ದೇಶ ವಿನಾಶವಾಗುತ್ತಿದೆ: ಆತಂಕ ವ್ಯಕ್ತಪಡಿಸಿದ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್
ಕೋಲ್ಕತಾ, ಜುಲೈ 1: ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧೆಡೆ ನೆಲೆಸಿರುವ ಕೋಮುಸೂಕ್ಷ್ಮ ವಾತಾವರಣದ ಬಗ್ಗೆ ಮಾತನಾಡಿದ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್, ಈ ದೇಶದ ವಿನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಲ್ಲಿಯ ಸಾಲ್ಟ್ ಲೇಕ್ ಪ್ರದೇಶದಲ್ಲಿ ಅಮರ್ತ್ಯ ಸೇನ್ ರೀಸರ್ಚ್ ಸೆಂಟರ್ನ ಉದ್ಘಾಟನೆ ಮಾಡಿದ ಅವರು, ಈ ದೇಶದಲ್ಲಿ ಈಗ ಆಗುತ್ತಿರುವ ವಿಭಜನೆ, ಭೇದಗಳು ತಮಗೆ ಅತಿ ಹೆಚ್ಚು ಭೀತಿ ತಂದಿವೆ ಎಂದಿದ್ದಾರೆ.
ತೀಸ್ತಾ ಸೆಟಲ್ವಾಡ್, ಮೊಹಮ್ಮದ್ ಜುಬೇರ್ ಮೊದಲಾದವರನ್ನು ಇತ್ತೀಚೆಗೆ ಬಂಧಿಸಿರುವ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅಮರ್ತ್ಯ ಸೇನ್, ಬ್ರಿಟಿಷರ ಕಾಲದ ಕಾನೂನುಗಳನ್ನು ಬಳಸಿ ಜನರನ್ನು ಜೈಲಿಗೆ ಕಳುಹಿಸುವ ಅಸಾಧಾರಣ ಸನ್ನಿವೇಶವೂ ನಿರ್ಮಾಣವಾಗಿದೆ ಎಂದು ವಿಷಾದಿಸಿದ್ದಾರೆ.
ಮೊನ್ನೆಮೊನ್ನೆ ಉದಯಪುರ್ನಲ್ಲಿ ಹಿಂದೂ ದರ್ಜಿಯೊಬ್ಬರನ್ನು ಇಬ್ಬರು ಮುಸ್ಲಿಮ್ ವ್ಯಕ್ತಿಗಳು ಕತ್ತು ಸೀಳಿ ಕೊಲೆ ಮಾಡಿದ್ದರು. ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರೆನ್ನಲಾದ ನೂಪುರ್ ಶರ್ಮಾರನ್ನು ಸೋಷಿಯಲ್ ಮೀಡಿಯಾದಲ್ಲಿ ಬೆಂಬಲಿಸಿದ್ದ ದರ್ಜಿ ಕನ್ಹಯ್ಯ ಲಾಲ್ ಅವರನ್ನು ದುರುಳಲು ಹತ್ಯೆಗೈದು ವಿಡಿಯೋ ಕೂಡ ಮಾಡಿ, ಬಳಿಕ ಪ್ರಧಾನಿ ನರೇಂದ್ರ ಮೋದಿಗೂ ಎಚ್ಚರಿಕೆ ನೀಡಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅಮರ್ತ್ಯ ಸೇನ್, ಸದ್ಯದ ಸ್ಥಿತಿಯಲ್ಲಿ ಹಿಂದೂ ಮತ್ತು ಮುಸ್ಲಿಮರು ಒಟ್ಟಿಗೆ ಕೆಲಸ ಮಾಡಬೇಕಾದ ಅಗತ್ಯತೆ ಇದೆ ಎಂದಿದ್ದಾರೆ.

ಸಹಿಷ್ಣುತೆ ಮಾತ್ರದಿಂದಲೇ ಆಗಲ್ಲ:
ಈಗ ನಡೆಯುತ್ತಿರುವ ವಿಧ್ವಂಸಕರ ವಿದ್ಯಮಾನಗಳು ನಿಲ್ಲಬೇಕಾದರೆ ಕೇವಲ ಸಹಿಷ್ಣುತೆಯ ತತ್ವದಿಂದ ಸಾಧ್ಯವಾಗುವುದಿಲ್ಲ ಎಂದು ಖ್ಯಾತ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
"ಭಾರತದ ಸಂಸ್ಕೃತಿಯೇ ಸಹಿಷ್ಣುತೆಯನ್ನು ಒಳಗೊಂಡಿರುವಂಥದ್ದು. ಈಗ ಹಿಂದೂ ಮತ್ತು ಮುಸ್ಲಿಮರು ಒಟ್ಟಿಗೆ ಕೆಲಸ ಮಾಡುವ ತುರ್ತು ಅಗತ್ಯತೆ ಈಗ ಇದೆ. ಇಲ್ಲಿ ಬಹುಸಂಖ್ಯಾತರೇ ಅಂತಿಮ ಅಲ್ಲ" ಎಂದು ಅಮರ್ತ್ಯ ಸೇನ್ ಅಭಿಪ್ರಾಯಪಟ್ಟಿದ್ದಾರೆ.
"ಭಾರತವನ್ನು ಭಾಧಿಸುತ್ತಿರುವ ವಿಭಜನೆಗಳ ಅಪಾಯವನ್ನು ನೀವು ಎದುರಿಸಬೇಕೆಂದಿದ್ದರೆ ಒಟ್ಟಿಗೆ ಕೆಲಸ ಮಾಡುವುದು ಮುಖ್ಯ. ನನ್ನ ಅಜ್ಜ ಕ್ಷಿತಿಮೋಹನ್ ಸೇನ್ ಈ ಒಟ್ಟಿಗೆ ಕೆಲಸ ಮಾಡುವುದನ್ನು ಹಿಂದೂ ಮತ್ತು ಮುಸ್ಲಿಮರ ಜುಟ್ಕೊ ಸಾಧನ ಎಂದು ಕರೆಯುತ್ತಿದ್ದರು" ಎಂದು ಅವರು ಸ್ಮರಿಸಿದ್ದಾರೆ.

ಭಾರತದಲ್ಲಿ ಹಿಂದೂ ಸಂಸ್ಕೃತಿಯೇ ಎಲ್ಲಾ ಅಲ್ಲ
"ಭಾರತ ಕೇವಲ ಹಿಂದೂ ಸಂಸ್ಕೃತಿಯನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ. ಮುಸ್ಲಿಮರ ಸಂಸ್ಕೃತಿಯೂ ಈ ದೇಶದ ಇತಿಹಾಸದ ಭಾಗವಾಗಿದೆ. ಉದಾಹರಣೆಗೆ, ತಾಜ್ ಮಹಲ್ ನಿರ್ಮಾಣವನ್ನು ಹಿಂದೂಗಳು ತಮ್ಮ ಸಂಸ್ಕೃತಿ ಎಂದು ಹೇಳಲು ಆಗುವುದಿಲ್ಲ.
"ಶಾಹಜಹಾನರ ಮಗ ದಾರಾ ಶಿಕೋಹ ಸಂಸ್ಕೃತದಲ್ಲಿದ್ದ 50 ಉಪನಿಷದ್ಗಳನ್ನು ಪರ್ಷಿಯಾ ಭಾಷೆಗೆ ಭಾಷಾಂತರ ಮಾಡಿದ್ದರು. ಇದರಿಂದ ಇಡೀ ವಿಶ್ವಕ್ಕೆ ಹಿಂದೂ ಗ್ರಂಥ, ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಂಪ್ರದಾಯಗಳ ಬಗ್ಗೆ ತಿಳಿಯುವಂತಾಯಿತು.
"ಪಂಡಿತ್ ರವಿಶಂಕರ್ ಮತ್ತು ಅಲಿ ಅಕ್ಬರ್ ಖಾನ್ ಅವರು ಸಂಯೋಜಿಸಿದ ಸಂಗೀತ ಮತ್ತು ರಾಗಗಳು ವಿಭಿನ್ನ ಧಾರ್ಮಿಕರ ಸಮ್ಮಿಳನದಂದ ಸಂಗೀತದ ಮಾಂತ್ರಿಕತೆ ಹೇಗೆ ಸೃಷ್ಟಿಯಾಗಬಹುದು ಎಮಬುದಕ್ಕೆ ಉದಾಹರಣೆಗಳಾಗಿವೆ. ಭಾರತಕ್ಕೆ ಈಗ ಇಂಥ ಸಮ್ಮಿಳನದ ಅಗತ್ಯತೆ ಇದೆ" ಎಂದು ಅಮರ್ತ್ಯ ಸೇನ್ ಹೇಳಿದ್ಧಾರೆ.

ಪ್ರವಾದಿ ಬಗ್ಗೆ ಅವಹೇಳನ ಸರಿಯಲ್ಲ
"ನಾವು ಪರಸ್ಪರ ಸಂವಾದ ಮಾಡುವುದು ಬಹಳ ಮುಖ್ಯ. ಈ ದೇಶದ ಇತಿಹಾಸದ ವಾಸ್ತವತೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು. ನಮ್ಮ ದೇಶದ ಹಲವು ಸಾಧನೆಗಳಿಗೆ ಮುಸ್ಲಿಮರು ಕಾರಣರಾಗಿದ್ದಾರೆ. ಹೀಗಿರುವಾಗ ಅವರ ಧರ್ಮದ ಅತಿದೊಡ್ಡ ವ್ಯಕ್ತಿ ಎನಿಸಿರುವ ಪ್ರವಾದಿ ಮೊಹಮ್ಮದ್ ವಿರುದ್ಧ ಟೀಕೆ ಮಾಡುವುದು ಅತಿದೊಡ್ಡ ಪ್ರಮಾದ. ನಮ್ಮ ಸಂಬಂಧಗಳನ್ನು ಇದು ಹಾಳು ಮಾಡುತ್ತದೆ" ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರು ತಿಳಿಹೇಳಿದ್ಧಾರೆ.
ಜೂನ್ 30ರಂದು, ಅಮರ್ತ್ಯ ಸೇನ್ ರೀಸರ್ಚ್ ಸೆಂಟರ್ ಉದ್ಘಾಟನೆಯ ವೇಳೆ ಅವರು ಮಾಡಿದ ಸುದೀರ್ಘ ಭಾಷಣದಲ್ಲಿ ಸಹಿಷ್ಣುತೆ, ದ್ವೇಷ, ನ್ಯಾಯಾಂಗ ಇತ್ಯಾದಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಒಳ್ಳೆಯ ಶಾಲಾ ವ್ಯವಸ್ಥೆ ಬೇಕು
"ಭಾರತದಲ್ಲಿ ಹೇಗೆ ಬಹುತ್ವದ ಪರಿಕಲ್ಪನೆ ಇದೆ ಎಂಬುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕಾದರೆ ಒಳ್ಳೆಯ ಶಾಲಾ ವ್ಯವಸ್ಥೆ ಇರುವುದು ಮುಖ್ಯ. ಭಾರತ ಒಂದು ರಾಷ್ಟ್ರವಾಗಿ ಹೇಗಿರಬೇಕು ಎಂಬುದನ್ನು ಶಾಲೆಗಳು ಮಕ್ಕಳಿಗೆ ಕಲಿಸಿಕೊಡಬೇಕು. ನಮ್ಮ ದೇಶವು ಮುಸ್ಲಿಮರು, ಫಾರ್ಸಿಗಳು, ಕ್ರೈಸ್ತರು, ಯಹೂದಿಗಳಿಗೆ ಹೇಗೆ ನೆಲೆ ಕೊಡುವ ಮನಸು ಮಾಡಿತು ಎಂಬುದನ್ನು ಮಕ್ಕಳು ತಿಳಿದುಕೊಳ್ಳಬೇಕು.
"ನಮ್ಮ ಅನೇಕ ಭಾರತೀಯ ಸಾಹಿತ್ಯ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನರ್ತನ ಇವೆಲ್ಲವೂ ಬೇರೆ ಬೇರೆ ಧರ್ಮಸ್ಥರ ಸಹಭಾಗಿತ್ವದಲ್ಲಿ ನಡೆದಿರುವುದು ಹೇಗೆ? ಈಗ ಏನಾಗುತ್ತಿದೆ? ಶಾಲಾ ವ್ಯವಸ್ಥೆಯು ದುರ್ಬಲಗೊಂಡಿದ್ದು ಅಪಾಯ ತಂದಿದೆ" ಎಂದು ಅಮರ್ತ್ಯ ಸೇನ್ ವಾದಿಸಿದ್ದಾರೆ.

ದ್ವೇಷದ ಕಲೆ
"ಒಳ್ಳೆಯ ಶಾಲೆ ಇಲ್ಲದಿದ್ದರೆ ನಮ್ಮ ವಿಜ್ಞಾನ ಮತ್ತು ಶಿಕ್ಷಣಕ್ಕೆ ಮಾರಕವಾಗುತ್ತದೆ. ನಮ್ಮ ಕೌಶಲ್ಯ ಅಭಿವೃದ್ಧಿಗೆ ಮತ್ತು ಕೆಲಸ ಪಡೆಯಲು ಕಷ್ಟವಾಗುತ್ತದೆ. ಹಾಗೆಯೇ, ಭಾರತದಲ್ಲಿ ಈಗ ಇರುವ ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸಲೂ ಶಾಲೆ ಅಗತ್ಯ ಇದೆ. ಇದಕ್ಕೂ ಶಾಲೆಗೂ ಏನು ಸಂಬಂಧ ಎಂದನಿಸಬಹುದು. ಆದರೆ, ಸಂಬಂಧ ಇದೆ" ಎಂದು ಹೇಳುತ್ತಾ ಅಮರ್ತ್ಯ ಸೇನ್ ಅವರು ಆಂಗ್ಲ ಕವಿ ಓಗ್ಡನ್ ನಾಶ್ ಅವರ ಪದ್ಯವೊಂದನ್ನು ಉದಾಹರಿಸಿದರು: "ಯಾವುದೇ ಮಗುವಾದರೂ ಶಾಲೆಯನ್ನು ಹುಚ್ಚನಂತೆ ಪ್ರೀತಿಸಬಹುದು. ಆದರೆ, ದ್ವೇಷ ಮಾಡುವುದು ಒಂದು ಕಲೆ"
ಈ ದ್ವೇಷ ಮಾಡುವ ಕಲೆಯನ್ನು ಭಾರತದಲ್ಲಿ ಅಸಾಧಾರಣ ಮಟ್ಟದಲ್ಲಿ ಬೆಳೆಸಲಾಗುತ್ತಿದೆ ಎಂದು ಅಮರ್ತ್ಯ ಸೇನ್ ಆತಂಕ ವ್ಯಕ್ತಪಡಿಸಿದ್ಧಾರೆ.
(ಒನ್ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications