ಕೆಜಿಎಫ್ ನಲ್ಲಿ ಅಣ್ಣಾಮಲೈ ರೌಂಡ್ಸ್ ಎಂಡ್ ಸೌಂಡ್ಸ್
ಕೋಲಾರ, ಮೇ 8: ಕೋಲಾರ ಜಿಲ್ಲೆಯ ಇಬ್ಬರು ಪ್ರಮುಖ ಮುಖಂಡರಾದ ವರ್ತೂರು ಪ್ರಕಾಶ್ ಮತ್ತು ಮಂಜುನಾಥ ಗೌಡ ಬಿಜೆಪಿಗೆ ಸೇರಿದ ಬೆನ್ನಲ್ಲೇ, ಜಿಲ್ಲೆಯ ರಾಜಕೀಯ ಚಟುವಟಿಕೆ ಗರಿಗೆದರಿದೆ. ಚುನಾವಣಾ ವರ್ಷದಲ್ಲಿ ಬಿಜೆಪಿ ಜನರ ಮತ ಸೆಳೆಯುವ ಕೆಲಸ ಆರಂಭಿಸಿದೆ.
ಈ ನಿಟ್ಟಿನಲ್ಲಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಮತ್ತು ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ಕೆ.ಅಣ್ಣಾಮಲೈ, ಜಿಲ್ಲೆಯ ಕೆಜಿಎಫ್ ನಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ತಮಿಳು ಪ್ರಭಾವವಿರುವ ಕೆಜಿಎಫ್ ನಲ್ಲಿ ಬಿಜೆಪಿ ಅಣ್ಣಾಮಲೈ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.
ಏನೋ ಹೇಳೋದು, ಆಮೇಲೆ ಹೇಳಿಕೆ ತಿರುಚಲಾಗಿದೆ ಎನ್ನುವುದು: ಯಾಕೀ ನಾಟಕ?
ಆ ಮೂಲಕ, ರಾಜ್ಯದಲ್ಲಿ ತಮಿಳರ ಮತ ನಿರ್ಣಾಯಕವಾಗಿರುವ ಪ್ರದೇಶಗಳಲ್ಲಿ ಅಣ್ಣಾಮಲೈ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಸೂಚನೆಯನ್ನು ಬಿಜೆಪಿ ನೀಡಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಣ್ಣಾಮಲೈ ಅವರನ್ನು ಕೋಲಾರ ಸಂಸದ ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್ ಬರ ಮಾಡಿಕೊಂಡಿರು.
ಕೋಲಾರ, ಮುಳಬಾಗಿಲು ಮತ್ತು ಬಂಗಾರಪೇಟೆಯಲ್ಲಿ ಆಯೋಜಿಸಲಾಗಿದ್ದ ಬೈಕ್ ರ್ಯಾಲಿಯಲ್ಲಿ ಅಣ್ಣಾಮಲೈ ಭಾಗವಹಿಸಿದರು. ಆ ವೇಳೆ, ವರ್ತೂರು ಪ್ರಕಾಶ್, ಮುನಿಸ್ವಾಮಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಸಾಥ್ ನೀಡಿದರು.
ಇದಾದ ನಂತರ ಕೋಲಾರದ ಬಂಗಾರಪೇಟೆ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಬೃಹತ್ ಬೈಕ್ ರ್ಯಾಲಿ ಮೂಲಕ ಕೆಜಿಎಫ್ಗೆ ಅಣ್ಣಾಮಲೈ ತೆರಳಿದರು.
"ಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಮ್ಮ ಗುರಿ. ಕೆಜಿಎಫ್ ನಲ್ಲಿ ಯಾವ ರೀತಿಯ ಪರಿಸ್ಥಿತಿ ಇದೆ ಎನ್ನುವುದು ನನಗೆ ಗೊತ್ತಿದೆ. ಈ ಬಾರಿ ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರಿಂದ ಕ್ಷೇತ್ರದ ಚಿತ್ರಣ ಬದಲಾಗಿದೆ. ಕಾರ್ಯಕರ್ತರ ಸಮಾವೇಶಕ್ಕೆ ಹೋಗುತ್ತಿದ್ದೇವೆ, ಅಲ್ಲಿ ಅವರನ್ನು ಉದ್ದೇಶಿಸಿ ಸಂವಾದ ನಡೆಸುತ್ತೇನೆ"ಎಂದು ಅಣ್ಣಾಮಲೈ ಹೇಳಿದರು.