ನಾರದ ಪ್ರಕರಣ- ಟಿಎಂಸಿ ನಾಯಕರ ಗೃಹಬಂಧನಕ್ಕೆ ಕೊಲ್ಕತ್ತಾ ಹೈಕೋರ್ಟ್ ಆದೇಶ
ಕೋಲ್ಕತ್ತಾ, ಮೇ 21: ನಾರದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಉನ್ನತ ಟಿಎಂಸಿ ನಾಯಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರಾ, ಮೇಯರ್ ಸೋವನ್ ಚಟರ್ಜಿಯನ್ನು ಸೋಮವಾರವಷ್ಟೇ ಸಿಬಿಐ ಬಂಧಿಸಿದೆ. ಇದೀಗ ಪಶ್ಚಿಮ ಬಂಗಾಳ ಸಂಪುಟ ಸಚಿವರಾದ ಫಿರ್ಹಾದ್, ಸುಬ್ರತಾ ಹಾಗೂ ಮಾಜಿ ಸಚಿವರುಗಳಾದ ಮದನ್ ಮತ್ತು ಸೋವನ್ರನ್ನು ಗೃಹಬಂಧನದಲ್ಲಿರಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಗೃಹಬಂಧನ ಆದೇಶಕ್ಕೆ ತಡೆ ಒಡ್ಡುವಂತೆ ಕೋರಿ ಟಿಎಂಸಿ ನಾಯಕರ ಸಲಹೆಗಾರ ಅಭಿಷೇಕ್ ಮನು ಸಿಂಗ್ವಿ ಕೋರ್ಟ್ ಮೊರೆ ಹೋಗಿದ್ದರು. ಕಲ್ಕತ್ತಾ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಅರ್ಜಿತ್ ಬ್ಯಾನರ್ಜಿ ಬಂಧಿತ ಟಿಎಂಸಿ ಮುಖಂಡರಿಗೆ ಮಧ್ಯಂತರ ಜಾಮೀನು ನೀಡಲು ಒಪ್ಪಿದ್ದು ಆದರೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಗೃಹಬಂಧನಕ್ಕೆ ಆದೇಶಿಸಿದ್ದಾರೆ. ಹಾಗೆಯೇ ಮಧ್ಯಂತರ ಜಾಮೀನಿಗೆ ಈ ಸರ್ವೋಚ್ಛ ನ್ಯಾಯಾಲಯದ ಕದ ತಟ್ಟಲು ಹೇಳಿದ್ದಾರೆ.
ಇನ್ನು ಈ ನಡುವೆ ಈ ಪ್ರಕರಣವನ್ನು ಪಶ್ಚಿಮ ಬಂಗಾಳದಿಂದ ವರ್ಗಾವಣೆ ಮಾಡಲು ಕೋರಿ ಕೋಲ್ಕತ್ತಾ ಹೈಕೋರ್ಟ್ಗೆ ಸಲ್ಲಿಸಲಾಗಿರುವ ಅರ್ಜಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾನೂನು ಸಚಿವ ಮೊಲಾಯ್ ಘಟಕ್ರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಸಿಬಿಐ ಬಂಧನದ ಒಂದು ದಿನದ ನಂತರ ವಿಶೇಷ ನ್ಯಾಯಾಲಯವು ನಾಲ್ವರಿಗೆ ಜಾಮೀನು ನೀಡಿದರೂ, ಕೆಲವೇ ಗಂಟೆಗಳಲ್ಲಿ ಕೋಲ್ಕತ್ತಾ ಹೈಕೋರ್ಟ್ ಜಾಮೀನು ಆದೇಶವನ್ನು ರದ್ದುಗೊಳಿಸಿತ್ತು. ನಾಲ್ವರನ್ನು ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿಗೆ ಕರೆದೊಯ್ಯಲಾಗಿತ್ತು.
ಇನ್ನು ಬಂಧನಕ್ಕೊಳಗಾದ ನಾಲ್ವರು ನಾಯಕರ ಪೈಕಿ ಮದನ್ ಮಿತ್ರ, ಸುಬ್ರತಾ ಮುಖರ್ಜಿ ಮತ್ತು ಸೋವನ್ ಚಟರ್ಜಿ ಬಂಧನವಾದ ಒಂದು ದಿನದ ನಂತರ ಅನಾರೋಗ್ಯದ ಹಿನ್ನೆಲೆ ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications