ದೀದಿಗೆ ಮತ್ತೊಂದು ಶಾಕ್ ಸೂಚನೆ ಕೊಟ್ಟ ತೃಣಮೂಲ ಸಂಸದೆ ಪೋಸ್ಟ್...
ಕೋಲ್ಕತ್ತಾ, ಜನವರಿ 15: ಮೇ ತಿಂಗಳಷ್ಟರಲ್ಲಿ ಸುಮಾರು ಏಳು ಬಿಜೆಪಿ ಸಂಸದರು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಹೇಳಿಕೆ ನೀಡಿದ್ದರ ಪ್ರತಿಯಾಗಿ, ಮುಂದಿನ ತಿಂಗಳಷ್ಟರ ಹೊತ್ತಿಗೆ ತೃಣಮೂಲ ಕಾಂಗ್ರೆಸ್ ನಿಂದ ಐವತ್ತು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ದಿಲೀಪ್ ಘೋಷ್ ತಿರುಗೇಟು ನೀಡಿದ್ದರು.
ಈ ನಡುವೆ ಬಿರ್ಭಮ್ ತೃಣಮೂಲ ಸಂಸದೆ ಹಾಗೂ ನಟಿ ಶತಾಬ್ದಿ ರಾಯ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಾಡಿರುವ ಪೋಸ್ಟ್ ಟಿಎಂಸಿಗೆ ಮತ್ತೊಂದು ಶಾಕ್ ನೀಡುವಂತಿದೆ.
''ಪಶ್ಚಿಮ ಬಂಗಾಳ ಕದನ: ಅಮಿತ್ ಕೊಟ್ಟ ಗುರಿ ಮುಟ್ಟಲಿದೆ ಬಿಜೆಪಿ''
ಗುರುವಾರ ಫೇಸ್ ಬುಕ್ ನಲ್ಲಿ ಶತಾಬ್ದಿ ರಾಯ್, "ನಾನು ಒಂದು ಮುಖ್ಯ ತೀರ್ಮಾನ ತೆಗೆದುಕೊಳ್ಳಲಿದ್ದೇನೆ. ಆ ತೀರ್ಮಾನವನ್ನು ನಿಮಗೆ ಜನವರಿ 16ರಂದು ಮಧ್ಯಾಹ್ನ 2 ಗಂಟೆಗೆ ನಿಮ್ಮ ಮುಂದಿಡಲಿದ್ದೇನೆ" ಎಂದು ಫ್ಯಾನ್ ಕ್ಲಬ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ಪೋಸ್ಟ್ ಅನ್ನು ಅವರೇ ಫ್ಯಾನ್ ಕ್ಲಬ್ ನಲ್ಲಿ ಅಧೀಕೃತವಾಗಿ ಹಾಕಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಆದರೆ ಈ ಪೋಸ್ಟ್ ಹಾಕಿದ ನಂತರ ರಾಯ್ ಫೋನ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂದಿದೆ.
"ಪಕ್ಷದ ಹಲವು ಕಾರ್ಯಕ್ರಮಗಳಿಗೆ ಆಹ್ವಾನಿಸದ ಕಾರಣ ನಾನು ನೊಂದಿದ್ದೇನೆ" ಎಂದು ಬರೆದಿರುವ ಅವರು, "ಕೆಲವರು ನಿಮ್ಮ ಬಳಿಗೆ ನಾನು ಬರುವುದನ್ನು ಬಯಸುತ್ತಿಲ್ಲ. ಅನೇಕ ಕಾರ್ಯಕ್ರಮಗಳ ಬಗ್ಗೆ ನನಗೆ ಮಾಹಿತಿಯನ್ನೇ ನೀಡುತ್ತಿಲ್ಲ. ಹೀಗಿದ್ದರೆ ನಾನು ಕಾರ್ಯಕ್ರಮಗಳಿಗೆ ಹೇಗೆ ಹೋಗಲಿ? ಇದು ನನಗೆ ತುಂಬಾ ಬೇಸರ ತಂದಿದೆ" ಎಂದು ಬರೆದಿದ್ದಾರೆ.
"ಈ ಹೊಸ ವರ್ಷದಲ್ಲಿ, ನಾನು ನಿಮ್ಮೊಂದಿಗೆ ಸಂಪೂರ್ಣವಾಗಿ ತೊಡಗಿಕೊಳ್ಳುವ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೇನೆ. 2009ರಿಂದಲೂ ನಾನು ನಿಮ್ಮೊಂದಿಗಿದ್ದು, ನನಗೆ ಬೆಂಬಲ ನೀಡಿದ್ದೀರಿ. ಲೋಕಸಭೆಗೂ ಕಳುಹಿಸಿದ್ದೀರಿ. ಭವಿಷ್ಯದಲ್ಲಿಯೂ ನಿಮ್ಮ ಬೆಂಬಲ ಇರುತ್ತದೆ ಎಂದು ನಂಬಿದ್ದೇನೆ. ನನ್ನನ್ನು ಪಶ್ಚಿಮ ಬಂಗಾಳದ ಜನರು ತುಂಬಾ ಪ್ರೀತಿಸಿದ್ದಾರೆ. ಅವರೆಡೆಗೆ ನನ್ನ ಕರ್ತವ್ಯವನ್ನು ನಾನು ಪೂರೈಸುತ್ತೇನೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಜನವರಿ 16ರಂದು ತಿಳಿಸುತ್ತೇನೆ" ಎಂದು ಹೇಳಿದ್ದಾರೆ.
ಆದರೆ ಈ ಕುರಿತು ಟಿಎಂಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು, ಟಿಎಂಸಿ, ಬಿಜೆಪಿ ಚುನಾವಣಾ ಹಣಾಹಣಿಯಲ್ಲಿದೆ.