ಅಲ್ಲೇ ಹತ್ತಿರವಿದ್ದ ಪೊಲೀಸ್ ಸ್ಟೇಶನ್ನಿಗೆ ತೆರಳಿದೆ. ಸ್ಟೇಶನ್ನಿನ ಹೊರಗೆ ನಿಂತಿದ್ದ ಅಧಿಕಾರಿಗೆ ಘಟನೆಯ ಬಗ್ಗೆ ವಿವರಿಸಿದರೆ, ಇದು ನಮ್ಮ್ ವ್ಯಾಪ್ತಿಗೆ ಬರುವುದಿಲ್ಲ ಎಂದರು! ನಂತರ ಸಾಕಷ್ಟು ಬಾರಿ ಮನವಿ ಮಾಡಿಕೊಂಡ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದರು. ಪೊಲೀಸರು ಬರುತ್ತಿರುವುದನ್ನು ಕಂಡು ಹುಡುಗರು ಅಲ್ಲಿಂದ ಓಟಕ್ಕಿತ್ತರು- ಉಶೋಶಿ ಸೇನ್ ಗುಪ್ತ
ಮತ್ತೆ ಹಿಂಬಾಲಿಸಿದರು!
ಸದ್ಯ ಎಲ್ಲ ತೊಲಗಿದರಲ್ಲ ಎಂದುಕೊಂಡು ಉಬರ್ ಚಾಲಕನ ಬಳಿ ನಮ್ಮನ್ನು ಮನೆಗೆ ಬಿಡುವಂತೆ ಮನವಿ ಮಾಡಿಕೊಂಡು ಅಲ್ಲಿಂದ ಹೊರಟೆವು. ನನ್ನ ಸಹೋದ್ಯೋಗಿ ತಮ್ಮ ಮನೆಯ ಬಳಿ ಇಳಿದ ನಂತರ ನಾನು ಒಬ್ಬಳೇ ಉಳಿದಿದ್ದೆ. ಸ್ವಲ್ಪ ಸಮಯದ ನಂತರ ನೋಡಿದರೆ ಆ ಕಿಡಿಗೇಡಿಗಳು ನಮ್ಮನ್ನೇ ಹಿಂಬಾಲಿಸುತ್ತಿದ್ದರು! ನಮ್ಮ ಕಾರನ್ನು ನಿಲ್ಲಿಸಿ, ಕಲ್ಲುಗಳನ್ನು ಹೊಡೆದು, ನನ್ನನ್ನು ಕಾರಿನಿಂದ ಎಳೆದುಕೊಂಡು ಬಂದು ಹಿಂಸಿಸಿದರು. ನನ್ನ ಫೋನ್ ಅನ್ನು ಮುರಿದು ಹಾಕಲು ಪ್ರಯತ್ನಿಸಿದರು. ಆಗ ನನಗೆ ತಿಳಿಯಿತು ನಾನು ಘಟನೆಯ ವಿಡಿಯೋ ಮಾಡಿಕೊಂದಿದ್ದರಿಂದ ಆ ವಿಡಿಯೋ ಡಿಲೀಟ್ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂಬುದು!- ಉಶೋಶಿ ಸೇನ್ ಗುಪ್ತ
ದೂರು ನೀಡಿದೆ..
"ನಾನು ಅಷ್ಟರಲ್ಲಿ ನಮ್ಮ ಮನೆಯ ಹತ್ತಿರವೇ ಇದ್ದಿದ್ದರಿಂದ ಅಪ್ಪ, ತಂಗಿಯನ್ನು ಜೋರಾಗಿ ಕೂಗುವುದಕ್ಕೆ ಶುರು ಮಾಡಿದೆ. ಅವರೆಲ್ಲ ಬರುತ್ತಿದ್ದಂತೆಯೇ, ಮತ್ತು ಬೀದಿಯ ಕೆಲ ಜನರೂ ಬರುತ್ತಿದ್ದಂತೆಯೇ ಕಿಡಿಗೇಡಿಗಳು ಓಡಿಹೋದರು. ನಂತರ ನಾವು ಹತ್ತಿರದ ಪೊಲೀಸ್ ಸ್ಟೇಷನ್ನಿಗೆ ತೆರಳಿ ದೂರು ನೀಡಿದೆವು. ಮೊದಲಿಗೆ ಅವರು 'ನೀವು ಈಗಾಗಲೇ ಬೇರೆ ಪೊಲೀಸ್ ಠಾಣೆಗೆ ಹೋಗಿದ್ದರಿಂದ ಈ ಕೇಸು ತೆಗೆದುಕೊಳ್ಳುವುದಿಲ್ಲ' ಎಂದರು. ಮಧ್ಯರಾತ್ರಿಯಲ್ಲಿ ಒಬ್ಬ ಮಹಿಳಾ ಪೊಲೀಸ್ ಕೂಡ ಅಲ್ಲಿರಲಿಲ್ಲ. ಆದರೆ ನಾವು ಪರಿಪರಿಯಾಗಿ ಮನವಿ ಮಾಡಿಕೊಂಡ ಮೇಲೆ ಅವರು ಎಫ್ ಐಆರ್ ದಾಖಲಿಸಿದರು. ಆದರೆ ಉಬರ್ ಡ್ರೈವರ್ ನೀಡಿದ ದೂರುನನ್ವಯ ಎಫ್ ಐಆರ್ ದಾಖಲಿಸಿಕೊಳ್ಳುವುದಕ್ಕೆ ಸಾಧದ್ಯವಿಲ್ಲ ಎಂದರು. ಒಂದೇ ಪ್ರಕರಣದಲ್ಲಿ ಎರಡೆರಡು ಎಫ್ ಐಆರ್ ಸಾಧ್ಯವಿಲ್ಲ ಎಂಬುದು ಅದಕ್ಕೆ ಕಾರಣ. ಪೊಲೀಸರು ಈಗಾಗಲೇ ಏಳು ಜನರನ್ನು ಬಂಧಿಸಿದ್ದಾರೆ" -ಉಶೋಶಿ ಸೇನ್ ಗುಪ್ತ
ಹಲ್ಲೆಗೆ ಕಾರಣ
ಅಷ್ಟಕ್ಕೂ ಈ ಹಲ್ಲೆಗೆ ಕಾರಣವೇನು ಎಂದರೆ ಹಣ! ಉಬರ್ ಡ್ರೈವರ್ ನಿಂದ ಹಣ ಕೀಳಲು ಕಿಡಿಗೇಡಿಗಳು ಹೀಗೆ ಹಲ್ಲೆ ನಡೆಸಿದ್ದರು. ಆದರೆ ಒಬ್ಬ ಮಹಿಳೆಯಾಗಿ ನನಗೆ ಆ ಸಮಯದಲ್ಲಿ ಆದ ಆಘಾತ ಅಷ್ಟಿಷ್ಟಲ್ಲ! ಘಟನೆಯ ನಂತರ ನನ್ನ ಕೋಲ್ಕತ್ತಾ ಇದೇನಾ ಎಂದು ಆಶ್ಚರ್ಯವಾಯ್ತು! ನಾನು ನನ್ನ ವೃತ್ತಿ ಬದುಕನ್ನು ಕಂಡುಕೊಂಡ ನಗರ ಇದು, ನಾನು ಮಿಸ್ ಇಂಡಿಯಾ ಆಗಿ ಪ್ರತಿನಿಧಿಸಿದ್ದು ಇದೇ ನಗರವನ್ನು, ನಾನು ಈ ನಗರ, ಈ ದೇಶವನ್ನು ಪ್ರತಿನಿಧಿಸುತ್ತೇನೆ. ಈ ದೇಶದ ಎಲ್ಲ ಮಹಿಳೆಯರ ಪ್ರತಿನಿಧಿ ನಾನು. ಆದರೆ ನನಗೆ ಆದ ಆತಂಕ, ಆಘಾತ ಇಡೀ ದೇಶದ ಮಹಿಳೆಯೊಳಗೂ ಅಡಗಿದೆ ಎಂಬುದು ನನ್ನ ಭಾವನೆ. ಇಷ್ಟೆಲ್ಲ ಆದರೂ ಆ ಯುವಕರ ವಿರುದ್ಧ ಎಫ್ ಐಆರ್ ದಾಖಲಿಸಿ, ವಶಕ್ಕೆ ಪಡೆದಿದ್ದಯ ಬಿಟ್ಟರೆ ಪೊಲೀಸರು ಇನ್ನೇನನ್ನೂ ಮಾಡಿದಂತಿಲ್ಲ! - ಉಶೋಶಿ ಸೇನ್ ಗುಪ್ತ