ಕೋಲಾರದ ಸಾವಿರಾರು ಎಕರೆ ಭೂಮಿ ಕಬಳಿಸಲು ಪೈಪೋಟಿ
ಕೋಲಾರ, ಜುಲೈ 21: ಕೋಲಾರದ ಭೂಮಿ ಚಿನ್ನದ ಭೂಮಿ. ಆದರೆ ಈ ಚಿನ್ನದಂಥ ಭೂಮಿಯನ್ನು ಕಬಳಿಸಲು ಈಗ ಪೈಪೋಟಿ ಶುರುವಾಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ನ ಕೃಷ್ಣಾಪುರಂ ಬಳಿ ಚಿನ್ನದ ಗಣಿಗೆ ಸೇರಿದ ನೂರಾರು ಎಕರೆ ಭೂಮಿಯನ್ನು ಪ್ರಭಾವಿಗಳು ಲೂಟಿ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
Recommended Video
ರಾತ್ರೋರಾತ್ರಿ ಚಿನ್ನದ ಗಣಿಗೆ ಸೇರಿದ ಭೂಮಿಗೆ ಬೇಲಿ ಹಾಕಿಕೊಂಡು ಕೆಲವರು ದೇವಸ್ಥಾನ, ಚರ್ಚ್ ನಿರ್ಮಾಣ ಮಾಡಿ, ಆ ನೆಪದಲ್ಲಿ ನೂರಾರು ಎಕರೆ ಭೂಮಿ ಲಪಟಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ಚಿನ್ನದ ಗಣಿಗೆ ಸೇರಿದ ಸುಮಾರು 12,500 ಎಕರೆ ಭೂಮಿ ಇದೆ. ಹದಿನೈದು ವರ್ಷಗಳ ಹಿಂದೆ 40 ಕೋಟಿ ರೂಪಾಯಿ ಬೆಲೆ ಇದ್ದ ಈ ಭೂಮಿಯ ಬೆಲೆ ಇಂದು 45,000 ಕೋಟಿ ದಾಟಿದೆ.
ಕೋಲಾರದಲ್ಲಿ 500ರ ಸಮೀಪದಲ್ಲಿ ಕೊರೊನಾ ಸೋಂಕು; ಡಿಸಿ ಕಿವಿಮಾತು
ಹಾಗಾಗಿಯೇ ಸಾವಿರಾರು ಕೋಟಿ ಬೆಲೆ ಬಾಳುವ, ದಿಕ್ಕು ದೆಸೆಯಿಲ್ಲದ ಭೂಮಿಯ ಮೇಲೆ ಪ್ರಭಾವಿ ವ್ಯಕ್ತಿಗಳ ಕಣ್ಣು ಬಿದ್ದಿದ್ದು, ಪ್ರಭಾವಿ ರಾಜಕೀಯ ಮುಖಂಡರು ಸೇರಿದಂತೆ ಭೂಗಳ್ಳರು ತಮ್ಮ ಬೆಂಬಲಿಗರ ಹೆಸರುಗಳಲ್ಲಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಸುತ್ತಿದ್ದಾರೆ.
ಒಂದು ಅಂದಾಜಿನ ಪ್ರಕಾರ ಈವರೆಗೆ ಸುಮಾರು 2000 ಎಕರೆಯಷ್ಟು ಭೂಮಿ ಕಬಳಿಕೆಯಾಗಿದೆ. ಅದರಲ್ಲೂ ಕಳೆದ ಎರಡು ತಿಂಗಳಲ್ಲಿ ಕೃಷ್ಣಾಪುರಂ, ಘಟ್ಟಕಾಮದೇನಹಳ್ಳಿ, ಪಿಚ್ಚಹಳ್ಳಿ ಗಣಿ ಪ್ರದೇಶದಲ್ಲಿ ನಕಲಿ ದಾಖಲೆ ಸೃಷ್ಟಿಸಿ ನೂರಾರು ಎಕರೆ ಭೂಮಿ ಕಬಳಿಕೆ ಮಾಡಲಾಗಿದೆ. ಇದರಿಂದ ಭೂಮಿಯಷ್ಟೆ ಅಲ್ಲ ಈ ಭಾಗದಲ್ಲಿರುವ ಪ್ರಾಣಿ ಪಕ್ಷಿಗಳಿಗೂ ತೊಂದರೆಯಾಗುತ್ತಿದೆ. ವಿಪರ್ಯಾಸ ಎಂದರೆ, ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ.
ಇದೀಗ ಮಾಹಿತಿ ಮೇರೆಗೆ ತನಿಖೆಗೆ ಆದೇಶಿಸಲಾಗಿದೆ. ಜೊತೆಗೆ ಕೆಜಿಎಫ್ ತಹಶೀಲ್ದಾರರಿಗೆ ಸ್ಥಳ ಮಹಜರು ಮಾಡಿ ವರದಿ ನೀಡಲು ಸೂಚಿಸಲಾಗಿದೆ. ಒತ್ತವರು, ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಪ್ರವೇಶ ಮಾಡಿದ್ದೇ ಆದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.