ಪಶ್ಚಿಮ ಬಂಗಾಳಕ್ಕೆ ಕಾಲಿಟ್ಟ ಫೋನಿ: ಒಡಿಶಾದಲ್ಲಿ ತಗ್ಗಿದ ಪ್ರಭಾವ
ಕೊಲ್ಕತ್ತ, ಮೇ 04: ಒಡಿಶಾದಲ್ಲಿ ಅಬ್ಬರಿಸಿ ಭಾರಿ ಹಾನಿ ಉಂಟು ಮಾಡಿದ ಬಳಿಕ ಈಗ ಫೋನಿ ಚಂಡಮಾರುತವು ಪಶ್ಚಿಮ ಬಂಗಾಳಕ್ಕೆ ಕಾಲಿಟ್ಟಿದೆ.
ಗುರುವಾರ ರಾತ್ರಿ ವೇಳೆಗೆ ಒಡಿಸ್ಸಾದಲ್ಲಿ ಫೋನಿ ಪ್ರಭಾವ ಸ್ವಲ್ಪ ತಗ್ಗಿದೆ ಆದರೆ ಪಶ್ಚಿಮ ಬಂಗಾಳದಲ್ಲಿ ಭಾರಿ ಗಾಳಿ ಸಹಿತ ಮಳೆ ಪ್ರಾರಂಭವಾಗಿದೆ. ಪಶ್ಚಿಮ ಬಂಗಾಳದಲ್ಲಿ ಸಹ ಹೈ ಅಲರ್ಟ್ ಘೋಷಿಸಲಾಗಿದ್ದು ಚಂಡಮಾರುತ ಎದುರಿಸಲು ಸನ್ನಧವಾಗಿರುವಂತೆ ಸೂಚಿಸಲಾಗಿದೆ.

ಒಡಿಶಾದಲ್ಲಿ ಭಾರಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡ ಬಳಿಕವೂ ಐವರು ಮಂದಿ ಫೋನಿ ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ಕೆಲವರು ನಾಪತ್ತೆ ಆಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ. ಫೋನಿ ಅಬ್ಬರಕ್ಕೆ ಹಲವು ಮನೆಗಳು ಧರೆಗುರುಳಿವೆ, ಮರಗಳು, ತೋಟಗಳು ಪೂರ್ಣ ಹಾನಿಗೆ ತುತ್ತಾಗಿವೆ.
ಫೋನಿ ಭೀತಿಗೆ ಬಂದ್ ಆಗಿದ್ದ ಒಡಿಶಾದ ಭುವನೇಶ್ವರ್ ವಿಮಾನ ನಿಲ್ದಾಣವು ಮೇ 04ರ ಮಧ್ಯಾಹ್ನದಿಂದ ಕಾರ್ಯ ಪ್ರಾರಂಭಿಸಲಿದೆ. ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಕ್ಯಾಬಿನೆಟ್ ತುರ್ತು ಸಭೆ ನಡೆಸಿ ಫೋನಿ ಚಂಡಮಾರುತದಿಂದ ಆಗಿರುವ ಪರಿಣಾಮಗಳ ಬಗ್ಗೆ ಮತ್ತು ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳಕ್ಕೆ 140 ಕಿ.ಮೀ ವೇಗದಲ್ಲಿ ಫೋನಿ ಕಾಲಿಟ್ಟಿದ್ದು, ಎನ್ಡಿಆರ್ಎಫ್ ತಂಡ ಜೊತೆಗೆ ಸ್ಥಳೀಯ ವಿಪತ್ತು ನಿರ್ವಹಣೆ ತಂಡವು ಚಂಡಮಾರುತವನ್ನು ಎದುರಿಸಲು ಸಜ್ಜಾಗಿದೆ. ಮುಂದಿನ 12 ಗಂಟೆಗಳಲ್ಲಿ ಫೋನಿಯು ವಾಯುವ್ಯ ದಿಕ್ಕಿನಲ್ಲಿಯೇ ಮುಂದಕ್ಕೆ ಸಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications