ಬಿಜೆಪಿ ಪಿತೂರಿ: ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆ ಹಿಂದೆ ಕೇಸರಿ ಪಡೆ!?
ಕೋಲ್ಕತ್ತಾ, ಮಾರ್ಚ್.12: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೇಲೆ ನಡೆದಿರುವ ಹಲ್ಲೆಯ ಹಿಂದೆ ಬಿಜೆಪಿಯ ವ್ಯವಸ್ಥಿತ ಪಿತೂರಿ ಅಡಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಆರು ಮಂದಿ ಸದಸ್ಯರ ತಂಡವು ಶುಕ್ರವಾರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದರು. ಮಮತಾ ಬ್ಯಾನರ್ಜಿಯವರ ಮೇಲಿನ ಹಲ್ಲೆಗೆ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮನವಿ ಮಾಡಿತು.
ಪಶ್ಚಿಮ ಬಂಗಾಳ; ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ವಿಳಂಬಕ್ಕೆ ಅಸಮಾಧಾನ
ತೃಣಮೂಲ ಕಾಂಗ್ರೆಸ್ಸಿನ ಡೆರೆಕ್ ಓಬ್ರಿಯನ್, ಸೌಗತ್ ರಾಯ್, ಕಾಕೋಳಿ ಘೋಷ್ ದಸ್ತಿದಾರ್, ಸತಾಬ್ದಿ ರಾಯ್, ಪ್ರತಿಮಾ, ಸಂತನು ಸೇನ್ ಸದಸ್ಯರನ್ನೊಳಗೊಂಡ ನಿಯೋಗವು ಬಿಜೆಪಿ ವಿರುದ್ಧ ಆರೋಪಿಸಿದೆ. ಮಮತಾ ಬ್ಯಾನರ್ಜಿಯವರ ಮೇಲೆ ನಡೆಸಿದ ದಾಳಿಯು ಪೂರ್ವ ನಿಯೋಜಿತ ಹಾಗೂ ವ್ಯವಸ್ಥಿತ ಪಿತೂರಿ ಎಂದು ದೂಷಿಸಿದೆ.
ಘಟನೆಗಳ ಸರಪಳಿ ಬಗ್ಗೆ ಉಲ್ಲೇಖಿಸಿರುವ ಟಿಎಂಸಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ನಡೆಸಿರುವ ಘಟನೆಗೂ ಪೂರ್ವ ನಿಯೋಜಿತ ಎನ್ನುವುದನ್ನು ಸಾಬೀತುಪಡಿಸುವಂತಾ ಘಟನೆಗಳ ಸರಪಳಿಯ ಬಗ್ಗೆ ಟಿಎಂಸಿ ನಾಯಕರು ನಿಯೋಗವು ದೂರಿನಲ್ಲಿ ಉಲ್ಲೇಖಿಸಿದೆ. ಕಳೆದ ಮಾರ್ಚ್ 8ರಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ಈ ಚಿತ್ರದಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮ್ ಭೇಟಿ ವೇಳೆ ಅವರ ಮೇಲೆ ಹಲ್ಲೆ ನಡೆಯುತ್ತದೆ ಎಂಬುದನ್ನು ತೋರಿಸುವಂತಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಡಿಜಿಪಿ ತೆಗೆದು ಹಾಕುವಂತೆ ದೂರು
ಪಶ್ಚಿಮ ಬಂಗಾಳದ ಹಿಂದಿನ ಮಹಾನಿರ್ದೇಶಕ ವೀರೇಂದ್ರರನ್ನು ತಕ್ಷಣ ತೆಗೆದುಹಾಕಬೇಕೆಂದು ಕೋರಿ ಬಿಜೆಪಿಯು ಕೇಂದ್ರ ಚುನಾವಣಾ ಆಯೋಗಕ್ಕೆ ಹಲವು ದೂರುಗಳನ್ನು ಸಲ್ಲಿಸಲಾಗಿತ್ತು. ಮಾ.9ರಂದು ಯಾವುದೇ ಸಮಾಲೋಚನೆ ಇಲ್ಲದೇ ಹಠಾತ್ ನಿರ್ಧಾರದಲ್ಲಿ ಏಕಪಕ್ಷೀಯವಾಗಿ ತೆಗೆದು ಹಾಕಲಾಯಿತು. ಪಶ್ಚಿಮ ಬಂಗಾಳ ಪೊಲೀಸ್ ಮಹಾ ನಿರ್ದೇಶಕ ವೀರೇಂದ್ರ ಸ್ಥಾನಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಿ. ನಿರಜ್ನಾಯನ್ ಅವರನ್ನು ನೇಮಿಸಿ ಆದೇಶಿಸಿತ್ತು.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಸ್ತಿ ಘೋಷಣೆ
ಅನುಮಾನ ಹುಟ್ಟಿಸುವ ರೀತಿಯಲ್ಲಿ ಬಿಜೆಪಿ ಸಂಸದರ ಟ್ವೀಟ್
ಕಳೆದ ಮಾರ್ಚ್ 9ರಂದು ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರು ಬರೆದಿರುವ ಟ್ವೀಟ್ ಕೂಡಾ ಅನುಮಾನ ಹುಟ್ಟಿಸುವಂತಿದೆ. ಅವರು ಟ್ವಟ್ಟರ್ ನಲ್ಲಿ "ನಾಳೆ ಸಂಜೆ 5 ಗಂಟೆಗೆ ನೀವು ಎಲ್ಲವನ್ನೂ ತಿಳಿಯುತ್ತೀರಿ" ಎಂಬ ಸಂದೇಶವನ್ನು ಹಾಕಿದ್ದಾರೆ. ಈ ಟ್ವೀಟ್ ಸಂದೇಶಕ್ಕೂ ಮಾರ್ಚ್10ರಂದು ನಂದಿಗ್ರಾಮ್ ನಲ್ಲಿ ನಡೆದ ಮಮತಾ ಬ್ಯಾನರ್ಜಿಯವರ ಮೇಲಿನ ಹಲ್ಲೆಗೂ ನಂಟು ಇರುವ ಅನುಮಾನ ಹುಟ್ಟಿಕೊಳ್ಳುತ್ತಿದೆ ಎಂದು ಟಿಎಂಸಿ ನಿಯೋಗವು ಆರೋಪಿಸಿದೆ.
ಎಸ್ಪಿ ಸೇರಿದಂತೆ ಪೊಲೀಸರು ಗೈರು ಆಗಿದ್ದೇಕೆ?
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಮಾನ ಹೊಣೆ ಹೊತ್ತುಕೊಳ್ಳಬೇಕಿದೆ. ಸಿಎಂ ಮೇಲಿನ ಹಲ್ಲೆ ನಡೆದ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸ್ಥಳೀಯ ಪೊಲೀಸರು ಗೈರು ಹಾಜರಾಗಿದ್ದು ಏಕೆ ಎನ್ನುವುದನ್ನು ಟಿಎಂಸಿ ನಾಯಕರು ಪ್ರಶ್ನೆ ಮಾಡಿದ್ದಾರೆ.
ಪ್ರತ್ಯಕ್ಷ ಸಾಕ್ಷಿಗಳು ಸುವೇಂದು ಅಧಿಕಾರಿ ಸಹಚರರು
ಮಮತಾ ಬ್ಯಾನರ್ಜಿ ಅವರ ಕಾರಿನ ಬಾಗಿಲು ಕಂಬಕ್ಕೆ ಬಡೆದು ಮುಖ್ಯಮಂತ್ರಿಯವರಿಗೆ ಗಾಯವಾಗಿದೆ ಎಂದು ಘಟನೆ ಬಗ್ಗೆ ಪ್ರತ್ಯಕ್ಷ ಸಾಕ್ಷಿದಾರರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ನಾಯಕರು ಈ ಘಟನೆ ಕುರಿತು ಉದ್ದೇಶಪೂರ್ವಕವಾಗಿ ಸಾಕ್ಷಿದಾರರನ್ನು ಸೃಷ್ಟಿ ಮಾಡಲಾಗಿದೆ. ಘಟನೆಯನ್ನು ಕಣ್ಣಾರೆ ಕಂಡಿದ್ದಾಗಿ ಸಾಕ್ಷಿ ನುಡಿದಿರುವ ಚಿತ್ತರಂಜನ್ ದಾಸ್, ದೆಬಬ್ರತಾ ದಾಸ್ ಅವರು ನಂದಿಗ್ರಾಮ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಸಹಚರರಾಗಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.
ನಿಷ್ಪಕ್ಷಪಾತ ತನಿಖೆ ನಡೆಸಲು ಟಿಎಂಸಿ ಮನವಿ
ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರ ಫೇಸ್ ಬುಕ್ ಪೋಸ್ಟ್, ಡಿಜಿಪಿ ವೀರೇಂದ್ರ ಅವರ ದಿಢೀರ್ ಬದಲಾವಣೆ, ಬಿಜೆಪಿ ಸಂಸದ ಸೌಮಿತ್ರಾ ಖಾನ್ ಅವರ ಟ್ವಿಟರ್ ಸಂದೇಶ ಹಾಗೂ ಪ್ರತ್ಯಕ್ಷ ಸಾಕ್ಷಿಗಳ ಹಿನ್ನೆಲೆ ಅರಿತುಕೊಂಡು ಕೂಲಂಕುಶವಾಗಿ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಟಿಎಂಸಿ ನಿಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ಪ್ರಕರಣ?
ಪಶ್ಚಿಮ ಬಂಗಾಳದ ಬಿರುಲಿಯಾ ಬಜಾರ್ನಲ್ಲಿ ಸ್ಥಳೀಯರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಅಪರಿಚಿತರು ನನ್ನನ್ನು ತಳ್ಳಿದ್ದರಿಂದ ನನ್ನ ಕಾಲಿಗೆ ಗಾಯವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಘಟನೆ ಬಳಿಕ ಗಾಯಗೊಂಡ ಅವರನ್ನು ಕೋಲ್ಕತ್ತಾದ ಎಸ್ಎಸ್ ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ವಿಡಿಯೋ ಮೂಲಕ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ ಮಮತಾ ಬ್ಯಾನರ್ಜಿ ಅವರು ಶಾಂತಿಯುತವಾಗಿ ವರ್ತಿಸುವಂತೆ ಮನವಿ ಮಾಡಿಕೊಂಡಿದ್ದರು.