ಕಾಂಗ್ರೆಸ್ ಬಿಟ್ಟು, ಜೆಡಿಎಸ್ ಸೇರುವ ವಿಚಾರ: ಕೆ.ಎಚ್.ಮುನಿಯಪ್ಪ ಸ್ಪಷ್ಟನೆ
ಬೆಂಗಳೂರು, ಜುಲೈ 6: ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ಬಿಡುವ ವಿಚಾರ, ಜಿಲ್ಲೆಯ ಇಬ್ಬರು ಮುಖಂಡರ ಕಾಂಗ್ರೆಸ್ ಸೇರ್ಪಡೆ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ.
ನಗರದಲ್ಲಿ ಮಾತನಾಡುತ್ತಿದ್ದ ಮುನಿಯಪ್ಪ, " ಈಗಾಗಲೇ ಕೋಲಾರದಲ್ಲಿ ಒಂದು ನಿಲುವು ತೆಗೆದು ಕೂಂಡಿದ್ದೇನೆ, ಕಳೆದ 28 ವರ್ಷಗಳಿಂದ ನಾನು ಸಂಸದನಾಗಿದ್ದೇನೆ, 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಕೆಲವರು ಪಕ್ಷ ಬಿಟ್ಟು ಮತ್ತೆ ಬಂದಿದ್ದಾರೆ, ಆದರೆ ನಾನು ಇಲ್ಲಿಯೇ ಗಟ್ಟಿಯಾಗಿ ನಿಂತಿದ್ದೇನೆ" ಹೇಳಿದರು.
"ನಿಷ್ಠಾವಂತ ಕಾಂಗ್ರೆಸ್ ನಾಯಕರು ಇಲ್ಲಿದ್ದೇವೆ, ಆದರೆ ಯಾವುದೇ ಆತುರದ ನಿರ್ಧಾರವನ್ನು ಮಾಡುವುದಿಲ್ಲ. ನಾನು ಯಾವುದೇ ಪಾರ್ಟಿಗೂ ಹೋಗುವುದಿಲ್ಲ, ಈ ಬಗ್ಗೆ ಯಾರೂ ಕೂಡ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು, ನಾನು ನಿಷ್ಠಾವಂತ ಕಾಂಗ್ರೆಸ್ಸಿಗ"ಎಂದು ಮುನಿಯಪ್ಪ, ಜೆಡಿಎಸ್ ಸೇರುವ ವಿಚಾರದಲ್ಲಿ ಸ್ಪಷ್ಟನೆಯನ್ನು ನೀಡಿದರು.
"ನಿಷ್ಠಾವಂತರನ್ನು ಕಾಂಗ್ರೆಸ್ ಕೈಬಿಡುವುದಿಲ್ಲ ಎಂದು ನಂಬಿದ್ದೇನೆ, ಮುಂದೆ ನಾನು ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರವಾಸ ಮಾಡುತ್ತೇನೆ, ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ನನಗೆ ಮತ ಹಾಕಿರುವ 5 ಲಕ್ಷ ಮತದಾರರಿಗೆ ಉತ್ತರ ಕೊಡಬೇಕಿದೆ, ನಾನು ಅವರ ಬಳಿ ತೆರಳಿ ಮುಂದೇನು ಮಾಡಬೇಕು ಎಂಬುದನ್ನು ಕೇಳುತ್ತೇನೆ"ಎಂದು ಮುನಿಯಪ್ಪ ಹೇಳುವ ಮೂಲಕ, ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯುವ ವಿಚಾರದಲ್ಲಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ.

ಆ ರಮೇಶ್ ಕುಮಾರ್ ಶಕುನಿ, ಅವರು ಏಕಪಾತ್ರಾಭಿನಯ ಮಾಡುತ್ತಾರೆ
"ನಾನು ಹಿಂದೆ ಹೇಳಿದ್ದನ್ನೇ ಮತ್ತೆ ಈಗ ಹೇಳುತ್ತೇನೆ, ಆ ರಮೇಶ್ ಕುಮಾರ್ ಶಕುನಿ, ಅವರು ಏಕಪಾತ್ರಾಭಿನಯ ಮಾಡುತ್ತಾರೆ. ಒಂದು ತಿಂಗಳ ಗಡುವನ್ನು ಸಿದ್ದರಾಮಯ್ಯ, ಡಿಕೆಶಿ ಹಾಗೂ ಹೈಕಮಾಂಡ್'ಗೆ ಕೊಡುತ್ತೇನೆ, ಕೆಲವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದರ ಬಗ್ಗೆ ವಿವರಣೆ ನೀಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಾದರೆ ಅವರು ಪಕ್ಷ ಸೇರಲಿ, ಬೇಡ ಎಂದು ನಾನು ಹೇಳುವುದಿಲ್ಲ. ಆದರೆ ನನ್ನನ್ನು ಸಂಪರ್ಕಿಸದೇ ಪಕ್ಷಕ್ಕೆ ಸೇರಿಸಿಕೊಂಡಿದ್ದು ಯಾಕೆ"ಎಂದು ಕೆ.ಎಚ್.ಮುನಿಯಪ್ಪ ತಮ್ಮದೇ ಪಕ್ಷದ ನಾಯಕರನ್ನು ಪ್ರಶ್ನಿಸಿದರು.

ಕೊತ್ತೂರು ಮಂಜುನಾಥ್ ಮತ್ತು ಚಿಂತಾಮಣಿ ಸುಧಾಕರ್ ಸೇರ್ಪಡೆ
"ಕಾಂಪ್ರಮೈಸ್ ಮಾಡಿಸುತ್ತೇವೆ, ಆಮೇಲೆ ಅವರನ್ನು ಸೇರಿಸಿಕೊಳ್ಳುತ್ತೇವೆ ಎಂದಿದ್ದರು. ಆದರೆ ನನ್ನ ಗಮನಕ್ಕೆ ತರದೆ ಸೇರಿಸಿಕೊಂಡಿದ್ದು ಯಾಕೆ? ನಾನು ಕೇಳುತ್ತಿರುವುದು ಇದನ್ನು ಮಾತ್ರ, ಕಾಂಪ್ರಮೈಸ್ ಮಾಡುವ ಮೊದಲೇ ಸೇರಿಸಿಕೊಂಡಿದ್ದು ಯಾಕೆ? ದೆಹಲಿಯಲ್ಲಿ ಪಕ್ಷ ಸೇರ್ಪಡೆ ಮಾಡಿಕೊಳ್ಳುವ ವೇಳೆ ನನ್ನನ್ನು ಯಾಕೆ ಕರಿದಿಲ್ಲ ಎನ್ನುವುದಷ್ಟೇ ನನ್ನ ಪ್ರಶ್ನೆ. ಕೊತ್ತೂರು ಮಂಜುನಾಥ್ ಮತ್ತು ಚಿಂತಾಮಣಿ ಸುಧಾಕರ್ ಸೇರ್ಪಡೆ ವೇಳೆ ನನಗೆ ಮಾಹಿತೀನೇ ಇಲ್ಲ"ಎಂದು ಕೆ.ಎಚ್.ಮುನಿಯಪ್ಪ ಮತ್ತೆ ಈ ವಿಚಾರದಲ್ಲಿ ತಮ್ಮ ಸಿಟ್ಟನ್ನು ತೋಡಿಕೊಂಡರು.

ಸೌಜನ್ಯಕ್ಕಾದರೂ ನನಗೆ ಕೇಳಬೇಕು ಎಂದ ಮುನಿಯಪ್ಪ
ನನ್ನ ಈ ಪ್ರಶ್ನೆಗೆ ಉತ್ತರಿಸಲು ಒಂದು ತಿಂಗಳ ಗಡುವು ಕೊಟ್ಟಿದ್ದೇನೆ. ಒಂದು ತಿಂಗಳ ಬಳಿಕ ಏನು ಮಾಡುತ್ತೇನೆ ಅನ್ನುವುದನ್ನು ಆಗ ಹೇಳುತ್ತೇನೆ. ನನಗೆ ಮತ ಹಾಕಿರುವ 5 ಲಕ್ಷ ಮತದಾರರ ಎದುರು ಹೋಗುತ್ತೇನೆ, ಅವರು ಹೇಳಿದಂತೆ ಮಾಡುತ್ತೇನೆ. ಕೆಲವರು ಪಕ್ಷ ಬಿಟ್ಟು ಹೋಗಿ ವಾಪಸ್ಸು ಬಂದಿದ್ದಾರೆ, ನಾರಾಯಣಸ್ವಾಮಿ, ನಂಜೇಗೌಡ, ಬೇರೆ ಕಡೆಯಿಂದ ಪಕ್ಷಕ್ಕೆ ಬಂದಿದ್ದಾರೆ. ರಮೇಶ್ ಕುಮಾರ ಕೂಡ ಬೇರೆ ಕಡೆಯಿಂದ ಬಂದಿದ್ದಾರೆ. ಸೌಜನ್ಯಕ್ಕಾದರೂ ನನಗೆ ಕೇಳಬೇಕು"ಎಂದು ಮುನಿಯಪ್ಪ ಅಭಿಪ್ರಾಯ ಪಟ್ಟರು.

ಮುನಿಸ್ವಾಮಿ ಸಂಸದರಾಗಿ ಆಯ್ಕೆಯಾದ ಬಳಿಕ ಗಡ್ಕರಿ ಭೇಟಿ
"ಮುನಿಸ್ವಾಮಿ ಸಂಸದರಾಗಿ ಆಯ್ಕೆಯಾದ ಬಳಿಕ ಗಡ್ಕರಿ ಭೇಟಿಯಾಗಿದ್ದರು, ಮುನಿಸ್ವಾಮಿ ಜೊತೆ ಸೇರಿ ರಮೇಶ್ ಕುಮಾರ್ ಅವರು ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ್ದಕ್ಕೆ ಭೇಟಿ ಮಾಡಿದ್ದರು, ಆಗ ಬಿಜೆಪಿ ಗೆಲ್ಲಿಸಿ ಈಗ ಕಾಂಗ್ರೆಸ್ ಗೆಲ್ಲಿಸಬೇಕು ಅಂತಿದ್ದಾರೆ. ಇದರ ಬಗ್ಗೆ ಹೈಕಮಾಂಡ್ ನಾಯಕರು ಮಾತನಾಡಬೇಕು" ಎಂದು ರಮೇಶ್ ಕುಮಾರ್ ವಿರುದ್ಧ ಮುನಿಯಪ್ಪ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡುವುದಿಲ್ಲ" ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.












Click it and Unblock the Notifications