ಅಕ್ರಮ ಭೂಮಿ ಹಂಚಿಕೆ ಆರೋಪ; ಕೋಲಾರ ಮಾಜಿ ತಹಶೀಲ್ದಾರ್, ವರ್ತೂರು ಪ್ರಕಾಶ್ ಗೆ ಆತಂಕ
ಕೋಲಾರ, ನವೆಂಬರ್ 06: ಎರಡು ವರ್ಷದ ಹಿಂದೆ ಕಾರ್ಯನಿರ್ವಹಿಸಿದ್ದ ಕೋಲಾರ ತಾಲೂಕಿನ ತಹಶೀಲ್ದಾರ್ ಹಾಗೂ ಮಾಜಿ ಶಾಸಕ ವರ್ತೂರು ಪ್ರಕಾಶ್ ಗೆ ಈಗ ಆತಂಕ ಶುರುವಾಗಿದೆ. ಇದಕ್ಕೆ ಕಾರಣ ಭೂಮಿ ಹಂಚಿಕೆ ಆರೋಪ.
ವರ್ತೂರು ಪ್ರಕಾಶ್ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಆಗಿನ ತಹಶೀಲ್ದಾರ್ ವಿಜಿಯಣ್ಣ ಸರ್ಕಾರಿ ಭೂಮಿಯನ್ನು ಸಿಕ್ಕ ಸಿಕ್ಕವರಿಗೆ ಹಂಚಿಕೆ ಮಾಡಿದ ಆರೋಪ ಎದುರಿಸುತ್ತಿದ್ದು, ಇದೀಗ ಆ ತಹಶೀಲ್ದಾರ್ ಅವಧಿಯ ಎಲ್ಲ ಭೂ ಮಂಜೂರಾತಿ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶ ಮಾಡಿದೆ. ವಿಜಿಯಣ್ಣ ಅವಧಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆಗೆ ಕೋಲಾರ ಜಿಲ್ಲಾಡಳಿತ ತಂಡ ರಚನೆ ಮಾಡಿದೆ. ಮುಂದೆ ಓದಿ...

ಶಾಸಕ ಕೆ.ಶ್ರೀನಿವಾಸಗೌಡ ಆರೋಪ
2015ರ ಮೇ ತಿಂಗಳಿನಿಂದ 2018 ಸೆಪ್ಟೆಂಬರ್ ವರೆಗೆ ಕೋಲಾರ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದ ವಿಜಿಯಣ್ಣ, ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಿ ಗೋಮಾಳ, ದರಕಾಸ್ತು, ಅಕ್ರಮ - ಸಕ್ರಮ, ಸಾಗುವಳಿ ಚೀಟಿ ಮುಖಾಂತರ ಭೂಮಿ ಮಂಜೂರು ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ವಿಜಿಯಣ್ಣ ಕರ್ತವ್ಯ ನಿರ್ವಹಿಸಿದ್ದ ಸಂದರ್ಭ ಶಾಸಕರಾಗಿದ್ದ ವರ್ತೂರು ಪ್ರಕಾಶ್ ಅವರ ಪ್ರಭಾವಕ್ಕೆ ಒಳಗಾಗಿ ಅಕ್ರಮವಾಗಿ ಉಳ್ಳವರಿಗೆ ಹಾಗೂ ಅವರ ಬೆಂಬಲಿಗರಿಗೆ ಸರ್ಕಾರಿ ಭೂಮಿ ಮಂಜೂರು ಮಾಡಿದ್ದಾರೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅವರು ಆರೋಪಿಸಿದ್ದಾರೆ.

ತನಿಖೆಗೆ ವಿಶೇಷ ತಂಡ ರಚನೆ
ಈ ಕುರಿತು ಕಂದಾಯ ಸಚಿವರಿಗೆ ಹಾಗೂ ಕಾರ್ಯದರ್ಶಿಗಳಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತವು ತಹಶೀಲ್ದಾರ್ ವಿಜಿಯಣ್ಣ ಅವಧಿಯಲ್ಲಾದ ಎಲ್ಲಾ ಭೂ ಮಂಜೂರಾತಿಗಳ ತನಿಖೆಗೆ ಆದೇಶಿಸಿದೆ. ಕೋಲಾರ ಡಿ.ಸಿ. ಸಿ.ಸತ್ಯಭಾಮ ಅವರು ವಿಜಿಯಣ್ಣ ಅವಧಿಯಲ್ಲಾದ ಭೂ ಮಂಜೂರಾತಿಗಳ ಬಗ್ಗೆ ಕೂಲಂಕಷ ತನಿಖೆಗೆ ಆದೇಶಿಸಿದ್ದಾರೆ. ಕೋಲಾರ ಜಿಲ್ಲಾ ಪಂಚಾಯಿತಿ ಸಿಇಓ ಅಧ್ಯಕ್ಷತೆಯಲ್ಲಿ ಕೋಲಾರ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಶಾಖೆಯ ಅಧಿಕಾರಿಗಳ ತಂಡವನ್ನು ರಚನೆ ಮಾಡಿದ್ದು, ವಿಜಿಯಣ್ಣ ತಹಶೀಲ್ದಾರ್ ಆಗಿದ್ದ ಮೂರು ವರ್ಷಗಳ ಅವಧಿಯಲ್ಲಿ ಆಗಿರುವ ಭೂ ಮಂಜೂರಾತಿ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಈ ತಂಡಕ್ಕೆ ಸೂಚಿಸಲಾಗಿದೆ.

ಉಳ್ಳವರಿಗೇ ಜಮೀನು ಮಂಜೂರು?
ಅದರಂತೆ ಸಿಇಒ ರವಿಕುಮಾರ್ ನೇತೃತ್ವದ ಅಧಿಕಾರಿಗಳ ತಂಡಕ್ಕೆ ಈಗಾಗಲೇ ಕೆಲವು ಮಹತ್ವದ ದಾಖಲೆಗಳು ಸಿಕ್ಕಿದ್ದು, 574 ಎಕರೆ ಅಕ್ರಮ ಭೂ ಮಂಜೂರಾತಿ ಸೇರಿದಂತೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಉಳ್ಳವರಿಗೆ ಮಂಜೂರು ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಬಳಿ ತಹಶೀಲ್ದಾರ್ ವಿಜಿಯಣ್ಣ 70 ಎಕರೆ ಭೂಮಿ ಖರೀದಿಸಿ ರೆಸಾರ್ಟ್ ನಿರ್ಮಾಣ ಮಾಡುತ್ತಿರುವ ಕುರಿತು ಅನುಮಾನ ವ್ಯಕ್ತಗೊಂಡಿದೆ.
Recommended Video

ಮೇಲ್ನೋಟಕ್ಕೆ ರಾಜಕೀಯ ಗುದ್ದಾಟ
ಇದು ಮೆಲ್ನೋಟಕ್ಕೆ ಕೋಲಾರ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ಮಾಜಿ ಶಾಸಕ ವರ್ತೂರು ಪ್ರಕಾಶ್ ನಡುವಿನ ರಾಜಕೀಯ ಗುದ್ದಾಟ ಅನ್ನಿಸ್ತಿದೆ. ಆದರೆ, ಸರಿಯಾದ ತನಿಖೆ ನಡೆದರೆ ಸತ್ಯಾಸತ್ಯತೆ ತಿಳಿದುಬರಲಿದೆ.












Click it and Unblock the Notifications