ಪಶ್ಚಿಮ ಬಂಗಾಳ ಚುನಾವಣಾ ರೇಸ್; ಬಿಜೆಪಿ "ರಥ"ಕ್ಕೆ ಟಿಎಂಸಿ ಅಡ್ಡಗಾಲು?
ಕೋಲ್ಕತ್ತಾ, ಫೆಬ್ರುವರಿ 05: ವಿಧಾನ ಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಸಜ್ಜಾಗುತ್ತಿದ್ದು, ಚುನಾವಣಾ ಪ್ರಚಾರ ಬಿರುಸು ಪಡೆಯುತ್ತಿದೆ. ಆಡಳಿತ ತೃಣಮೂಲ ಪಕ್ಷ ಹಾಗೂ ಬಿಜೆಪಿ ನಡುವೆ ಈ ಬಾರಿ ಭಾರೀ ಪೈಪೋಟಿ ಸೃಷ್ಟಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಗೆಲುವಿನ ಓಟಕ್ಕೆ ಬಿಜೆಪಿ ರಥಯಾತ್ರೆಗೂ ಸಿದ್ಧತೆ ನಡೆಸಿದೆ.
ಆದರೆ ಬಿಜೆಪಿ ನಡೆಸಲು ಉದ್ದೇಶಿಸಿರುವ ರಥಯಾತ್ರೆಗೆ ರಾಜ್ಯದಲ್ಲಿ ಅನುಮತಿಯನ್ನು ಇನ್ನೂ ನೀಡಲಾಗಿಲ್ಲ. ಇದು ಬಿಜೆಪಿ-ಟಿಎಂಸಿ ನಡುವಿನ ಬೆಂಕಿಗೆ ತುಪ್ಪ ಸುರಿದಂತೆ ಮಾಡಿದೆ. ಇದು ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ ವಿಷಯ ಎಂದು ತೃಣಮೂಲ ಹೇಳುತ್ತಿದ್ದು, ಬೇಕೆಂದೇ ಅನುಮತಿ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
"ಬಂಗಾರದಂತಾ ಭಾರತ ನಾಶಪಡಿಸಿದ ನಂತರ ಬಂಗಾಳಕ್ಕೆ ಬಿಜೆಪಿ"
ರೋಡ್ ಶೋ ಬಂಗಾಳದಲ್ಲಿ ಬಿಜೆಪಿಯ ಬಹುಮುಖ್ಯ ಪ್ರಚಾರ ಸಾಧನ ಎನಿಸಿಕೊಂಡಿತ್ತು. ಈ ಬಾರಿ ಬಂಗಾಳದ ಚುನಾವಣಾ ರೇಸ್ ನಲ್ಲಿ ಬಿಜೆಪಿ ರಥವನ್ನು ಬಳಸಿ ಪ್ರಚಾರ ಕೈಗೊಳ್ಳಲು ಮುಂದಾಗಿದೆ. ಮುಂದೆ ಓದಿ...
ಪಶ್ಚಿಮ ಬಂಗಾಳದಲ್ಲಿ ಐದು ರಥಯಾತ್ರೆ
ಪಶ್ಚಿಮ ಬಂಗಾಳದಲ್ಲಿ ಒಟ್ಟು ಐದು ರಥಯಾತ್ರೆಗಳನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಮೊದಲು ಫೆಬ್ರುವರಿ 6ರಂದು ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ಜೆ.ಪಿ ನಡ್ಡಾ ದಕ್ಷಿಣ ಬಂಗಾಳದ ನವದ್ವೀಪದಲ್ಲಿ ರಥಯಾತ್ರೆ ಆರಂಭಿಸಲಿದ್ದಾರೆ. ಫೆ.11ರಂದು ಅಮಿತ್ ಶಾ ಉತ್ತರ ಬಂಗಾಳದ ಕೂಚ್ ಬೇಹಾರ್ ನಲ್ಲಿ ರಥ ಯಾತ್ರೆ ನಡೆಸಲಿದ್ದಾರೆ. ಝಾರ್ ಗ್ರಾಮ, ಕಾಕದ್ವೀಪ ಹಾಗೂ ತಾರಾಪಿತ್ ನಲ್ಲಿ ಇನ್ನುಳಿದ ಮೂರು ರಥಯಾತ್ರೆಗಳು ನಡೆಯಲಿವೆ. ಪ್ರತಿ ಮೆರವಣಿಗೆಯೂ 25 ದಿನಗಳವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.
"ರಥಯಾತ್ರೆ ಬಿಜೆಪಿಯ ಪ್ರಚೋದನಾ ತಂತ್ರ"
ಬಿಜೆಪಿ ರಥಯಾತ್ರೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ರಥಯಾತ್ರೆ ಕಾನೂನುಬದ್ಧ ರಾಜಕೀಯ ಸಾಧನ ಎಂದು ಬಿಜೆಪಿ ಹೇಳಿದರೆ, ಇದು ಪ್ರಚೋದನೆ ಎಂದು ತೃಣಮೂಲ ಕಾಂಗ್ರೆಸ್ ಪ್ರತಿಪಾದಿಸುತ್ತಿದೆ. ಈ ಚುನಾವಣಾ ಮೆರವಣಿಗೆ ಕೋಮು ಗಲಭೆಗೆ ಕಾರಣವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಕೋರಿ ಕೋಲ್ಕತ್ತಾ ಹೈಕೋರ್ಟ್ ವಕೀಲರೊಬ್ಬರು ರಥಯಾತ್ರೆ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದ್ದು, ರಥಯಾತ್ರೆ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.
ವಿರೋಧ ಪಕ್ಷದ ದನಿ ಅಡಗಿಸುವ ಹುನ್ನಾರ; ಬಿಜೆಪಿ
ರಥಯಾತ್ರೆ ಬಗ್ಗೆ ಟಿಎಂಸಿ ಆಕ್ಷೇಪ ವ್ಯಕ್ತಪಡಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳಿಗೆ ಜನರ ಬಳಿ ಹೋಗಿ ಮತ ಕೇಳುವ ಹಕ್ಕು ಇದೆ. ಆದರೆ ಮಮತಾ ಬ್ಯಾನರ್ಜಿ ಸರ್ಕಾರ ಯಾವಾಗಲೂ ವಿರೋಧ ಪಕ್ಷದ ದನಿ ಅಡಗಿಸಲು ಯತ್ನಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಆರೋಪಿಸಿದ್ದಾರೆ. ಈ ಯಾತ್ರೆಗಳು ಮಮತಾ ಸರ್ಕಾರದ ಭ್ರಷ್ಟಾಚಾರಗಳನ್ನೂ ಹೊರಗೆಳೆಯಲು ಸಹಾಯ ಮಾಡಲಿವೆ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಘೋಷಣೆಯನ್ನೇ ಬಳಸಿಕೊಂಡ ಬಿಜೆಪಿ
ಈ ರಥಯಾತ್ರೆಗಳನ್ನು "ಪರಿವರ್ತನಾ ಯಾತ್ರೆ" ಎಂದು ಬಿಜೆಪಿ ಕರೆದುಕೊಂಡಿದೆ. 2011ರಲ್ಲಿ ಮಮತಾ ಬ್ಯಾನರ್ಜಿ ಎಡಪಕ್ಷ ತೊರೆದು ಬಂದಾಗ "ಪರಿವರ್ತನೆ" ಎಂಬ ಘೋಷಣೆಯನ್ನೇ ಹೇಳಿಕೊಂಡು ಪಕ್ಷ ಬಿಟ್ಟು ಬಂದಿದ್ದರು. ಇದೀಗ ಬಿಜೆಪಿ ಅದೇ ಘೋಷಣೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದೆ.
"ರಾಜ್ಯ ಒಡೆಯಲು ಬಿಜೆಪಿ ಸಂಚು"
ರಥಯಾತ್ರೆಗೆ ಅನುಮತಿ ಕೊಡುವಲ್ಲಿ ತೃಣಮೂಲ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ರಥ ಯಾತ್ರೆಗೆ ಅನುಮತಿ ನೀಡುವುದು ಸಂಪೂರ್ಣ ಆಡಳಿತಾತ್ಮಕ ವಿಷಯ ಎಂದು ತೃಣಮೂಲ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ. ಆಡಳಿತ ಇದನ್ನು ನಿರ್ಧಾರ ಮಾಡಲಿ. ಆದರೆ ಬಿಜೆಪಿ ರಾಜ್ಯವನ್ನು ಒಡೆಯಲು ಹಿಂದಿನಿಂದಲೂ ಪ್ರಯತ್ನಿಸುತ್ತಿದೆ, ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ.