ಪಶ್ಚಿಮ ಬಂಗಾಳಕ್ಕೆ ದುರ್ಯೋಧನ, ದುಶ್ಶಾಸನ ಬೇಡ ಎಂದು ಮಮತಾ ಕಿಡಿ
ಕೋಲ್ಕತ್ತಾ, ಮಾರ್ಚ್ 19: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಹಾಗೆಯೇ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರುತ್ತಿವೆ.
ದೀದಿ ನಿಮ್ಮ ಆಟ ಮುಗಿಯಿತು ಇಂದು ನಿಮ್ಮ ಬಂಗಾಳದಲ್ಲಿ ಅಭಿವೃದ್ಧಿಯಾಟ ಆರಂಭ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ದುರ್ಯೋಧನ, ದುಶ್ಶಾಸನ ಎಂದು ಮಮತಾ ದೂರಿದ್ದಾರೆ.
ಮಮತಾ ಬ್ಯಾನರ್ಜಿ ಘೋಷಣೆಯನ್ನೇ ಕಾಪಿ ಮಾಡುತ್ತಿದೆಯಾ ಬಿಜೆಪಿ?
ಹಾಗೆಯೇ ನಂದಿಗ್ರಾಮದಲ್ಲಿ ತನ್ನ ವಿರೋಧಿ ಬಿಜೆಪಿ ಅಭ್ಯರ್ಥಿಯಾಗಿರುವ ಸುವೇಂದುವನ್ನು ಮೀರ್ ಜಾಫರ್ ಎಂದು ಕರೆದಿದ್ದಾರೆ.ಶುಕ್ರವಾರ ನಂದಿಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಮತಾ, ಬಿಜೆಪಿಗೆ ಬೀಳ್ಕೊಡುಗೆ ನೀಡುವ ದಿನ ಹತ್ತಿರ ಬಂದಿದೆ. ನಮಗೆ ಬಿಜೆಪಿ ಅಗತ್ಯವಿಲ್ಲ.
ಮೋದಿ ಮುಖವನ್ನು ನೋಡಲೂ ಇಷ್ಟವಿಲ್ಲ, ನಮಗೆ ದಂಗೆಕೋರರು, ಲೂಟಿಕೋರರು, ದುರ್ಯೋಧನ, ದುಶ್ಶಾಸನರು ಹಾಗೂ ಮೀರ್ ಜಾಫರ್ನಂಥ ಜನರು ಬೇಕಾಗಿಲ್ಲ. ಮಾರ್ಚ್ 27ಕ್ಕೆ ಆಟ ಶುರುವಾಗಲಿದೆ. ಇದರಲ್ಲಿ ಬಿಜೆಪಿ ಸೋಲುವುದು ಖಚಿತ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸುವೇಂದು ಅಧಿಕಾರಿ ವಿರುದ್ಧ ಕಿಡಿ ಕಾರಿರುವ ಮಮತಾ, ನಾನು ಮೊದಲು ಮಿಡ್ನಾಪುರದ ಭಾಗಗಳಿಗೆ ಬರಲಾಗುತ್ತಿರಲಿಲ್ಲ, ಸುವೇಂದು ಅಧಿಕಾರಿ ಹೇಳಿದಂತೆ ಕೇಳಿಕೊಂಡು ಬರಬೇಕಿತ್ತು.
ಅವರನ್ನು ಕಣ್ಣುಮುಚ್ಚಿಕೊಂಡು ನಾನು ನಂಬಿದ್ದೆ, ಆದರೆ ನನಗೆ ದ್ರೋಹ ಮಾಡಿದರು, 2014ರಲ್ಲೇ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದರು, ಅವರನ್ನು ನಂಬಿ ನಾನು ಮೋಸಹೋದೆ, ಆದರೆ ಇಂದು ಮಿಡ್ನಾಪುರದ ಯಾವುದೇ ಭಾಗಕ್ಕೂ ಆರಾಮವಾಗಿ ಹೋಗಬಹುದಾಗಿದೆ ಎಂದು ಮಮತಾ ಹೇಳಿದ್ದಾರೆ.