ಬಿಜೆಪಿಯವರನ್ನು ಹೊರಗಿನವರಂತೆ ಬಿಂಬಿಸಲಾಗುತ್ತಿದೆ; ಅಮಿತ್ ಶಾ
ಕೋಲ್ಕತ್ತಾ, ಡಿಸೆಂಬರ್ 19: ಪಶ್ಚಿಮ ಬಂಗಾಳಕ್ಕೆ ಎರಡು ದಿನದ ಭೇಟಿಯಲ್ಲಿರುವ ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ತೃಣಮೂಲ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರನ್ನು ಹೊರಗಿನವರು ಎಂದು ಬಿಂಬಿಸುತ್ತಿರುವ ಕುರಿತು ಹರಿಹಾಯ್ದಿದ್ದಾರೆ.
"ಈಗ ಪಶ್ಚಿಮ ಬಂಗಾಳದಲ್ಲಿ, ಸಂಕುಚಿತ ರಾಜಕೀಯ ಮಾಡುತ್ತಿರುವವರಿಗೆ ನಾನು ಹೇಳುವುದು ಇಷ್ಟೆ. ಖುದೀರಾಮ್ ಬೋಸ್ ಪಶ್ಚಿಮ ಬಂಗಾಳದವರಷ್ಟೇ ಅಲ್ಲ, ಭಾರತಕ್ಕೂ ಸಂಬಂಧಿಸಿದವರು. ರಾಮ್ ಪ್ರಸಾದ್ ಬಿಸ್ಮಿಲ್ ಉತ್ತರ ಪ್ರದೇಶದೊಂದಿಗೆ ಪ.ಬಂಗಾಳಕ್ಕೂ ಸಂಬಂಧಪಟ್ಟವರು. ಈ ಸ್ವಾತಂತ್ರ್ಯ ಹೋರಾಟಗಾರರು ಎಂದಿಗೂ ಈ ರೀತಿಯ ಸಂಕುಚಿತ ರಾಜಕೀಯದ ಬಗ್ಗೆ ಆಲೋಚಿಸಿದವರಲ್ಲ. ಹುತಾತ್ಮರ ದಿನವಾದ ಇಂದು ಇಂಥ ರಾಜಕೀಯವನ್ನು ಮೀರಿ ಬೆಳೆಯುವ ಕುರಿತು ಆಲೋಚಿಸಬೇಕು" ಎಂದಿದ್ದಾರೆ.
ಪೂರ್ವ ಮಿಡ್ನಾಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಖುದೀರಾಮ್ ಬೋಸ್ ಪ್ರತಿಮೆಗೆ ಹೂಮಾಲೆ ಹಾಕಿ, ಕುಟುಂಬ ಸದಸ್ಯರನ್ನು ಭೇಟಿಯಾಗಿ ಅವರು ಮಾತನಾಡಿದರು.

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಇತರೆ ಮುಖಂಡರು ಬಿಜೆಪಿಯನ್ನು ಹೊರಗಿನವರು ಎಂದು ಬ್ರ್ಯಾಂಡ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೊರಗಿನವರು ಬಂದು ಪಶ್ಚಿಮ ಬಂಗಾಳವನ್ನು ಆಳುತ್ತಾರೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ದೂರಿದರು.
"ಭಾರತ ಎಂದಿಗೂ ಬಂಗಾಳದ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಇಂಥ ನೆಲಕ್ಕೆ ನಾನು ಬಂದಿದ್ದೇನೆ ಎಂಬುದೇ ನನಗೆ ಹೆಮ್ಮೆ" ಎಂದು ಹೇಳಿದರು.












Click it and Unblock the Notifications