ರಾಮ್ಪುರಹತ್ ಹತ್ಯಾಕಾಂಡ: ಸಿಬಿಐ ದಾಖಲಿಸಿದ ಎಫ್ಐಆರ್ನಲ್ಲಿ ಏನಿದೆ?
ಕೋಲ್ಕತ್ತಾ, ಮಾರ್ಚ್ 26: ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ರಾಮ್ಪುರಹತ್ನಲ್ಲಿ ನಡೆದಿರುವ 8 ಜನರ ಹತ್ಯಾಕಾಂಡ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿರುವ ಸಿಬಿಐ ಅಧಿಕಾರಿಗಳು 21 ಶಂಕಿತರ ಹೆಸರನ್ನು ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಸ್ಥಳೀಯ ಪಂಚಾಯತ್ನ ಟಿಎಂಸಿ 'ಉಪ-ಪ್ರಧಾನ' ಆಗಿದ್ದ ಬದು ಶೇಖ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು "ಪ್ರತಿಕಾರ" ಹಿಂಸಾಚಾರವನ್ನು ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ತನ್ನ ಎಫ್ಐಆರ್ನಲ್ಲಿ ಹೇಳಿದೆ. ಹಿಂದಿನ ದಿನವಷ್ಟೇ ಬದು ಶೇಖ್ ಮೇಲೆ ಅಪರಿಚಿತ ದಾಳಿಕೋರರು ಕಚ್ಚಾ ಬಾಂಬ್ಗಳಿಂದ ದಾಳಿ ನಡೆಸಿದ್ದರು.
ಪ್ರತೀಕಾರಕ್ಕಾಗಿ ನಡೆಸಿದ ದಾಳಿಯಲ್ಲಿ 70 ರಿಂದ 8 ಜನರು ಸಂತ್ರಸ್ತರ ಮನೆಗಳನ್ನು ಧ್ವಂಸಗೊಳಿಸಿದ್ದಾರೆ. ಮನೆಯೊಳಗಿದ್ದ ಜನರನ್ನು ಕೊಲ್ಲುವ ಉದ್ದೇಶದಿಂದಲೇ ಬೆಂಕಿ ಹಚ್ಚಲಾಗಿದೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.

ಸಿಬಿಐ ಎಫ್ಐಆರ್ನಲ್ಲಿ 21 ಮಂದಿ ಹೆಸರು:
ಸಿಬಿಐ ಅಧಿಕಾರಿಗಳು ದಾಖಲಿಸಿಕೊಂಡಿರುವ ಎಫ್ಐಆರ್ನಲ್ಲಿ 21 ಮಂದಿ ಹೆಸರನ್ನು ಉಲ್ಲೇಖಿಸಲಾಗಿದೆ. ಆಜಾದ್ ಚೌಧರಿ, ಇಂತಾಜ್, ಮೋಫಿಜಲ್, ಆಶಿಮ್, ರಾಣಾ, ನಜ್ರುಲ್, ಅಜಾಹರ್, ಮೊರ್ತೇಜ್, ರಾಸ್ಟೋನ್, ರೋಹನ್, ನಾಜಿರ್, ಲಾಲನ್, ಬಪ್ಪಾ, ಜಹಾಂಗೀರ್, ಸಬು, ರಾಜ್, ಮೊಫುದ್ದೀನ್, ನಾಯನ್ ದೇವನ್, ಅಶ್ರಫ್, ತೌಸಿಬ್, ರಾಮಜಾನ್ ಎಂಬ ಹೆಸರುಗಳನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ರಾಮ್ಪುರಹತ್ ಗ್ರಾಮಕ್ಕೆ ಸಿಐಬಿ ತಂಡದ ಭೇಟಿ:
ಬಿರ್ಭುಮ್ ಜಿಲ್ಲೆಯ ರಾಮ್ಪುರಹತ್ನಲ್ಲಿ ನಡೆದಿರುವ 8 ಜನರ ಹತ್ಯಾಕಾಂಡ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಹೈಕೋರ್ಟ್ ಶುಕ್ರವಾರ ಕೇಂದ್ರೀಯ ತನಿಖಾ ತಂಡಕ್ಕೆ ವಹಿಸಿ ಆದೇಶ ಹೊರಡಿಸಿತು. ಅದೇ ದಿನ ಗ್ರಾಮಕ್ಕೆ ಭೇಟಿ ನೀಡಿದ ಸಿಬಿಐ ತಂಡವು ರಾಮ್ಪುರಹತ್ ಪೊಲೀಸ್ ಠಾಣೆಗೆ ತೆರಳಿ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಕಡತಗಳು ಮತ್ತು ದಾಖಲೆಗಳನ್ನು ತೆಗೆದುಕೊಂಡಿತು.
ಸಿಬಿಐನ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ (ಸಿಎಫ್ಎಸ್ಎಲ್) ತಂಡವು ವಿಧಿವಿಜ್ಞಾನ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದ್ದು, ಶುಕ್ರವಾರ ಬೆಂಕಿಯಲ್ಲಿ ಸುಟ್ಟುಹೋದ ಮನೆಗಳನ್ನು ವೀಕ್ಷಿಸಿತು.
ಬಿರ್ಭುಮ್ ಹತ್ಯಾಕಾಂಡ ಪ್ರಕರಣದ ಹಿನ್ನೆಲೆ:
ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ರಾಮ್ಪುರಹತ್ ಬ್ಲಾಕ್ 1ರ ಅಡಿಯಲ್ಲಿ ಬರೀಶಾಲ್ ಗ್ರಾಮ ಪಂಚಾಯತ್ನ ಉಪ ಪ್ರಧಾನ (ಟಿಎಂಸಿ) ಬದು ಶೇಖ್ ಮೇಲೆ ನಾಲ್ವರು ದುಷ್ಕರ್ಮಿಗಳು ಕಚ್ಚಾಬಾಂಬ್ ಎಸೆದು ಹತ್ಯೆ ಮಾಡಿದರು ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಖ್ ಅನ್ನು ರಾಮ್ಪುರಹತ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಅಂತಿಮವಾಗಿ ಶೇಖ್ ಮೃತದೇಹವನ್ನು ಬೊಗ್ಟುಯಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು. ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡರು.
ಈ ಘಟನೆ ಬೆನ್ನಲ್ಲೇ ರಾಮ್ಪುರಹತ್ ಗ್ರಾಮದಲ್ಲಿ ಹಿಂಸಾಚಾರ ಭುಗಿಲೆದ್ದಿತು. ರಾಮ್ಪುರಹತ್ನಲ್ಲಿ ಮಂಗಳವಾರ ಮುಂಜಾನೆ ಎಂಟು ಜನರು ತಮ್ಮ ಮನೆಗೆ ಬೆಂಕಿ ಹಚ್ಚಲಾಗಿದ್ದು, ಮನೆಯಲ್ಲಿದ್ದ ಹತ್ತು ಜನರ ಪೈಕಿ ಏಳು ಮಂದಿ ಮನೆಯಲ್ಲಿಯೇ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಪ್ರಾಣ ಬಿಟ್ಟಿದ್ದರು.












Click it and Unblock the Notifications