ಚಿಕ್ಕಬಳ್ಳಾಪುರದಲ್ಲಿ ರಾಜೇಂದರ್ ಸಿಂಗ್ 'ನೀರಿನ ದೀಪಾವಳಿ'
ಚಿಕ್ಕಬಳ್ಳಾಪುರ, ಅಕ್ಟೋಬರ್ 28: ದೀಪಾವಳಿ ದೊಡ್ಡ ಹಬ್ಬ. ದಸರಾದಷ್ಟೇ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಈ ಬಾರಿ ಆರ್.ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರದ ನೀರಾವರಿ ಹೋರಾಟಗಾರರು ಹಬ್ಬದ ಆಚರಣೆಗಿಂತ ಹೊಸತೇನಾದರೂ ಮಾಡುವ ಉಮೇದಿನಲ್ಲಿದ್ದಾರೆ. ಅದಕ್ಕಾಗಿ ಹಬ್ಬದಂದು ಕೆಲವಷ್ಟು ಸಮಯ ನೀರಿನ ಕುರಿತಾದ ಆಲೋಚನೆಗೆ ಮೀಸಲಿಟ್ಟಿದ್ದಾರೆ.
2004ರಲ್ಲಿ ಕೋಲಾರ-ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ, ಇಲ್ಲಿನ ಜಲಸಂಪನ್ಮೂಲ ಕಂಡು ಬೆರಗಾಗಿದ್ದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದರ್ ಸಿಂಗ್ ಮತ್ತೊಮ್ಮೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅವರೊಂದಿಗೆ ನ್ಯಾಯಮೂರ್ತಿ ವಿ.ಗೋಪಾಲಗೌಡ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಇರುತ್ತಾರೆ. ಚಿಕ್ಕಬಳ್ಳಾಪುರದ ಎಸ್ ಜೆಸಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಬೆಳಗ್ಗೆ 10ಕ್ಕೆ ಕಾರ್ಯಕ್ರಮ ನಡೆಯಲಿದೆ.[ಕಾವೇರಿಗೆ ಸಮಸ್ಯೆಗೆ ಜಲತಜ್ಞ ರಾಜೇಂದ್ರ ಸಿಂಗ್ ಪರಿಹಾರ ಸೂತ್ರಗಳು]
ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರ ಸಿಗುವಂತೆ ಆಗಲಿ. ಶಾಶ್ವತ ನೀರಾವರಿ ಹೋರಾಟಗಾರರ ಬಹು ವರ್ಷಗಳ ಬೇಡಿಕೆ ಈಡೇರಲಿ. ರಾಜೇಂದರ್ ಸಿಂಗ್ ಅವರು ನೀರಿನ ಸಮಸ್ಯೆ ನಿವಾರಣೆಗೆ ನೈಸರ್ಗಿಕವಾದ ಶಾಶ್ವತ ಪರಿಹಾರ ನೀಡಲಿ. ಕಾರ್ಯಕ್ರಮ ಅರ್ಥಪೂರ್ಣ ಮತ್ತು ಉಪಯುಕ್ತವಾಗಲಿ ಎಂದು ಆಶಿಸೋಣ.